02 ಅಕ್ಟೋಬರ್ 2011

ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್


ರಬ್ಬರ್ ಬೆಳೆಗಾರಿಗೆ ಟ್ಯಾಪಿಂಗ್ ಬಗ್ಗೆ ಇನ್ನು ಆತಂಕ ಬೇಡ.ಅದಕ್ಕಾಗಿಯೇ ಸಹಕಾರಿ ಚಿಂತನೆಯಡಿಯಲ್ಲಿ ಒಂದು ಹೆಲ್ಪ್ ಲೈನ್ ನಡೆಯುತ್ತಿದೆ. ಹಾಗೆಂದು ಇದು ಬ್ಯಾಂಕ್ ಅಲ್ಲ. ಆದರೆ ನಾವು ಇದನ್ನು ಬ್ಯಾಂಕ್ ಅಂತಲೇ ಕರೆಯಬಹುದು.ಏಕೆಂದರೆ ಟ್ಯಾಪರ‍್ಸ್ ಸಮಸ್ಯೆ ಯಾರೇ ಇದ್ದರೂ ಅವರು ನೇರವಾಗಿ ಸಂಪರ್ಕಿಸಿದರೆ ಅವರ ಸಮಸ್ಯೆ ಪರಿಹಾರ ನಿಶ್ಚಿತ.

ಇಂದು ಚಿನ್ನದ ಬೆಳೆಯಾಗಿಯೇ ಮೂಡಿಬಂದ ರಬ್ಬರ್ ಬೆಳೆಯತ್ತ ಜಿಲ್ಲೆಯ ರೈತರು ಮನಸ್ಸು ಹೊರಳಿಸಿದ್ದರು. ಆದರೆ ಈಗ ಎಲ್ಲರಿಗೂ ಒಂದು ಚಿಂತೆ ಆರಂಭವಾದದ್ದು ರಬ್ಬರ್ ಟ್ಯಾಪಿಂಗ್‌ನದ್ದು. ಇಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ತಮಿಳು ಮೂಲ ನಿವಾಸಿಗಳು ಹಾಗೂ ಶ್ರೀಲಂಕಾದಿಂದ ಆಗಮಿಸಿದ ತಮಿಳು ಭಾಷಿಕರು ಬಹುತೇಕ ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಈ ಕಾರ್ಮಿಕರೂ ಸಾಕಾಗದೆ ಕೇರಳದ ಕಾರ್ಮಿಕರೂ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಂತೂ ಇವರದೂ ಕೊರೆತ ಕಾಡಿ ಸ್ಥಳೀಯರೂ ಕೂಡಾ ಟ್ಯಾಪಿಂಗ್ ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ ಎಲ್ಲೆಡೆ ರಬ್ಬರ್ ಬೆಳೆ ಬೆಳೆದರೆ ಟ್ಯಾಪಿಂಗ್‌ಗೆ ಕಾರ್ಮಿಕರು ಎಲ್ಲಿಂದ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಅದಕ್ಕಾಗಿ ಸಹಕಾರಿ ತತ್ತ್ವದಲ್ಲಿ ಕಾರ್ಮಿಕರ ಬ್ಯಾಂಕ್ ಆರಂಭಗೊಳ್ಳುತ್ತಿದೆ.ಅದಕ್ಕಾಗಿ ಚಿಕ್ಕ ಪ್ರಯತ್ನವೊಂದು ನಡೆಯುತ್ತಿದೆ. ಈಗಾಗಲೇ ಈ ವ್ಯವಸ್ಥೆ ಬಳಸಿಕೊಂಡವರು ಖುಷಿ ಪಟ್ಟಿದ್ದಾರೆ.





ಇಂತಹ ಹೊಸ ಕಲ್ಪನೆಗೆ ಮುಂದಾದವರು ಸುಳ್ಯ ತಾಲೂಕಿನ ಪ್ರದೀಪ್ ಚಿಲ್ಪಾರ್. ಇವರು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಚಿಕ್ಕ ಸಹಕಾರಿ ಸಂಘಟನೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದಾರೆ.ಇದಕ್ಕಾಗಿ ಇವರು ಕಳೆದ ಒಂದು ವರ್ಷದಿಂದ ಶ್ರಮ ವಹಿಸಿ ಇಂದು ಸುಳ್ಯ ತಾಲೂಕಿನಲ್ಲಿ ಸುಮಾರು 60 ಜನ ಕಾರ್ಮಿಕರು ವಿವಿದೆಡೆ ರಬ್ಬರ್ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರು ಎಲ್ಲಿಂದ ಎಂಬ ಪ್ರಶ್ನೆ ಮೂಡಬಹುದು. ಪ್ರದೀಪ್ ಅವರ ಸಂಪರ್ಕದ ಮೂಲಕ ಒರಿಸ್ಸಾ , ಜಾರ್ಖಂಡ್ ಹಾಗೂ ಬಿಹಾರ ಪ್ರದೇಶದ ಜನರು ಇಲ್ಲಿ ರಬ್ಬರ್ ಕಾರ್ಮಿಕರು.

ಕಾರ್ಮಿಕರು ಎಲ್ಲಿಂದ ಮತ್ತು ಹೇಗೆ ?

ಇಲ್ಲಿ ರಬ್ಬರ್ ಕಾರ್ಮಿಕರ ಅಭಾವ ತೋರಿದಾಗ ತನ್ನ ಸಂಪರ್ಕದ ಮೂಲಕ ಕಾರ್ಮಿಕರನ್ನು ಹುಡುಕುವ ಪ್ರಯತ್ನವನ್ನು ಪ್ರದೀಪ್ ಮಾಡಿದರು. ಆಗ ಅವರಿಗೆ ಹೊಳೆದದ್ದು ಒರಿಸ್ಸಾ. ಅಲ್ಲಿನ ಬಹುಜನರಿಗೆ ಕೆಲಸವೇ ಇಲ್ಲ. ಅಂತಹ ಜನರಿಗೆ ಅಲ್ಲೇ ರಬ್ಬರ್ ಬಗ್ಗೆ ತರಬೇತಿ ನೀಡಿ ಇಲ್ಲಿಯೂ ವಿಶೇಷ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ಗೆ ಬಳಸಿಕೊಳ್ಳಲಾಯಿತು. ಬಹುಬೇಗನೆ ರಬ್ಬರ್ ಸಂಬಂಧಿತ ಕೆಲಸಗಳನ್ನು ಕಲಿತುಕೊಂಡ ಕಾರ್ಮಿಕರು ಈಗ ನುರಿತವರಾಗಿದ್ದಾರೆ. ಸದ್ಯಕ್ಕೆ ಒರಿಸ್ಸಾದ ಸಂಬಲ್‌ಪುರ್ ಸೇರಿದಂತೆ ಜಾರ್ಖಂಡ್‌ನ ಗಡಿಭಾಗದ ಜನರು ಈ ಕೆಲಸಕ್ಕೆ ಬರುತ್ತಿದ್ದಾರೆ. ಈಗ ಸುಳ್ಯ ತಾಲೂಕಿನ ವಿವಿಧ ರಬ್ಬರ್ ತೋಟಗಳಲ್ಲಿ 60 ಜನ ಕಾರ್ಮಿಕರು ಇದ್ದಾರೆ. ಇನ್ನಷ್ಟು ಬೇಡಿಕೆ ಇದ್ದು ಸದ್ಯದಲ್ಲೇ 300 ಜನರಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.

ಹೇಗೆ ಇವರು ಕೆಲಸ ಮಾಡುತ್ತಾರೆ ?

ಇಲ್ಲಿ ರಬ್ಬರ್ ಬೆಳೆಗಾರ ಸಂಪರ್ಕಿಸಬೇಕಾದ್ದು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಸಹಕಾರಿ ಗೆಳೆಯ ಪ್ರದೀಪ್ ಅವರನ್ನು. ಆದರೆ ಇಲ್ಲಿ ಒಂದು ಬೇಡಿಕೆ ಇದೆ. ಏನೆಂದರೆ ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರಬ್ಬರ್ ಮರ ಬೇಕು. ಅಂದರೆ ಒಂದು ತೋಟದಲ್ಲಿ 2 ಜನ ಕಾರ್ಮಿಕರನ್ನು ಬಿಡಲೇಬೇಕಾಗುತ್ತದೆ. ಏಕೆಂದರೆ ಅವರು ಈ ಊರಿಗೆ ಹೊಸಬರು. ಹೀಗಾಗಿ ದಿನಕ್ಕೆ ಕನಿಷ್ಟ 600 ಮರ ಅಂದರೆ ಒಟ್ಟು 1200 ರಬ್ಬರ್ ಮರಗಳು ಇರುವ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕಾರ್ಮಿಕರು ತೋಟದಲ್ಲಿ ಟ್ಯಾಪಿಂಗ್‌ನಿಂದ ತೊಡಗಿ ರಬ್ಬರ್ ಶೀಟ್ ಮಾಡುವುದು , ರಬ್ಬರ್ ರೋಗಗಳನ್ನು ಪತ್ತೆ ಮಾಡುವುದು , ಅವುಗಳ ಆರೈಕೆ ಹೀಗೆ ಎಲ್ಲವನ್ನೂ ಅವರೇ ಮಾಡುತ್ತಾರೆ. ಇವರನ್ನು ನೋಡಿಕೊಳ್ಳಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಪ್ರದೀಪ್ ಅಥವಾ ಅವರ ಸೂಪರ್‌ವೈಸರ್‌ಗಳು ಆಗಮಿಸುತ್ತಾರೆ.15 ರಿಂದ 20 ಜನರಿಗೆ ಒಬ್ಬರಂತೆ ಸೂಪರ್‌ವೈಸರ್‌ಗಳು ಇದ್ದಾರೆ. ಆದರೆ ಕಾರ್ಮಿಕರ ಬಗ್ಗೆ ಸಮಾಧಾನ ಇಲ್ಲದೇ ಇದ್ದರೆ ಬೇರೆ ಕಾರ್ಮಿಕರನ್ನು ವ್ಯವಸ್ಥೆ ಮಾಡುತ್ತಾರೆ.ಹಾಗೆಂದು ಬೆಳೆಗಾರರು ಕೂಡಾ ಅವರತ್ತ ಲಕ್ಷ್ಯ ನೀಡಬೇಕಾಗುತ್ತದೆ. ಏಕೆಂದರೆ ಯಾವುದೋ ಊರಿನಿಂದ ಬಂದವರು ಎಂಬ ಧೋರಣೆಯ ಬದಲು ನಮ್ಮವರೇ ಎಂಬ ಭಾವನೆ ಬೆಳೆಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಕೆಲ ಕಾರ್ಮಿಕರು ಕನ್ನಡ , ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಾರ್ಮಿಕರ ವೇತನ ಎಲ್ಲವನ್ನೂ ಕೂಡಾ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಮೂಲಕವೇ ನೀಡಲಾಗುತ್ತದೆ.

ಬೆಳೆಗಾರರು ಏನು ಹೇಳುತ್ತಾರೆ ?

ಈಗಾಗಲೇ ಸುಳ್ಯ ತಾಲೂಕಿನಲ್ಲಿ ಇದೇ ಚಿಂತನೆಯಡಿಯಲ್ಲಿ ಸುಮಾರು ೨೦ ರಿಂದ ೩೦ ಕಡೆಗಳಲ್ಲಿ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.ಎಲ್ಲರೂ ಕೂಡಾ ಖುಷಿ ಪಟ್ಟಿದ್ದಾರೆ. ಮರ್ಕಂಜದ ರಬ್ಬರ್ ಬೆಳೆಗಾರ ರಮೇಶ್ ಕಾಟೂರಾಯ ಪ್ರಕಾರ , ಇದೊಂದು ಉತ್ತಮ ಪ್ರಯತ್ನ.ಈ ಮೂಲಕ ರಬ್ಬರ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಬೆಳೆಗಾರರಿಗೂ ಇದರಿಂದ ಪ್ರಯೋಜನವಾಗಿದೆ ಎನ್ನುತ್ತಾರೆ.ಇನ್ನೊಬ್ಬ ರಬ್ಬರ್ ಬೆಳೆಗಾರರ ಮರ್ಕಂಜದ ಮಾಪಲತೋಟ ಕೃಷ್ಣ ಭಟ್ , ಈ ಕಾರ್ಮಿಕರದ್ದು ಉತ್ತಮವಾದ ಕೆಲಸವಾಗಿರುತ್ತದೆ. ಊರಿನ ಕಾರ್ಮಿಕರಷ್ಟೇ ಗುಣಮಟ್ಟದ ಕೆಲಸ. ತಿಂಗಳಿಗೆ ಒಂದೇ ಒಂದು ರಜೆ ಮಾಡದೆ ಕೆಲಸ ಮಾಡುತ್ತಾರೆ. ಆದರೆ ಭಾಷೆಯದ್ದು ಮಾತ್ರಾ ಈಗ ಸಮಸ್ಯೆ.ಇದೊಂದು ಸಮಸ್ಯೆ ಹೊರತುಪಡಿಸಿದರೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷ್ಣ ಭಟ್.

ಕೇರಳದಲ್ಲಿ ಇದೆ ರಬ್ಬರ್ ಬ್ಯಾಂಕ್ :

ಇಲ್ಲಿ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಪ್ರದೀಪ್ ಅವರು ಬೆಳೆಗಾರರ ಅನುಕೂಲಕ್ಕಾಗಿ ಸಹಕಾರಿ ಮನೋಭಾವದಿಂದ ಈ ವ್ಯವಸ್ಥೆಯ ಮೂಲಕ ಕಾರ್ಮಿಕರ ಕೊರತೆ ನೀಗುವ ಪ್ರಯತ್ನ ಮಾಡಿದ್ದಾರೆ.
ಆದರೆ ಕೇರಳದಲ್ಲಿ ಈಗಾಗಲೇ ಇಂತಹದ್ದೇ ಬ್ಯಾಂಕ್ ರಚನೆಯಾಗಿದೆ. ಅಲ್ಲಿ ರಬ್ಬರ್ ಬೋರ್ಡ್‌ನ ಬೆಳೆಗಾರರ ಸಂಘದ ಮೂಲಕ ಕಾರ್ಮಿಕರ ಬ್ಯಾಂಕ್ ರಚನೆಯಾಗಿದೆ. ಅದಕ್ಕೆ ಬೋರ್ಡ್‌ನಿಂದಲೂ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸದ್ಯ ಯಾವುದೇ ಬ್ಯಾಂಕ್ ರಬ್ಬರ್ ಬೋರ್ಡ್ ಮೂಲಕ ರಚನೆಯಾಗಿಲ್ಲ. ಇದರಿಂದ ಕೇರಳದಲ್ಲಿ ಸಾಕಷ್ಟು ಪ್ರಯೋಜನವಾಗಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಹೇಳುತ್ತಾರೆ.

ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ :

ಇದ ರೀತಿಯ ವ್ಯವಸ್ಥೆಯನ್ನು ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂಬುದು ಪ್ರದೀಪ್ ಮಾತು. ಮೂಲತ: ಈ ಕಾರ್ಮಿಕರು ಗದ್ದೆಯ ಕೆಲಸಗಾರರು. ಸ‌ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಪ್ರಯೋಗಿಕವಾಗಿ ಗದ್ದೆಯೊಂದರಲ್ಲಿ ಸದ್ಯದಲ್ಲೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ಬಳಿಕ ಮುಂದೆ ಆಸಕ್ತ ರೈತರಲ್ಲಿಗೆ ಕಳುಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 3000 ಕಾರ್ಮಿಕರನ್ನು ಈ ಕಡೆ ತರಿಸಿ “ನಮ್ಮ ಗದ್ದೆ , ನಮ್ಮ ಅಕ್ಕಿ” ಎನ್ನುವ ಚಿಂತನೆಯ ಮೂಲಕ ತಾಲೂಕಿನಲ್ಲೂ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ನಡೆಸಲಾಗುವುದು ಎಂಬುದು ಪ್ರದೀಪ್ ಕನಸು. ಆದರೆ ಈ ಕಾರ್ಮಿಕರು ಅಡಿಕೆ ತೋಟಕ್ಕೆ ಒಗ್ಗಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಏಕೆಂದರೆ ತೋಟದ ಕೆಲಸವು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ. ಹೀಗಾಗಿ ಇದೆಲ್ಲವೂ ತರಬೇತಿಯಿಂದ ಅಸಾಧ್ಯ.

ಒಟ್ಟಿನಲ್ಲಿ ಕಾರ್ಮಿಕರ ಕೊರತೆಯಿಂದ ಚಿಂತಿತರಾಗಿದ್ದ ರಬ್ಬರ್ ಬೆಳೆಗಾರರಿಗೆ ಇಂದೊಂದು ಬೆಳವಣಿಗೆ ಆಶಾದಾಯಕವಾಗಿದೆ.ಕಾರ್ಮಿಕರಿಗಾಗಿ ಪರಿತಪಿಸುತ್ತಿದ್ದ ಬೆಳೆಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು. ಸಹಕಾರಿ ಮನೋಭಾವದ ಮೂಲಕ ಬೆಳೆಗಾರರಿಗೆ ಇನ್ನಷ್ಟು ಹೊಸ ನಿರೀಕ್ಷೆಗಳು ಚಿಗುರಿದಂತಾಗಿದೆ.


(ಈ ಸುದ್ದಿಯ ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. )

01 ಅಕ್ಟೋಬರ್ 2011

ಆತ ಹೇಳಿದ ಕತೆ. .

ನನ್ನ ಸ್ನೇಹಿತನೊಬ್ಬ ಒಂದು ಕತೆ ಬಿಡಿಸಿಟ್ಟ. ಅದು ನಮ್ಮ ಊರ ಭಾಷೆಯಲ್ಲಿ ಹೇಳುವುದಾದರೆ ಮಾತನಾಡಲೇಬಾರದು.ಮಾತನಾಡಿದರೆ ಆತ ಕೆಟ್ಟವನು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ ಅಂತ ನಾನು ಅಂದುಕೊಂಡಿದ್ದೇನೆ.

ಆತ ಹೇಳಿದ ಸಂಗತಿ , ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಇನ್ನೂ ಮಕ್ಕಳಾಗಿಲ್ಲ. ಅದಕ್ಕಾಗಿ ದೇವರು , ಮಂತ್ರ , ಪೂಜೆ , ಹರಕೆ ಹೀಗೆ ಎಲ್ಲವೂ ಆಗಿತ್ತು. ಆದರೆ ಮತ್ತೂ ಮಕ್ಕಳಾಗಿಲ್ಲ. ಕಾರಣ ಏನು ಎಂದು ವೈಜ್ಞಾನಿಕವಾಗಿ ಕಂಡುಹುಡುಕುವ ಕೆಲಸವನ್ನೂ ಮಾಡಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಲು ಬಂದಿದ್ದರಂತೆ. ಅಲ್ಲಿ ಅಂತಹ ಜನರನ್ನೇ ಮೋಸ ಮಾಡುವ ಗುಂಪೊಂದು ಇತ್ತು. ಆಸೆ ಹುಟ್ಟಿತು ಮತ್ತೂ ಒಂದಿಪ್ಪತ್ತು ಸಾವಿರ ಖರ್ಚು ಮಾಡಿದರು. ಆದರೂ ಪ್ರಯೋಜನವಿಲ್ಲ. ಕೊನೆಗೆ ಯಾರೋ ಹೇಳಿದಂತೆ ಸರಿಯಾದ ವೈದ್ಯರಲ್ಲಿ ಗುಪ್ತವಾಗಿ ಮಾತನಾಡಿ , ಆಪ್ತ ಸಮಾಲೋಚನೆ ಮಾಡಿ ಎಂದು ಸಲಹೆ ನೀಡದರಂತೆ. ಅಂತೂ ಹೆಂಡತಿಯ ಒತ್ತಾಯಕ್ಕೆ ಆಪ್ತ ಸಮಾಲೋಚನೆಗೆ ಹೋದರಂತೆ. ಆಗ ತಿಳಿಯಿತು ಅವನಿಗೇ ಚಿಕ್ಕದೊಂದು ಸಮಸ್ಯೆ.ಅದಕ್ಕಾಗಿ ಇಷ್ಟು ವರ್ಷ ಕಾಯಲೇ ಬೇಡವಿತ್ತು. ಚಿಕ್ಕದೊಂದು ಸರ್ಜರಿ ಮಾಡಿಸಿದರೆ ಮುಗೀತು ಎಂದರಂತೆ ವೈದ್ಯರು. ಒಂದು ವಾರದ ನಂತರ ಅದೂ ಆಯಿತು. ಆ ಬಳಿಕ ಅವಳು ಮಗುವನ್ನೂ ಪಡೆದಳು. ಇದು ಅವರೊಬ್ಬರ ಕತೆ ಅಲ್ಲ. ಅದೆಷ್ಟೋ ಜನರ ಕತೆ.

ಆದರೆ ಇಲ್ಲಿ ವಿಷಯ ಏನು ಗೊತ್ತಾ ? ಆಪ್ತ ಸಮಾಲೋಚಕರದ್ದೇ. ಅವನು ಅಂತಾನೆ ಈ ಸಮಾಲೋಚಕರು ಯಾರು ಎಲ್ಲಿರುತ್ತಾರೆ ಅಂತಾನೆ ಹಲವರಿಗೆ ಗೊತ್ತೇ ಇರುವುದಿಲ್ಲ. ಅವರಲ್ಲಿ ಕೆಲವರು ಸಮಾಲೋಚನೆಗಾಗಿ ಶುಲ್ಕವನ್ನೂ ವಿಧಿಸುತ್ತಾರೆ. ಅದೂ ಪರವಾಗಿಲ್ಲ. ಆತ ಹೇಳಿದ ಈಗ ಅದಕ್ಕಾಗಿಯೇ ಕೆಲವು ಬ್ಲಾಗ್‌ಗಳು ಶುರುವಾಗಿದೆ.ಅವೂ ಕೂಡಾ ಪ್ರಯೋಜನವಾದೀತು ಅಂತಾನೆ ಆತ.ಅದರ ಲಿಂಕ್ ಇಲ್ಲಿದೆ (http://www.dehaveene.blogspot.com/) ಬೇಕಾದವರು ನೋಡಬಹುದು. ಅದರ ಜೊತೆಗೆ ಆತ ಹೇಳಿದ ಈ ಸಮಾಲೋಚಕರಲ್ಲಿ ಕೆಲವರು ಗಂಟೆಗೆ 1 ಸಾವಿರ ರೂಪಯಿ ಶುಲ್ಕ ವಿಧಿಸುತ್ತಾರೆ ಅಂತೆ. .!.

ಇದು ಅಸಹ್ಯ ಅಂತ ಭಾವಿಸಬಾರದು. ಏಕೆಂದರೆ ಬದುಕು ಪೂರ್ತಿಯಾಗಬೇಕಾದರೆ ಅದೂ ಬೇಕು. ಅದೇ ಬದುಕು ಆಗಬಾರದು ಅಷ್ಟೆ. ಅದಿಲ್ಲದೇ ಇದ್ದಿದ್ದರೆ ಜಗತ್ತು ಯಾವಾಗಲೋ ಮುಗಿದುಹೋಗುತ್ತಿತ್ತು ಅಲ್ಲವೇ. ಅನಾದಿ ಕಾಲದ ದೇವಸ್ಥಾನದ ಕೆತ್ತನೆಗಳಲ್ಲೂ ಅದ್ಭುತವಾಗಿ ಹೇಳಲಾಗುತ್ತಿತ್ತು.


20 ಆಗಸ್ಟ್ 2011

ಯಾರು ಭ್ರಷ್ಟಾಚಾರಿ . . ?


ಆತನೊಬ್ಬ ಪದವೀಧರ. ಸಣ್ಣ ನೌಕರಿಯಲ್ಲೂ ಇದ್ದಾನೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೆಕು ಅಂತಾನೆ.ಅದರ ಬಗ್ಗೆ ಪ್ರತಿ ದಿನವೂ ಮಾತನಾಡುತ್ತಾನೆ. ಈಗಂತೂ ಯಾವಾಗಲೂ ಅದೇ ಮಾತು. ಆದರೆ . . ಆತನೇ ಹೇಳಿದ ಸಂಗತಿಯೊಂದು,

ಇತ್ತೀಚೆಗೆ ಒಂದು ಘಟನೆ ನಡೆಯಿತು. ಆತನಿಗೊಂದು ಜನ್ಮ ದಿನಾಂಕದ ದೃಢೀಕರಣ ಪತ್ರ ಬೇಕಾಯಿತು. ಅದಕ್ಕಾಗಿ ಆತ ಸುಮಾರು 60 ಕಿಲೋಮೀಟರ್ ಹೋಗಬೇಕು. ಬೆಳಗ್ಗೆ ಬಸ್ಸಲ್ಲಿ ಹೋದರೆ ಆತ ಬರುವಾಗ ಹೆಚ್ಚೂಕಮ್ಮಿ ಸಂಜೆಯಾಗುತ್ತದೆ. ಅದೂ ಅಲ್ಲದೆ ಆತನ ಒಂದು ದಿನ ರಜೆಯೂ ಹಾಕಬೇಕಾಗುತ್ತದೆ.

ಹಾಗೇ ಆತ ಅಂದೊಂದು ದಿನ ಹೊರಟೇ ಬಿಟ್ಟ. ಅದು ಪುರಸಭೆ. ಹೋದವನೇ ತನ್ನ ದಾಖಲೆ ಬೇಕೆಂದು ಕೇಳಿದ. ಕುಳಿತುಕೊಳ್ಳಿ ಸ್ವಲ್ಪ, ಎಂಬ ಉತ್ತರ ಆ ಅಧಿಕಾರಿಯದ್ದು. ಸ್ವಲ್ಪ ಹೊತ್ತಾದ ಮೇಲೆ ಒಂದು ಅರ್ಜಿ ಕೊಡಿ ಎಂದು ಹೇಳಿದ ಅಧಿಕಾರಿ. ಅದನ್ನೂ ಬರೆದುಕೊಟ್ಟಾಯಿತು. ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ ಅಧಿಕಾರಿ. ಇವತ್ತಿಗೆ ಆಗೋದಿಲ್ಲ ಎಂದ.

ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ ಎನ್ನುವ ಉತ್ತರ.

ಇನ್ನೂಮ್ಮೆ, ಸ್ವಲ್ಪ ಇವತ್ತೇ.. . ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು.

ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . .!.

ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ.

***************

ಈ ಘಟನೆಯ ನಂತರ ಆತ ಹೇಳುತ್ತಾನೆ ,

ನನಗೆ 100 ರೂಪಾಯಿ ಪ್ರಶ್ನೆ ಅಲ್ಲ. ನೋಡಿ ನನಗೆ ಬಸ್ಸಿಗೆ ಹೋಗಿ ಬರಲು 70 ರೂಪಾಯಿ ಬೇಕು. ಅದರ ಜೊತೆಗೆ ಇತರ ಖರ್ಚು ಅಂತ 30 ರೂಪಾಯಿ ಆಗುತ್ತೆ. ಇನ್ನು ಒಂದು ದಿನ ರಜೆ ಬೇರೆ ಅದಕ್ಕೆ ಕನಿಷ್ಟ 230 ರೂಪಾಯಿ ಲಾಸ್ ಆಗುತ್ತದೆ. ಹಾಗಿರುವಾಗ ನಾನು 100 ರೂಪಾಯಿ ಆತನಿಗೆ ಕೊಟ್ಟರೆ ಏನಾಯಿತು. ಇನ್ನೊಮ್ಮೆ ಹೋಗಲು ಉಳಿಯಿತಲ್ಲಾ , ಹಣವೂ, ಶ್ರಮವೂ ಉಳಿಯತಲ್ಲಾ ಅಂತ ಹೇಳುತ್ತಾನೆ ಆತ.

ಈಗ ಭ್ರಷ್ಟಾಚಾರಿ ಯಾರು ?.ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ?.

ಈಗ ನನಗೆ ನೆನೆಪಾಗುತ್ತದೆ , ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಇತ್ತೀಚೆಗೆ ಹೇಳಿದರು , ಕೊಡುವ ಕೈಗಳು ಕಡಿಮೆಯಾದಾಗ ಕೊಳ್ಳುವ ಕೈಗಳು ಕಡಿಮೆಯಾಗುತ್ತದೆ. ಕೊನೆಗೇ ಅದೇ ಇಲ್ಲವಾಗುತ್ತದೆ. ಹಾಗಾಗಿ ಇಂದು ಎಲ್ಲೆಡೆ ನಡೆಯುತ್ತಿರುವ ಧರಣಿ ಜೊತೆಗೆ ನಮ್ಮೊಳಗೇ ಕೂಡಾ ಧರಣಿಯಾಗಬೇಕು ಎಂದು ಹೇಳಿದ್ದು ಅನುರಣಿಸುತ್ತಲೇ ಇದೆ.



31 ಜುಲೈ 2011

ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?

ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು.

ಮೊನ್ನೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ರಾಜಕೀಯದ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತು. ಕರ್ನಾಟಕದ ಬಿಜೆಪಿಗೆ ಇದು ಹೊಸದಲ್ಲ ಬಿಡಿ.ಇಲ್ಲಿ ಶಿಸ್ತಿನ ಪಕ್ಷಕ್ಕೆ ಇದೆಲ್ಲಾ ಮಾಮೂಲು ಅಂತಾಗಿದೆ. ಹಾಗಿದ್ದರೂ ಈ ಬಾರಿ ಮಾತ್ರಾ ಗಂಭೀರ ವಿಚಾರ ಇದು. ಲೋಕಾಯುಕ್ತರು ಸಲ್ಲಿಸಿದ್ದ ಗಣಿ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರೂ ಇದೆ. ಹಾಗಾಗಿ ಈಗಂತೂ ನೈತಿಕತೆಯ ಪ್ರಶ್ನೆ. ಇದುವರೆಗೆ ಕರ್ನಾಟಕದ ಬಿಜೆಪಿಯಲ್ಲಿ ಇದು ಇದ್ದಂತೆ ಕಂಡುಬಂದಿರಲಿಲ್ಲ. ಆದರೆ ಈಗ ಇಡೀ ದೇಶದ ಜನ ನೋಡುತ್ತಿದ್ದಾರೆ ಈ ವರದಿಯನ್ನು ಅದರ ಜೊತೆಗೆ ಭ್ರಷ್ಠಾಚಾರದ ಬಗ್ಗೆ ಸಾಮಾನ್ಯ ಮನುಷ್ಯನೂ ಮಾತನಾಡುತ್ತಿದ್ದಾನೆ ಹಾಗಾಗಿ ಸರಕಾರಕ್ಕೆ ಅದಕ್ಕಿಂತಲೂ ಹೆಚ್ಚು ದೇಶದ ಬಿಜೆಪಿಗೆ ಇದೊಂದು ಮುಖ್ಯ ವಿಷಯ. ಹಾಗಾಗಿ ಇದು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಿ.

ವಿಷಯ ಅದಲ್ಲ.
ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಎಂಬ ಖ್ಯಾತಿಗೂ ಬಂದಿತು. ಆಗ ಎಷ್ಟು ಜನ ಸಂತಸ ಪಟ್ಟವರು. ಮೊನ್ನೆ ನನಗೊಬ್ಬರು ಹಿರಿಯರು ಹೇಳಿದರು , ಅಂದು 1978 - 80 ರ ಸುಮಾರಿಗೆ ಒಂದೇ ಒಂದು ಸೀಟು ಇದ್ದಿರಲಿಲ್ಲ ಬಿಜೆಪಿಗೆ , ಜನಸಂಘಕ್ಕೆ , ಆಗ ನಾವು ನಮ್ಮ ತೋಟ ಮಾರಿ ಪಾರ್ಟಿಗಾಗಿ ಕೆಲಸ ಮಾಡಿದ್ದೆವು. ಅದು ಮಾತ್ರವಲ್ಲ ಎಷ್ಟು ಜನ ಇದರಲ್ಲಿ ಹೋರಾಡಿದ್ದರು , ಆಗ ಅಧಿಕಾರ ಎಂಬುದು ನಮಗೆ ಕನಸಾಗಿತ್ತು ಎಂದು ಅವರು ವಿವರಿಸುತ್ತಿದ್ದರು , ಅದೆಷ್ಟೂ ಜನ ನ್ಯಾಯಕ್ಕಾಗಿ ಹೋರಾಡಿದ್ದಾರೆ ಇದೇ ಇಂದಿನ ಬಿಜೆಪಿಯಲ್ಲಿ, ಆದರೆ ಅದು ಅಧಿಕಾರಕ್ಕೆ ಅಲ್ಲ , ಊರ ಜನರಿಗಾಗಿ. ಹೀಗಿದ್ದ ಪಕ್ಷ ಇವತ್ತು ನೋಡಿದರೆ ಅಧಿಕಾರಕ್ಕಾಗಿಯೇ ಉಳಿದುಕೊಂಡಂತಿದೆ ಎನ್ನುತ್ತಾರೆ ಅವರು.ಆಗ ಇದೇ ಪಾರ್ಟಿಯಲ್ಲಿ ಜಾತಿ ಎಂಬುದು ಇದ್ದೇ ಇರಲಿಲ್ಲ.ಎಲ್ಲರೂ ಸಮಾನರು. ಒಬ್ಬ ನಾಯಕ.ಅವನ ಮಾತೇ ಅಂತಿಮ. ಆದರೆ ಎಲ್ಲರೂ ಜೊತೆಯಾಗಿ ಕೂತು ಚರ್ಚಿಸಿ ಮುಂದಿನ ನಡೆ ಇತ್ತು. ಆ ಬಳಿಕ ಎಲ್ಲವೂ ನಾಯಕ ಹೇಳಿದಂತೆ.ನಾಯಕನೇ ಮುಂದೆ.ಸುಳಿದವರು ಆತನ ಹಿಂದೆ. ಆದರೆ ಇವತ್ತು ನೋಡಿ ಎಲ್ಲರೂ ನಾಯಕರೇ , ಜಾತಿ ಜಾತಿ ಅಂತ ಪಕ್ಷದೊಳಗ ಜಾತಿ ನಾಯಕರು ಆಗಿ ಬಿಟ್ಟಿದ್ದಾರೆ.

ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು.

ಅವರು ಹೇಳಿದ್ದು ನಿಜ ಅನ್ನಿ.

ಹಿಂದೆಲ್ಲಾ ಬಿಜೆಪಿಯಲ್ಲಿ ಓಟಿಗೆ ನೋಟು ಕೊಡುತ್ತಿರಲಿಲ್ಲ. ಕಾರ್ಯಕರ್ತರೆಲ್ಲರೂ ಅವರೇ ಕೈಯಿಂದ ದುಡ್ಡು ಹಾಕಿ ಚುನಾವಣೆಗೆ ಶ್ರಮಿಸುತ್ತಿದ್ದರು. ಆದರೆ ಇಂದು ಅದೇ ಬಿಜೆಪಿಯಲ್ಲಿ ದುಡ್ಡು ಕೊಡದೆ ಚುನಾವಣೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಳಿಯುವುದಿಲ್ಲ. ಅದು ಬಿಡಿ ಅಂದು ಒಂದು ವಾರ್ಡ್‌ನಲ್ಲಿ ಇಷ್ಟೇ ಓಟು ಬಿಜೆಪಿಗೆ ಅಂತ ಲೆಕ್ಕ ಮಾಡಿ ಹೇಳುತ್ತಿದ್ದರು ಕಾರ್ಯಕರ್ತರು , ಆದರೆ ಇಂದು ಈ ಲೆಕ್ಕ ಎಲ್ಲಾ ತಲೆಕೆಳಗಾಗಿದೆ. ಹಾಗೆ ಲೆಕ್ಕ ಮಾಡುವವರೂ ಇಲ್ಲ , ಕೇಳುವವರೂ ಇಲ್ಲ.

ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ?. ಯಾಕೆಂದರೆ ಇಷ್ಟಲ್ಲಾ ರಾಜಕೀಯ ಪ್ರಹಸನಗಳು ನಡೆಯುತ್ತಿದ್ದರೂ ಹೈಕಮಾಂಡ್ ಯಾಕೆ ಸುಮ್ಮನೆ ಇತು. ನೋಡಿ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಏನು ಮಾಡಿತು? , ಇತ್ತ ನೋಡಿ ಕೇರಳದಲ್ಲಿ ಅಚ್ಯುತಾನಂದನ್ ಹಾಗೂ ಪಿಣರಾಯಿ ನಡುವಿನ ಜಗಳದಲ್ಲಿ ಏನು ಮಾಡಿತು ಅವರ ಹೈಕಮಾಂಡ್ ? ಅವುಗಳೆಲ್ಲಾ ಅಷ್ಟು ಬಲಾಡ್ಯವಾಗಿದ್ದರೆ ಬಿಜೆಪಿ ಹೈಕಮಾಂಡ್ ಯಾಕೆ ದುರ್ಬಲವಾಗಿದೆ ಅನ್ನೋದೇ ವಿಶೇಷ. . !

ಏನೇ ಇರಲಿ. ಶಿಸ್ತಿನ ಪಕ್ಷ , ಸಂಘಪರಿವಾರದ ಮಾರ್ಗದರ್ಶನದಲ್ಲಿ ಬೆಳೆಯುವ ಪಕ್ಷದಲಿ ಹೀಗೆ ಆಗಬಾರದಿತ್ತು.ಈಗ ಆದದ್ದಕ್ಕೆ ಮುಂದೆ ಪ್ರಾಯಶ್ಚಿತ್ತ ಇದ್ದೇ ಇದೆ ಬಿಡಿ.

23 ಜುಲೈ 2011

ಈತ ನಮ್ಮೂರಿನ ಮಿತ್ರ . .

ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!




ನಮ್ಮಲ್ಲೀಗ ಆಟಿ ತಿಂಗಳು.

ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!

ನಮ್ಮಲ್ಲೆಲ್ಲಾ ಆಟಿ . . ಅಲ್ಲೆಲ್ಲಾ ಹೇಳುವ ಆಷಾಡ ಮಾಸ.

ಇಲ್ಲಿ ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.

ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.


ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ

ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.

17 ಜೂನ್ 2011

ಇವರಿಗೆ ಮಳೆಯೇ ಛಾವಣಿ . . . !




ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.

ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!.

ಇದು ಇವರ ಸ್ಟೋರಿ . . , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.

ಊಟಕ್ಕೆಂದು ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.

ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.

09 ಜೂನ್ 2011

ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .

ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .

ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.

ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ. ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ. ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.

ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು.

ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.

ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.

ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.

10 ಮೇ 2011

ಈ ದಾರಿ .

ಅವನು ಸುಮಾರು 3 ವರ್ಷದ ಬಾಲಕ. ಆ ಮನೆಗೆ ನಾನು ಖಾಯಂ ಅತಿಥಿ. ನನ್ನಲ್ಲಿ ಅತ್ಯಂತ ಸಲಿಗೆಯಿಂದ ಆತ್ಮೀಯತೆಯಿಂದ ಮಾತನಾಡುವ ಆ ಹುಡುಗ ನನಗೆ ಏನಿದ್ದರೂ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ. ತನ್ನೆಲ್ಲಾ ವಸ್ತುಗಳನ್ನು ಬಿಡಿ ಬಿಡಿಯಾಗಿ ತೋರಿಸಿ ಖುಶಿ ಪಡುತ್ತಿದ್ದ.

ಮೊನ್ನೆ ಯಾಕೋ ಅವನ ಮನೆಗೆ ಹೋಗಿದ್ದಾಗ , ಸ್ನಾನ ಮಾಡುವ ಹೊತ್ತಿಗೆ ಬಚ್ಚಲು ಮನೆಗೆ ಬಂದು , ನೋಡು ನೀನು ಲೈಫ್ಬಾಯಿ ಸೋಪನ್ನೇ ಹಾಕು. ಇದು ಕೆಂಪಗಿನದ್ದು , ಇದನ್ನು ಹಾಕಿದರೆ ಏನಾಗುತ್ತೆ ಗೊತ್ತಾ ? ಅಂತ ಕೇಳಿದ ಆ ೩ ವರ್ಷದ ಬಾಲಕ ಮತ್ತೆ ಹೇಳುತ್ತಾನೆ , ನೋಡು ಇದನ್ನು ಹಾಕಿ ಸ್ನಾನ ಮಾಡಿದರೆ ರೋಗ ಬರೋದಿಲ್ಲ , ಮೈಯಲ್ಲಿರುವ ಹುಳ ಸಾಯುತ್ತೆ , ಗಟ್ಟಿ ಮುಟ್ಟಾದ ದೇಹ ಇರುತ್ತೆ ಅಂತೆಲ್ಲ ಹೇಳಿದ. ಇದನ್ನು ಯಾರು ಹೇಳಿದ್ದು ನಿನಗೆ ಅಂತ ಕೇಳಿದರೆ ಆತ ಹೇಳುತ್ತಾನೆ , ಟಿವಿಯಲ್ಲಿ ಬರುತ್ತಲ್ಲಾ ಅಂತಾನೆ. ಇದಿಷ್ಟೇ ವಿಷಯ.

ಇದು ಒಂದಲ್ಲ ಪ್ರಕರಣ, ಇಂತಹ ಅನೇಕ ಅನುಭವ ಹಲವರಿಗಾಗಿದೆ.ಆಗುತ್ತಲೇ ಇದೆ.ಇದೆಲ್ಲಾ ಟಿವಿ ಪರಿಣಾಮ ಅಂತ ನಾವು ನೇರವಾಗಿ ಹೇಳಿಬಿಡಬಹುದು. ಆದ್ರೆ ಟಿವಿ ನೋಡೋದಿಕ್ಕೆ ನಾವ್ಯಾಕೆ ಬಿಡಬೇಕು ಅಂತ ಇನ್ನೊಂದು ಪ್ರಶ್ನೆಯೂ ಜೊತೆಗೆ ಹುಟ್ಟಿಕೊಳ್ಳುತ್ತದೆ. ಇಂದು ಟಿವಿ ನೋಡಿದ್ದರ ಪರಿಣಾಮವಾಗಿ ಅನೇಕ ಸಂಗತಿಗಳು ಮಕ್ಕಳ ಮನಸ್ಸನ್ನು ಬಹುಬೇಗನೆ ತಲಪುತ್ತದೆ. ಅದರ ಜೊತೆಗೆ ದುಷ್ಪರಿಣಾಮಗಳು ಕೂಡಾ. ಒಂದು ಪರಿಣಾಮದ ಜೊತೆಗೇ ಇದೂ ಕೂಡಾ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದು ವ್ಯವಸ್ಥೆಯನ್ನು ಹಳಿದು ಪ್ರಯೋಜನ ಇಲ್ಲ. ಒಂದರ ಜೊತೆಗೆ ಇನ್ನೊಂದು ಇದ್ದೇ ಇದೆ. ಆದರೆ ನಮ್ಮ ದೃಷ್ಠಿ ಯಾವುದು ಎನ್ನುವುದರ ಮೇಲೆ ಇಡೀ ದಾರಿ ಕಾಣಿಸುತ್ತದೆ.

ಇದೇ ನೋಡಿ ,
ಇಂದು ಒಂದು ರಾಮಾಯಣದ್ದೋ , ಅಥವಾ ಸಾಮಾಜಿಕ , ವ್ಯಾವಹಾರಿಕ ಸಂಗತಿಯನ್ನೋ ಇದೇ ದೃಶ್ಯದ ಮೂಲಕ ಆ ಮಗು ನೋಡಿದ ತಕ್ಷಣವೇ ಅದು ಗ್ರಹಿಸಿಕೊಳ್ಳುತ್ತದೆ. ಮರುದಿನವೇ ಅದರ ಅನುಷ್ಠಾನದಲ್ಲಿ ಅದು ತೊಡಗಿಕೊಳ್ಳುತ್ತದೆ. ಆ ವಿಚಾರವನ್ನು ಆ ಮಗು ಮತ್ಯಾರಲ್ಲೋ ಕೇಳಿ ಇನ್ನಷ್ಟು ಗಟ್ಟಿ ಮಾಡುತ್ತದೆ. ಎಲ್ಲೂ ಉತ್ತರ ಸಿಕ್ಕಿಲ್ಲ ಅಂದಾಕ್ಷಣ ಅದಕ್ಕೆ ತನ್ನದೇ ನಿರ್ಧಾರಕ್ಕೆ ಬರುತ್ತೆ ಅದು.
ಹಾಗಾಗಿ ಅದ್ಯಾವುದೇ ಹೊಸದು ಬರಲಿ ಅದನ್ನು ಮಗು ಬಲು ಬೇಗನೆ ಕಲಿತು ಬಿಡುತ್ತದೆ. ಈ ಗುಣ ಮಕ್ಕಳಲ್ಲಿ ಬೆಳೆಯಬೇಕು. ಆದರೆ ಅದಕ್ಕೆ ಸರಿಯಾದ ದಾರಿಯನ್ನು ಮಾತ್ರಾ ಜವಾಬ್ದಾರಿಯುತರು ತೋರಿಸಬೇಕಾಗುತ್ತದೆ ಅಷ್ಟೇ.

ಅದಿಲ್ಲದೇ ಹೋದಲ್ಲಿ ಮೊನ್ನೆ ಯಾರೋ ಹೇಳುತ್ತಿದ್ದರು , ಇಂದು ಮೊಬೈಲ್ , ಕಂಪ್ಯೂಟರ್ ಮಕ್ಕಳನ್ನು ಹಾಳು ಮಾಡಿದೆ ಅಂತ. ಅದಲ್ಲ , ಮಕ್ಕಳು ಹಾಳಾಗದಂತೆ ಅಲ್ಲಿ ಎಚ್ಚರ ವಹಿಸಬೇಕಾದ್ದು ಆಯಾ ಘಟ್ಟದ ಜವಾಬ್ದಾರಿಯುತರು. ಮನೆಯಲ್ಲಾದರೆ ಹೆತ್ತವರು , ಹಾಸ್ಟೆಲ್‌ನಲ್ಲಾದರೆ ವಾರ್ಡನ್ , ಶಾಲೆಯಲ್ಲಾದರೆ ಪ್ರಾಂಶುಪಾಲರು ಅಷ್ಟೇ. ಇದು ಮೂರು ಸಂದರ್ಭದಲ್ಲಿ ಎಚ್ಚರವಾಗಿದ್ದರೆ ಎಚ್ಚರ ತಪ್ಪುವವರು ಯಾರು ಹೇಳಿ ?.

24 ಏಪ್ರಿಲ್ 2011

ಕೊನೆಗೂ ಉಳಿಯುವುದು ಇದೇ. .

ಸಾಯಿಬಾಬಾ ತೀರಿಕೊಂಡರು.

ಎಷ್ಟೋ ಜೀವಗಳಿಗೆ ಸ್ಫೂರ್ತಿಯಾಗಿದ್ದ ಸಾಯಿಬಾಬಾ ತೀರಿಕೊಂಡರು ಎಂದಾಕ್ಷಣ ಅಲ್ಲೆಲ್ಲಾ ಮತ್ತೆ ನಿರಾಸೆಗಳು ತುಂಬಿಕೊಂಡವು. ಆದರೆ ಮತ್ತೆ ಅದೇ ಜೀವಗಳು ಯೋಚಿಸುತ್ತವೆ ಇನ್ನೊಂದು ಅವತಾರದಲ್ಲಿ ಈ ಮಹಾಪುರುಷ ಬಂದೇ ಬರುತ್ತಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತವೆ. ಏನಿದ್ದರೂ ಈಗ ಸಾಯಿಬಾಬಾ ಇಲ್ಲ , ಮುಂದಿನದ್ದು ಗೊತ್ತಿಲ್ಲ.

ಸತ್ಯಸಾಯಿ ಬಾಬಾರನ್ನು ನಾನಂತೂ ಕಾಣುವುದು ಒಬ್ಬ ಸಮಾಜ ಸೇವಕನಾಗಿ , ಸುಧಾರಕನಾಗಿ. ಒಂದು ಸರಕಾರಕ್ಕೆ ಮಾಡಲಾಗದ ಕೆಲಸವನ್ನು , ಒಂದು ಆಡಳಿತಕ್ಕೆ ಕಲ್ಪಿಸಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರು ದೇವತಾ ಮನುಷ್ಯ. ಆರಾಧನೆಗೆ ಯೋಗ್ಯರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಇದುವರೆಗೆ ಯಾವುದೇ ಟೀಕೆಗಳು ಬಂದರೂ ಆ ಬಗ್ಗೆ ಯೋಚಿಸುವುದಕ್ಕೂ ಹೋಗದೇ ಬಾಬಾ ಕೆಲಸಗಳನ್ನು ಒಪಿಕೊಂಡು ಬಿಡುವುದು ಹೆಚ್ಚು ಸೂಕ್ತ ಅಂತ ನಾನು ನಂಬಿದ್ದೆ. ಹೀಗೆ ಟೀಕೆಗಳು ಬರುತ್ತಿದ್ದಾಗ ಬಾಬಾ ಸಹೇಳುತ್ತಿದ್ದ ಮಾತುಗಳನ್ನು ಎಲ್ಲೋ ಓದಿದ್ದು ನೆನಪಿದೆ , “ಸಿಹಿ ಇದ್ದಲ್ಲಿಗೇ ಇರುವೆಗಳು ಬರುವುದಲ್ಲವೇ , ಸಿಹಿ ಇಲ್ಲದಲ್ಲಿ ಇರುವೆಗಳು ಇರೋದಿಲ್ಲ ಅಲ್ವಾ” ಅಂತ ಒಂದೇ ಮಾತಿನಲ್ಲಿ ಹೇಳಿದ್ದು ಅಲ್ಲಿ ದಾಖಲಾಗಿತ್ತು. ಅಂದರೆ ಟೀಕೆಗಳಿಗೆ ಉತ್ತರ ಇಲ್ಲ. ಕಾಯಕವೇ ಅದಕ್ಕೆ ಉತ್ತರ. ನಿಜವಾಗಿಯೂ ಈ ಮಾತು ನಮಗೂ ಅನ್ವಯ ಅಲ್ಲವೇ. ಟೀಕೆಗಳಿಗೆ ಉತ್ತರ ನೀಡುತ್ತಾ ಹೋಗುತ್ತಿದ್ದಂತೆಯೇ ಅ ಬೆಳೆಯುತ್ತಾ ಸಾಗುತ್ತೆ. ಹಾಂಗತ ಅದುವೇ ದೌರ್ಬಲ್ಯ ಅಂತ ಟೀಕಾಕಾರರು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.

ಅದಲ್ಲ , ಬಾಬಾ ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತ. ಉಚಿತ ವೈದ್ಯಕೀಯ ಸೇವೆ , ಶಿಕ್ಷಣ , ಡಿಯುವ ನೀರು , ಶಿಸ್ತು , ಸಾಮರಸ್ಯ , ಮಾನಸಿಕ ಧೈರ್ಯ ,. . ಹೀಗೇ ಒಂದೇ ಎರಡೇ. ಸಾಲು ಸಾಲು ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಮಾನ್ಯ ಒಬ್ಬ ಸ್ವಾಮಿಗೆ ಮಾಡಲು ಆಗದ ಕೆಲಸವೇ ಸರಿ.

ಇದಕ್ಕೆಲ್ಲಾ ದಾನಿಗಳೂ ಇದ್ದಾರೆ ಅನ್ನಿ. ದಾನ ಮಾಡುವವನೂ ಅಲ್ಲಿ ಭ್ರಷ್ಠಾಚಾರ , ಅವ್ಯಹಾರ ಇಲ್ಲ ಎಂದೇ ಅಲ್ಲವೇ ದಾನ ಮಾಡುವುದು. ಒಂದು ವೇಳೆ ಎಲ್ಲೆಲ್ಲಾ ಅವ್ಯಹಾರ ತಾಂಡವವಾಡುತ್ತಿದ್ದರೆ ಅಷ್ಟು ಪ್ರಮಾಣದ ದಾನ ಹರಿದುಬರಲು ಸಾಧ್ಯವಿತ್ತೇ?. ಅದೂ ಅಲ್ಲ ಸೇವಾಕರ್ತರಾಗಿ ವಿಧೇಶಗಳಿಂದಲೂ ವೈದ್ಯರು ಆಗಮಿಸುತ್ತಿದ್ದರೇ?. ಖಂಡಿತಾ ಇಲ್ಲ. ಹೀಗಾಗಿ ಬಾಬಾ ನಿಜಕೂ ಒಬ್ಬ ಶ್ರೇಷ್ಠ ಪುರುಷ.
ಬಾಬಾ ಎಂದೂ ನನ್ನನ್ನು ಪೂಜೆ ಮಾಡಿ ಎಂತ ಎಲ್ಲೂ ಹೇಳಿಲ್ಲ , ಭಕ್ತರೇ ಪೂಜಿಸುವಾಗ ಅವರು ಹೇಳಿದ್ದು , ನಿಮ್ಮ ತಂದೆ ತಾಯಿಯನ್ನು ಪೂಜಿಸಿ , ಕುಲದೇವರನ್ನು ಪೂಜಿಸಿ ಎಂದರೇ ವಿನಹ: ನಾನೇ ದೇವರು ಎಂದು ಹೇಳಿಲ್ಲ. ಆದರೂ ಭಜನೆ ಇತ್ಯಾದಿಗಳ ಮೂಲಕ ಮಾನಸಿಕವಾದ ನೆಮ್ಮದಿಗೆ ನಾಂದಿ ಹಾಡಿದರು. ಆನ ಬಂದು ಸೇರಿದರು. ಏನೋ ಶಕ್ತಿ ಕಂಡುಕೊಂಡರು. ಲಕ್ಷ ಲಕ್ಷ ಜನ ಅವರತ್ತ ಹೋದರು.
ಇಂದು ಯಾವುದೇ ಒಬ್ಬ ಸ್ವಾಮೀಜಿಯಾಗಲಿ , ಅಥವಾ ಇನ್ಯಾರೇ ಆಗಲಿ ಮಾಡದ ಕೆಲಸವನ್ನು ಬಾಬಾ ಮಾಡಿದ್ದಾರೆ. ಅಷ್ಟೋ ಜನರಿಗೆ ಆರೋಗ್ಯ , ಶಿಕ್ಷಣ ಒದಗಿಸಿದ್ದಾರೆ. ಹೀಗಾಗಿ ಅವರು ಗ್ರೇಟ್. ಅವರ ನಿಧನಕ್ಕೆ ಹನಿ ಹನಿ ಕಂಬನಿ.

ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ನಾವು ಮಾಡಿದ ಸಾಧನೆಗಳು , ಸಮಾಜಕ್ಕೆ ನೀಡಿದ ಕೊಡುಗೆಗಳು ಉಳಿದುಕೊಳ್ಳುವುದೇ ವಿನಹ, ಈ ದೇಹವಲ್ಲ ಅಲ್ವೇ. ಹಾಗೇ ಇಂದು ಬಾಬಾ ನಿಧನರಾದ ತಕ್ಷಣ ಅವರ ಸಮಾಜ ಕಾರ್ಯಗಳು ಕಾಣಿಸಿಕೊಳ್ಳುತ್ತವೆ.ಆ ಮೂಲಕ ಅವರು ಶಾಶ್ವತರಾಗುತ್ತಾರೆ.

ನಾವೂ ಹಾಗೆಯೇ ಟೀಕೆಗಳಿಗೆ ಕಡಿವಾಣ ಹಾಕಿ ಅವರ ಹಾದಿಯಲ್ಲೇ ಮುಂದುವರಿದರೆ ಒಳ್ಳೆಯದಲ್ವೇ. ಸಮಾಜಕ್ಕೆ ಕಿರು ಕಾಣಿಕೆ ನೀಡುವತ್ತ ಚಿಂತಿಸುವುದು ಒಳ್ಳೆಯದಲ್ವೇ.