01 ಜನವರಿ 2025

ಹವ್ಯಕ ಸಮ್ಮೇಳನದ ಸಂದೇಶ ಏನು ?

 


ವಿಶ್ವಹವ್ಯಕ ಸಮ್ಮೇಳನದ ಗೌಜಿ ಮುಗಿಯಿತು. ಈಗ ಧನ್ಯವಾದ, ಅಭಿನಂದನೆ ಸಮರ್ಪಣೆಯ ಸಮಯದ ನಡುವೆ ಒಂದಿಷ್ಟು ಚರ್ಚೆಗಳು...  ಸಮ್ಮೇಳನದಲ್ಲಿ ಅನೇಕ ಗಣ್ಯರು ಮಾತನಾಡಿದರು. ಅದರಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿರುವುದು ಗಮನಿಸಬೇಕು," ಅತ್ಯಂತ ಸಣ್ಣ ಸಮುದಾಯವೊಂದು ದೇಶದ ಹಲವು ಪ್ರಮುಖ ಸ್ಥಾನಗಳಲ್ಲಿದೆ, ಅದೆಲ್ಲಾ ಅವರ ಸ್ವಂತ ಪರಿಶ್ರಮದಿಂದಲೇ ಹೊಂದಿರುವುದು". 

ಈಗ ನಡೆದಿರುವುದು ಹವ್ಯಕ ಭಾಷಾ ಸಮ್ಮೇಳನವಲ್ಲ, ಹವ್ಯಕ ಭಾಷೆಯನ್ನು ಹವ್ಯಕರು ಮಾತ್ರವಲ್ಲ ಇತರ ಅನೇಕರು ಮಾತನಾಡುತ್ತಾರೆ. ಈಗ ನಡೆದಿರುವುದು ಹವ್ಯಕ ಸಮ್ಮೇಳನ. ಅಂದರೆ ಬ್ರಾಹ್ಮಣ ಸಮುದಾಯದ ಒಂದು ಸಣ್ಣ ಪಂಗಡ, ವಿಭಾಗದ ಸಮ್ಮೇಳನ. ಹೀಗಿರುವ ಒಂದು ಸಣ್ಣ ಸಮುದಾಯವು ಹಮ್ಮಿಕೊಂಡಿರುವ ಸಮ್ಮೇಳನವು ಯಶಸ್ವಿಯಾದದ್ದು, ಮಾದರಿ ಆದ್ದು, ಚರ್ಚೆ ಆದ್ದು ಹೇಗೆ?. ಅದೇ ಸಮುದಾಯದವನಾಗಿ ನನ್ನ ಅನಿಸಿಕೆಗಳನ್ನು ಬರೆಯಬೇಕು ಅನಿಸಿತು.

ಬ್ರಾಹ್ಮಣ ಎಂದರೆ ಸಾಕು ಬೇರೆ ಬೇರೆ ಕಾರಣಗಳಿಂದ ಚರ್ಚೆ, ಟೀಕೆ, ವ್ಯಂಗ್ಯ ಕಾಣುತ್ತದೆ. ಆದರೆ ಹವ್ಯಕ ಸಮ್ಮೇಳನವು ಎಲ್ಲಾ ಸಮುದಾಯಗಳನ್ನೂ ಒಳಗೊಳ್ಳುವಂತೆ ಮಾಡಿದ್ದು, ಎಲ್ಲಾ ಸಮುದಾಯದ ಸ್ವಾಮೀಜಿಗಳು ಭಾಗವಹಿಸಿದ್ದು ಒಂದು ಮಾದರಿಯ ನಡೆ. ಬ್ರಾಹ್ಮಣ ಸಮುದಾಯದ ನಡುವೆಯೂ ಹಲವು ಒಳಪಂಗಡ ಇದೆ. ಅವುಗಳ ಒಳಗೆ ಸಂಬಂಧ-ಮಾತುಕತೆ-ಊಟ ಇತ್ಯಾದಿಗಳು ಈಚೆಗಿನವರೆಗೂ ಬೇರೆ ಬೇರೆಯೇ ಇತ್ತು. ಈಚೆಗೆ ಸುಧಾರಣೆ ಕಾಣುತ್ತಿದೆ. ಈಗ ಸಮ್ಮೇಳನದ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿರುವುದು ಉತ್ತಮ ಬೆಳವಣಿಗೆ.. ನಾನೂ ಅದೇ ಸಮುದಾಯದವನಾಗಿ ಈ ಬೆಳವಣಿಗೆ ಇಷ್ವವಾಯ್ತು.

ಸಮ್ಮೇಳನದಲ್ಲಿ ಹಲವಾರು ಮಂದಿ ಮಾತನಾಡಿದರು. ಮೌಲಿಕ ವಿಷಯಗಳ ಬಗ್ಗೆ ಚರ್ಚೆ ಆಯ್ತು. ಸಮ್ಮೇಳನದ ಆರಂಭದ ದಿನ ಅಶೋಕ ಹಾರನಹಳ್ಳಿಯವರು ಮಾತನಾಡಿದರು, ಆ ವಿಷಯ ಚರ್ಚೆಯಾಗಬಹುದು ಎನ್ನುವ ನಿರೀಕ್ಷೆ ನನಗಿತ್ತು. ಅವರು ಮಾತನಾಡುತ್ತಾ, ಆರ್ಥಿಕ ಮೀಸಲಾತಿ, ಬ್ರಾಹ್ಮಣ ಹಾಗೂ ಸರ್ಕಾರ ನೀತಿಯ ಬಗ್ಗೆ ಉಲ್ಲೇಖಿಸಿದ್ದರು. ಆರ್ಥಿಕ ಮೀಸಲಾತಿ ಬಗ್ಗೆ ಈಚೆಗೆ ಚರ್ಚೆಯಾಗಿತ್ತು, ಪರ ವಿರೋಧ ಚರ್ಚೆಯೂ ಆಗಿತ್ತು. ಆದರೆ ಬ್ರಾಹ್ಮಣರ ನಿಲುವಿನನ ಬಗ್ಗೆ ಅಶೋಕ ಹಾರನಹಳ್ಳಿ ಅವರ ಮಾತುಗಳು ಈಗ ಚರ್ಚೆಯಾದೀತು ಎಂದು ನಿರೀಕ್ಷೆ ಇತ್ತು. ಆದರೆ ಈ ಅಂಶವು ಸಮ್ಮೇಳನದ ನಿರ್ಣಯದಲ್ಲೂ ಕಂಡಿಲ್ಲ. ಹೀಗಾಗಿ  ಹವ್ಯಕ ಸಮುದಾಯವು ಈ ನಿಲುವಿನಲ್ಲಿ ಸ್ಪಷ್ವವಾಗಿರುವುದು ಕಂಡಿತು. ಬಹುಶ: ತೇಜಸ್ವಿಸೂರ್ಯ ಅವರ ಅಭಿಪ್ರಾಯವೂ ಸರಿ ಇದೆ.
ಸಮ್ಮೇಳನದ ಉದ್ಘಾಟಟನೆ ನಂತರ ಹಾಗೂ ಸಮಾರೋಪದ ನಂತರ ಚರ್ಚೆ ಆದ್ದು ಜನಸಂಖ್ಯೆ ಹೆಚ್ಚಳದ ಬಗ್ಗೆ.ಹವ್ಯಕ ಜನಸಂಖ್ಯೆ ಹೆಚ್ಚಾಗಬೇಕು ಅಂದರೆ ಜನಸಂಖ್ಯಾ ನಿಯಂತ್ರಣದ ಮನಸ್ಥಿತಿಯಿಂದ ಹೊರಬರುವಂತೆ ಹವ್ಯಕ ಸಮುದಾಯದ ಇಬ್ಬರು ಯತಿಗಳು ಆಡಿರುವ ಮಾತು. ಅದೇ ಮಾತುಗಳೂ ಸಮ್ಮೇಳನ ನಿರ್ಣಯದಲ್ಲೂ ದಾಖಲಾಗಿದೆ. ಹೀಗಾಗಿ ಸಮ್ಮೇಳನವು ಈ ಮಾತುಗಳನ್ನು ಪುಷ್ಟೀಕರಿಸಿದೆ ಹಾಗೂ ಮಾನ್ಯತೆ ನೀಡಿದೆ. ಜನಸಂಖ್ಯೆ ಹೆಚ್ಚಳ ಮಾತ್ರಾ ಆಗುವುದರಿಂದ ಸಮುದಾಯ ಉಳಿಯಬಹುದು ಆದರೆ ಸಮಾಜಕ್ಕೆ ಪ್ರಯೋಜನ ? ಜನಸಂಖ್ಯೆಯು ಸಮುದಾಯಕ್ಕೆ, ದೇಶಕ್ಕೆ ಕೊಡುಗೆಯಾಗಿ ಬದಲಾಗಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಇದು ಅಗತ್ಯ. ಈಗಾಗಲೇ ಹೇಳಿದಂತೆ ಜನಸಂಖ್ಯೆಯು ಕ್ವಾಂಟಿಟಿಯಲ್ಲಿ ಅಲ್ಲ, ಕ್ವಾಲಿಟಿಯಲ್ಲಿ ಕಾಣಬೇಕು. ದೇಶದ ಪ್ರಮುಖ ಜಾಗದಲ್ಲಿ ಹವ್ಯಕರ ಕೊಡುಗೆ ಈಗ ಇದೆ, ಅದು ಕೂಡಾ ಹೆಚ್ಚಾಗಬೇಕು. 

ಹವ್ಯಕರಲ್ಲಿ ಬಹುಪಾಲು ಮಂದಿ ಕೃಷಿ ಹಿನ್ನೆಲೆಯವರೇ ಆಗಿದ್ದಾರೆ. ಈಚೆಗೆ ಉದ್ಯಮ-ಉದ್ಯೋಗ ಎಂದು ಕೃಷಿ ಬಿಟ್ಟಿದ್ದಾರೆ ಅಷ್ಟೇ. ಹಾಗಿದ್ದರೂ ಕೃಷಿ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ.ಹೀಗಾಗಿ ಕೃಷಿ ಬೆಳವಣಿಗೆಗೆ ಏನು ? ಈಗಾಗಲೇ ಹಲವಾರು ಮಂದಿ ಕೃಷಿ ಬಿಟ್ಟಿದ್ದಾರೆ. ಅಡಿಕೆಯೇ ಹವ್ಯಕರ ಪ್ರಮುಖ ಕೃಷಿಯಾಗಿದೆ ಈಗ. ಆದರೆ ಅಡಿಕೆಯೂ ಅತಂತ್ರವಾಗಿದೆ. ಕೃಷಿಯಲ್ಲಿ ಉಳಿದವರು ನಿರಾಶರಾಗಿದ್ದಾರೆ, ಕೃಷಿಯಲ್ಲಿದ್ದರೆ ಮದುವೆಯೇ ಆಗುವುದಿಲ್ಲ, ಹೀಗಿರುವಾಗ ಜನಸಂಖ್ಯೆ ಹೆಚ್ಚಳವಾದರೂ ಹೇಗೆ..? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಏಕೆಂದರೆ ಈಚೆಗೆ ಕೃಷಿಯಲ್ಲಿ ಉಳಿದವರೇ ಕಣ್ಣಮುಂದಿನ ನಿದರ್ಶನಗಳು. ಆದರೆ, ಸಭೆಗೆ ಬಂದಿರುವ ಎಲ್ಲರೂ ಅಡಿಕೆ ಕೃಷಿಯ ಬೆಳವಣಿಗೆಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ ಕೂಡಾ, ಸಮ್ಮೇಳನದ ನಿರ್ಣಯವೂ ಅಡಿಕೆಯನ್ನು ಉಲ್ಲೇಖಿಸಿದೆ. ಇದು ಜನಸಂಖ್ಯೆ ಹೆಚ್ಚಳವಾದರೆ ಉದ್ಯೋಗ, ಆಸರೆ ನೀಡೀತೇ..?. ಸ್ವಾಮೀಜಿಗಳು ಮಕ್ಕಳು ಹೆಚ್ಚಾದರೆ ಮಠಕ್ಕೆ ಬಿಡಿ ಎಂದಿದ್ದಾರೆ, ಅದು ಪ್ರಾಕ್ಟಿಕಲ್‌ ಅಲ್ಲ, ಅದು ಜನಸಂಖ್ಯೆ ಹೆಚ್ಚಳಕ್ಕೆ ಒಂದು ಬೆಂಬಲದ ಭಾವ ಅಷ್ಟೇ. ಆದರೆ ಚರ್ಚೆ ಆಗಿರುವುದು ಈ  ವಿಷಯ..!.

ಒಂದು ಸಮ್ಮೇಳನವಾದ ನಂತರ ಅದು ಚರ್ಚೆಯಾಗಬೇಕು. ಅದರ ನಿರ್ಣಯಗಳು ಚರ್ಚೆಯಾಗಬೇಕು,ಆ ಚರ್ಚೆಯ ಮೂಲಕ ಇನ್ನೊಂದು ಮಜಲಿಗೆ ತಲುಪಬೇಕು. ಏಕೆಂದರೆ ಇದು ಪ್ರಜಾಪ್ರಭುತ್ವ. ಸಮುದಾಯದ ಎಲ್ಲರೂ ಭೇಷ್‌ ಭೇಷ್‌ ಎಂದು ಎಲ್ಲದಕ್ಕೂ ಹೇಳಲು ಸಾಧ್ಯವಿಲ್ಲ, ಅದೆಲ್ಲವನ್ನೂ ಒಪ್ಪಬೇಕಿಲ್ಲ.ಒಪ್ಪದೇ ಇದ್ದರೆ ಅವರು ಯಾರೂ ವಿರೋಧಿಗಳೂ ಅಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಚರ್ಚೆಗಳು ಮೊಂಡು ವಾದಗಳು ಆಗದೆ, ರಚನಾತ್ಮಕವಾದ ಚರ್ಚೆಗಳು ಆಗಬೇಕು, ಅದು ಅಂತಿಮವಾಗಿ ಜಾರಿಯಾಗಬೇಕು. ಹವ್ಯಕ ಸಮ್ಮೇಳನವು ಅಂತದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಚರ್ಚೆ ಹವ್ಯಕರಿಗೆ ಮಾತ್ರವಲ್ಲ ಎಲ್ಲಾ ಸಮುದಾಯಕ್ಕೂ ಅದು ಸಂದೇಶವೂ ಆಗಿದೆ, ಏಕೆಂದರೆ ಎಲ್ಲರನ್ನೂ ಸೇರಿಸಿಕೊಂಡು ಮಾಡಿರುವ ಸಮ್ಮೇಳನ ಇದು ಎಂದೂ ಯೋಚಿಸಿಕೊಳ್ಳಬೇಕು.  ಸಮ್ಮೇಳನಗಳಲ್ಲಿ ಊಟದ ಚರ್ಚೆಯಲ್ಲ, ಆಗಬೇಕಿರುವುದು ಸಮುದಾಯದ ಅಭಿವೃದ್ಧಿಯ ಸಂದೇಶ , ನಾಡಿಗೆ ಕೊಡುಗೆಯನ್ನು ನೀಡುವ ಸಂದೇಶ ಎನ್ನುವುದೂ ಇಲ್ಲಿ ಗಮನಿಸಬೇಕು.

ಹವ್ಯಕ ಸಮುದಾಯ ಸಮಾಜದ ಇನ್ನೂ ಕೆಲವು ಪ್ರಮುಖರು ಸಭೆಯಲ್ಲಿ ಕಾಣಲಿಲ್ಲ. ಎಲ್ಲಾ ಸಮುದಾಯಗಳಂತೆಯೇ ಈ ಸಮುದಾಯದ ಒಳಗೂ ಕಾಲೆಳೆಯು, ವ್ಯಂಗ್ಯ ಮಾಡುವುದು ಇದೆ. ಹೀಗಾಗಿ ಕೆಲವು ಮಂದಿ ಬೆಳೆಯಲಿಲ್ಲ, ಬೆಳೆದವರು ಬಿದ್ದಿದ್ದಾರೆ. ಇನ್ನೂ ಕೆಲವರು ಗುರುತಿಸಿಕೊಳ್ಳಲಿಲ್ಲ. ಸಣ್ಣ ಸಮುದಾಯ, ಜನಸಂಖ್ಯೆ ಹೆಚ್ಚಳವನ್ನು ಬಯಸುವ ವೇಳೆ ಒಟ್ಟಾಗಿ ಬೆಳೆಯಬೇಕಾದರೆ ಕಾಲೆಳೆಯುವುದು, ವ್ಯಂಗ್ಯವೂ ಕಡಿಮೆಯಾಗಬೇಕು. ದೇಶದ ಪ್ರಮುಖ ಜಾಗಗಳಲ್ಲಿ ಹವ್ಯಕರು ಇರುವಂತೆ, ಇನ್ನೂ ಕೆಲವು ಸಮುದಾಯಗಳಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಹವ್ಯಕರು ಇರಬೇಕು, ಅದು ಕೂಡಾ ಇಂದು ಅಗತ್ಯವಾಗಿದೆ.  

ನನಗನ್ನಿಸಿತು ಇಷ್ಟು ದೊಡ್ಡ ಸಮ್ಮೇಳನದಲ್ಲಿ ಎಲ್ಲರನ್ನೂ ಗುರುತಿಸಲು ಕಷ್ಟ, ಕೊರತೆಗಳನ್ನು ಹೇಳುವುದು ಸುಲಭ, ಆದರೆ ಕೆಲಸ ಮಾಡುವುದು ಕಷ್ಟ, ಸಂಘಟನೆ ಕಷ್ಟ. ಆದರೆ ಕೃಷಿ ಪ್ರದಾನವಾದ ವ್ಯವಸ್ಥೆಯಲ್ಲೂ ಹವ್ಯಕರು  ಗುರುತಿಸಿಕೊಂಡಿರುವ ಕಾರಣದಿಂದ, ಅದರಲ್ಲೂ ಅಡಿಕೆ ಬೆಳೆಗಾರರೇ ಹೆಚ್ಚಿರುವುದರಿಂದ ಅಡಿಕೆಯ ಮೌಲ್ಯವರ್ಧನೆಯಲ್ಲಿ ವಿಶೇಷವಾದ ಸಾಧನೆ ಮಾಡಿರುವ  ವಿಟ್ಲದ ಬದನಾಜೆ ಶಂಕರ ಭಟ್ಟರನ್ನು ಗುರುತಿಸಿದ್ದರೆ ಅಡಿಕೆ ಬೆಳೆಗಾರರಿಗೂ ಒಂಚೂರು ಬಲ ಬರುತ್ತಿತ್ತು ಅಂತ ನನಗೆ ಅನಿಸಿತು. 

ಏನೇ ಆಗಲಿ, ವಿಶ್ವಹವ್ಯಕ ಸಮ್ಮೇಳನವು ಒಂದು ಸಂಚಲನಕ್ಕೆ ಕಾರಣವಾಯಿತು. ಸಣ್ಣ ಸಮುದಾಯದ ಸಮ್ಮೇಳನದಲ್ಲಿ ಮಂಡಿಸಲಾದ ವಿಷಯವು ಎಲ್ಲರಲ್ಲೂ ಚರ್ಚೆಗೆ ಕಾರಣವಾದ್ದು ಗಮನಿಸಬೇಕಾದ ಅಂಶ. ಯಾರು ಏನೇ ಹೇಳಲಿ, ಹೊಸತನಕ್ಕೆ ತೆರೆದುಕೊಂಡು, ಅಪ್ಡೇಟ್‌ ಆಗುತ್ತಾ ನಡೆಯುವ ಸಮಾಜವು ಜನಸಂಖ್ಯೆ ಕಡಿಮೆ ಇದ್ದರೂ ಯಾವತ್ತೂ ಉಳಿದುಕೊಳ್ಳುತ್ತದೆ, ಬೆಳೆಯುತ್ತದೆ. ವಿಶ್ವಹವ್ಯಕ ಸಮ್ಮೇಳನವು ಈ ನಿಟ್ಟಿನಲ್ಲಿ ನೀಡಿದ ಸಂದೇಶ ದೊಡ್ಡದು.  

31 ಡಿಸೆಂಬರ್ 2023

ಈ ವರ್ಷ ಮುಗಿದೇ ಬಿಟ್ಟಿತು.....!, 2023 ಕಲಿಸಿದ ಬದುಕಿನ ಪಾಠ....!



ನನಗಂತೂ 2023 ಬದುಕಿನ ಪಾಠ ಕಲಿಸಿದ ವರ್ಷ. ಅಪ್ಪನೂ-ಅಮ್ಮನೂ ಇಲ್ಲದ ಈ ವರ್ಷ. 2018 ರಿಂದ ಅಪ್ಪನಿಲ್ಲದಿದ್ದರೂ ಕಳೆದ ವರ್ಷದವರೆಗೆ ಅಮ್ಮ ಇದ್ದರು. ಮೊನ್ನೆ ಮೊನ್ನೆಯವರೆಗೆ ಅಮ್ಮನಿಲ್ಲದಿದ್ದರೂ ಪ್ರತೀ ತಿಂಗಳು ಅಮ್ಮನ ನೆನಪು. ಆ ನಂತರ ವರ್ಷದ ಕಾರ್ಯಕ್ರಮ. ಹೀಗಾಗಿ ಅಮ್ಮ ಜೊತೆಗೇ ಇದ್ದಾರೆ ಅನಿಸುತ್ತಿತ್ತು. ಆ ಬಳಿಕ ಅಮ್ಮನಿಲ್ಲದ ದಿನಗಳು... ನೆನಪಾಗುವ ದಿನಗಳು... ಈ ಇಡೀ ವರ್ಷ ಅಮ್ಮನೇ ಹೇಳಿದ, ಅಪ್ಪ ಹೇಳುತ್ತಿದ್ದ ಮಾತುಗಳು ಪ್ರಾಕ್ಟಿಕಲ್‌ ಬದುಕಿಗೆ ಪಾಠವಾಯಿತು. ಅಂದು ಅಪ್ಪ ಹೇಳುತ್ತಿದ್ದಾಗ, ಅಮ್ಮ ಎಚ್ಚರಿಸುತ್ತಿದ್ದಾಗ, ಅದೆಲ್ಲಾ ಸುಮ್ಮನೆ ಹಾಗಿಲ್ಲ... ಎಂದು ಹೇಳುತ್ತಿದ್ದ ದಿನಗಳು ಗಟ್ಟಿಯಾಗಿ ನೆನಪಾದ್ದು ಈ ವರ್ಷ. ಅಪ್ಪ ಯಾಕೆ ಹಾಗಿದ್ದರು ಎಂದು ಅರ್ಥವಾದ ವರ್ಷ. ಬದುಕಿನ ಪಾಠಗಳು ಹಾಗೇ...  ತಡವಾಗಿಯೇ ಅರ್ಥವಾಗುತ್ತದೆ.  ಈಗ ನಾನೂ ಅಪ್ಪನಾಗಿ ಮಕ್ಕಳಿಗೆ ಅದನ್ನೇ ಹೇಳುವಾಗಲೂ, ಪ್ರತಿಕ್ರಿಯೆ ಬರುವಾಗಲೂ ನನ್ನ ಬಾಲ್ಯ,ಯೌವನ ನೆನಪಾಗುತ್ತದೆ.... 

ಎರಡು ವರ್ಷದಿಂದ ಆರ್ಥಿಕವಾಗಿಯೂ ಸವಾಲಿನ ವರ್ಷ. ಅಮ್ಮನ ಚಿಕಿತ್ಸೆ, ಅಮ್ಮನ ಸೇವಾ ಕಾರ್ಯ. ಆ ಬಳಿಕ ಅಮ್ಮ ಇಲ್ಲವಾದ ನಂತರದ ಇಡೀ ವರ್ಷದ ಕಾರ್ಯ.ವರ್ಷದ ಕಾರ್ಯ. ಈ ನಡುವೆ ಕೃಷಿ ಕಾರ್ಯದಲ್ಲಿ ಹವಾಮಾನದ ಕಾರಣದಿಂದ ಕಳೆದ ವರ್ಷ ಅಡಿಕೆ ಬೆಳೆಗೂ ಹಾನಿ. ಈ ನಡುವೆ ಕೆಲವು ಆರ್ಥಿಕ ಒತ್ತಡಗಳು, ಕೆಲವು ಹಳೆ ಬಾಕಿಗಳು, ಮಕ್ಕಳಿಗೆ ಅಗತ್ಯಕ್ಕೆ ಬೇಕಾದ ವಸ್ತುಗಳು, ಬೇಕೋ ಬೇಡದೆಯೋ ಕೆಲವು ಕಾರ್ಯಗಳು, ಖರೀದಿಗಳು, ಮಕ್ಕಳ ಖುಷಿಯನ್ನೂ ಕಡಿಮೆ ಮಾಡುವುದು ಹೇಗೆ.... !,  ಕೃಷಿ ಕಾರ್ಯದ ಕೆಲಸ,  ಹಾಗಿದ್ದರೂ ಇಡೀ ವರ್ಷ ಹೇಗೆ ನಿಭಾಯಿಸಿದ್ದೋ..! ಗೊತ್ತಿಲ್ಲ. ಈ ವರ್ಷದ ಕೊನೆಗೆ ಆರ್ಥಿಕವಾಗಿ ಹರಸಾಹಸ ಪಡಬೇಕಾದೀತೋ ಏನೋ ಅಂತ ಅಂದು ಭಯವಾಗಿತ್ತು. ಆದರೆ ಈ ವರ್ಷದ ಕೊನೆಯ ದಿನದವರೆಗೂ ಅಡಿಕೆ ಉಳಿದುಕೊಂಡಿದೆ. ಹೊಸ ಅಡಿಕೆ ಯಾವಾಗ ಒಣಗುತ್ತದೋ ಎಂದು ಕಾಯಬೇಕಾಗಿ ಬರಲಿಲ್ಲ.... ಮೊನ್ನೆ ಅನಿಸಿತು, ಪಿತೃ ಕಾರ್ಯ ಹಾಗೂ ದೇವಕಾರ್ಯಗಳು ಬಹುಶ: ಬಲ ನೀಡಿತು ಅಂತ ಅನಿಸಿತು. ಬೇರೆ ಯಾವ ಶಕ್ತಿಯೂ ನನ್ನ ಜೊತೆ ಈ ವರ್ಷ ಇರಲಿಲ್ಲ...

ಈ ನಡುವೆ ಕೆಲವು ಸಮಯದ ಹಿಂದೆ , ಯಾವ ಕಾರಣವೂ ಇಲ್ಲದೆ ವಿಷಾದ ತುಂಬಿ ಹೋಯ್ತು. ಅನೇಕ ಬಾರಿ ಬಾತ್‌ರೂಂ ವಿಷಾದವನ್ನು ಕಳೆಯಲು ಒಳ್ಳೆಯ ಗೆಳೆಯನಾಗಿತ್ತು. ಮನೆಯ ಮುಖ್ಯಸ್ಥನೇ ವಿಷಾದ ತುಂಬಿದರೆ ಹೇಗೆ ಅಂತ ಆಗಾಗ ಅನಿಸುತ್ತಿತ್ತು. ನನಗೆ  ಆಪ್ತರಾದ ಒಂದಿಬ್ಬರು ಇದ್ದಾರೆ. ಅವರ ಜೊತೆ ಆಗಾಗ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೆ... ಅವರು ಯಾವತ್ತೂ ಮನಸ್ಸಿನಲ್ಲಿ ಕೆಟ್ಟದ್ದು ಯೋಚನೆ ಮಾಡದೇ ನೀಡುವ ಒಳ್ಳೆಯ ಸಲಹೆ... ಆಗಾಗ ರೀಫ್ರೆಶ್‌ ಮಾಡುತ್ತಿತ್ತು. ಅದಾದ ಬಳಿಕ ಈಚೆಗೆ ಮಕ್ಕಳ ಶಾಲೆಗೆ ಹೋಗಿದ್ದಾಗ ಭಗವದ್ಗೀತೆಯ ಬಗ್ಗೆ ಡಾ.ಶ್ರೀಶಕುಮಾರ್‌ ಮಾತನಾಡಿದ್ದರು. ಭಗವದ್ಗೀತೆಯ ಸಾರವು ಮತ್ತೆ ಮನಸ್ಸನ್ನು ರೀಫ್ರೆಶ್‌ ಮಾಡಿತು. ವಿಷಾದ ಭಾವದಿಂದ ಹೊರಬರುವಂತೆ ಮಾಡಿತು. ಅದರ ಜೊತೆಗೇ ಒಂದಷ್ಟು ಗೆಳೆಯರೂ ಸಕಾರಾತ್ಮಕವಾಗಿ ಮಾತನಾಡಿದರು. ಮೆಟ್ಟಿಲಾಗುವುದು ಯಾವತ್ತೂ ಒಳ್ಳೆಯದೇ, ಹಾಗೆಂದು ಯಾವತ್ತೂ ಮೆಟ್ಟಿಲಾಗಬಾರದು.! ಎನ್ನುವುದೂ ಈ ವರ್ಷ ಕಲಿತ ಬಹುಮುಖ್ಯ ಪಾಠ. 

ಅನೇಕರನ್ನು ಎತ್ತಿ ಹಿಡಿದದ್ದು ಇದೆ, ಅವರ ಒಳ್ಳೆಯ ತನ ನೋಡಿ ಎತ್ತಿ ಹಿಡಿದದ್ದು ಇದೆ. ಅವರ ರಕ್ಷಣೆ ಮಾಡಿದ್ದು ಇದೆ. ಅಂದರೆ ಅವರ ಏಳಿಗೆಗೆ ಮೆಟ್ಟಿಲಾದ್ದು ಇದೆ. ಆದರೆ ಕೊನೆಗೆ ಅವರೇ "ಬತ್ತಿ" ಇರಿಸಿದ್ದು ಬಹುದೊಡ್ಡ ತಿರುವು ಈ ವರ್ಷದ್ದು. ಯಾವ ಕಾರ್ಯವೂ ತಿಳಿದವನಿಗೆ ಇಡೀ ಪಾಠ ಮಾಡಿ ಕೊನೆಗೇ ತಿರುಗು ಬಾಣವಾದ್ದು ಈ ವರ್ಷದ ಇನ್ನೊಂದು ಪಾಠ.

ಯಾರೋ ಕೆಲವರು ಅವರಿಗೆ ಬೇಕಾದ ಹಾಗೆ ಬಳಸಿಕೊಂಡದ್ದು ಇನ್ನೊಂದು. ನಂಬಿ ಕೆಡುವುದು ಹೇಗೆ ಎಂದು ಈ ವರ್ಷ ತಿಳಿಯಿತು...!.  ನಾನು ಬರೆಯಬೇಕು ಎಂದು ಅಂದುಕೊಂಡೆ, ಆದರೆ ಬರೆಯಲಿಲ್ಲ, ಡಿಲೀಟು ಮಾಡಿದೆ, ಯಾಕೆ ಸುಮ್ಮನೆ ನಿಷ್ಟೂರು..!. ನೀನು ಬರೆದಿದ್ದು ಒಳ್ಳೆಯದೇ, ಮಾತನಾಡಿದ್ದು ಸೂಪರ್‌  ಅಂತ ಹೇಳಿದವರು ಹಲವರು....! ಆದರೆ ಅದೇ ವಿರೋಧ ಅಂತ ಆದಾಗ, ವಾಸ್ತವ ವಿಷಯ ಅದು ಅಂತ ತಿಳಿದರೂ ಆ ಕಡೆಯಲ್ಲಿ ಹೋಗಿ "ಅವ ಸರಿ ಇಲ್ಲ.."  ಎಂದದ್ದದೂ ತಿಳಿದುಕೊಂಡದ್ದು ಇನ್ನೊಂದು ಬಹುಮುಖ್ಯ ಪಾಠ..!. 

ಬದುಕು ಎಂದರೆ ಹಾಗೇ ಅಲ್ಲವೇ, ಅನೇಕರು ಮಾತನಾಡುತ್ತಾ ಸಲಹೆ ಕೇಳುತ್ತಾರೆ, ಪ್ರಾಮಾಣಿಕವಾದ, ಯಾವ ಕಲ್ಮಶವೂ ಇಲ್ಲದ ಸಲಹೆಗಳೇ ವಿರೋಧ ಅಂತ ಆಗಿ ಬಿಟ್ಟಿತು...!. ಅಂದರೆ ಈ ಸಲಹೆಯೇ ಮತ್ಸರದ ಸಲಹೆ ಅಂತ ಅನಿಸಿ ಬಿಟ್ಟದ್ದು ಈಗಲೂ ಸಹಿಸಿಕೊಳ್ಳಲಾಗದ ನೋವು.  ಆ ದಿನದಿಂದಲೇ ಸಲಹೆಯನ್ನೇ ನಿಲ್ಲಿಸಿ ಬಿಡುವುದು ಮಾತ್ರವಲ್ಲ ಕೇಳಿದರೂ ಮೌನವೇ  ಉತ್ತರ ಅಥವಾ ಹೆಚ್ಚಿನ ಮಾಹಿತಿ ಇಲ್ಲ ಅಂತಲೇ ಹೇಳಿಬಿಡುವುದು ಕ್ಷೇಮ ಅಂತ ಈ ವರ್ಷದ ಅನಿಸಿ ಬಿಟ್ಟಿದೆ. ಈ ವಿಷಾದದ ವೇಳೆ ಮಾತೊಂದು ಮತ್ತೆ ನನಗೆ ಸ್ಫೂರ್ತಿ ನೀಡಿತು, "ಮರದ ಹುಳ ಮರವನ್ನೇ ತಿನ್ನುವುದು", ಹಾಗಾಗಿ ಪ್ರಾಮಾಣಿಕವಾದ, ಯಾವ ಮತ್ಸರವೂ ಇಲ್ಲದೆ ನೀಡಿದ ಸಲಹೆ ಆದ್ದರಿಂದ ಯಾವ ವಿಷಾದವೂ ಬೇಕಿಲ್ಲ. 

ಪೂಜೆ ಮಾಡುವುದೇ ಹೃದಯದಿಂದ ದೇವರನ್ನು ತಂದು. ಅಂದರೆ ಆತ್ಮದ ಪರಿಶುದ್ಧತೆಯೇ ಪೂಜೆ. ಮನಸ್ಸು, ಆತ್ಮದ ಪರಿಶುದ್ಧತೆ ಇದ್ದರೆ, ಈ ಕಾಲದಲ್ಲಿ ಯಾವ ಪೂಜೆಯೂ ಬೇಕಾಗಿಲ್ಲ. ಹಾಗಾಗಿಯೇ ಇನ್ನೊಬ್ಬರ ಅವನತಿ ಬಯಸಿದರೆ "ಮರದ ಹುಳ ಮರವನ್ನೇ ತಿನ್ನುವುದು" ಎಂದು ಓದಿದ ಮಾತುಗಳು ಮತ್ತೆ ಮತ್ತೆ ಸಮಾಧಾನ ಪಡಿಸಿತು. ಆದರೆ ಬದುಕಿಗೆ ಎಚ್ಚರಿಕೆ ನೀಡಿದ ಪಾಠ ಎಂದರೆ , ಯಾವತ್ತೂ  ಸಲಹೆ ನೀಡಬೇಕಾದ್ದು ನಿನ್ನ ಅರಿತವರಿಗೆ ಮಾತ್ರಾ...!

ಕೃಷಿಯಲ್ಲಿ ಸೋಲು ಗೆಲುವುಗಿಂತಲೂ ಮುಖ್ಯ ಪ್ರಯತ್ನ. ಅಪ್ಪ ಯಾವತ್ತೂ ಕೃಷಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದರು. ಯಾವತ್ತೂ ಕುಗ್ಗಿರಲಿಲ್ಲ. ಹೊಸತು ... ಹೊಸತು. ಹಾಗಾಗಿ ಕೃಷಿ ಯಾವತ್ತೂ ಸೋಲಲು ಬಿಡಲಿಲ್ಲ.ಈಗಲೂ ಕೂಡಾ.... 

ನನಗೂ ನೆನಪಿತ್ತು... ಮೊನ್ನೆ ನಮ್ಮ ಮನೆಯ ಮಿತ್ರ ಹೇಳುತ್ತಿದ್ದರು, ಅಂದೆಲ್ಲಾ ನವೆಂಬರ್‌ ತಿಂಗಳಲ್ಲ್ಲಿ ಬಿದ್ದ ಅಡಿಕೆಯನ್ನು ಗೂಡಲ್ಲಿ ಹಾಕಿ ಒಣಗಲು ಹಾಕಿ, ಒಣಗಿಸಿ ಡಿಸೆಂಬರ್‌ ಮೊದಲ ವಾರದಿಂದಲೇ ಮಾರಾಟ ಮಾಡಬೇಕಿತ್ತು. ಅಂದರೆ ಊಟಕ್ಕೆ, ಕೃಷಿ ಕಾರ್ಯಕ್ಕೆ ಹಣ ಬೇಕಾಗಿತ್ತು. ಈಚೆಗೆ ಎರಡು ವರ್ಷದ ನಿರಂತರ ಪ್ರಯತ್ನದ ನಡುವೆಯೂ ಈ ವರ್ಷದ ಕೊನೆಗೂ ಆರ್ಥಿಕ ಪರಿಸ್ಥಿತಿ ಕೈಕೊಡಬಹುದೇ ಅಂತ ಅಂದುಕೊಂಡಿದ್ದೆ, ಆದರೆ ಹಾಗೆ ಆಗಲಿಲ್ಲ. 

ಅಪ್ಪ‌ ಪಟ್ಟ ಶ್ರಮ, ಅಮ್ಮ ಪಟ್ಟ ಶ್ರಮ ನೆನಪಿತ್ತು, ಸ್ವಲ್ಪ ಎಚ್ಚರ ವಹಿಸಿಕೊಂಡೆ. ಈ ವರ್ಷ ಅದುವೇ ಪಾಠ ಆಯ್ತು. ಅಮ್ಮ ಹೇಳುತ್ತಿದ್ದ ಮಾತು ನೆನಪಾಯ್ತು, ಪೇಟೆಯಲ್ಲಿ ಎಲ್ಲವೂ ಬೇಕಾದ್ದೇ, ಆದರೆ ನಮಗೆ ಯಾವುದು ಅಗತ್ಯ, ಅತೀ ಅಗತ್ಯ ಅದನ್ನು ಮಾತ್ರಾ ಖರೀದಿ ಮಾಡು ಎಂದ ಮಾತು ನೆನಪಾಯ್ತು. ಅಪ್ಪ ಬರೆಯುತ್ತಿದ್ದ ಲೆಕ್ಕದ ಪುಸ್ತಕ ಈಚೆಗೆ ಸಿಕ್ಕಿತು. ಅದರಿಂದ ಲೆಕ್ಕದ ಶಿಸ್ತು ಸಿಕ್ಕಿತು. ಒಂದು ರೂಪಾಯಿ ಖರ್ಚಾದರು ಅದು ಯಾವುದಕ್ಕೆ ಖರ್ಚಾಯಿತು ಎಂಬ ಲೆಕ್ಕ ನನಗೂ ಎಚ್ಚರಿಸಿತು.. ಇದಕ್ಕಾಗಿಯೇ ಈ ವರ್ಷ ಬದುಕಿನ  ಲೆಕ್ಕದ ಪಾಠದ ವರ್ಷ.

ಇಷ್ಟೂ ವರ್ಷ ಒಂದು ಉದ್ದೇಶ, ಒಂದು ಸಿದ್ದಾಂತ ಅಂತ ಓಡಾಡಿದ್ದು ಹೌದು. ಹೀಗೇ ಓಡಾಡುತ್ತಿದ್ದಾಗ ಅಪ್ಪ ಅಂದೇ ಎಚ್ಚರಿಸಿದ್ದು..!. ಆದರೂ ಓಡಾಡಿದ್ದೂ ಸತ್ಯ.  ಸಿದ್ದಾಂತದ ಕಾರಣಕ್ಕೆ ಕೆಲವೊಂದು ಅವಕಾಶ ತಪ್ಪಿದ್ದು ಹೌದು. ಕೆಲವು ಕಾರಣಗಳು , ನನ್ನದೇ ಆದ ನಿಲುವುಗಳು ನನಗೆ ಕೈಕೊಟ್ಟದ್ದು ಹೌದು. ನಾನು ಕಲಿತಿರುವ ಮೂಲ ಸಂಗತಿಗಳನ್ನು ತಪ್ಪಿ ಎಂದೂ ನಡೆದಿಲ್ಲ ಎನ್ನುವ ಸಮಾಧಾನ ಇದೆ. ಈ ಖುಷಿಯೇ ಮತ್ತೆ ಮತ್ತೆ ಕೆಲಸ ಮಾಡುವಂತೆ ಪ್ರೇರೇಪಣೆ ನೀಡುತ್ತದೆ. ನಾವು ಕಾಲಕ್ಕೆ ತಕ್ಕ ಹಾಗೆ ಅಪ್ಡೇಡ್‌ ಆಗಬೇಕು ಎನ್ನುವ ಪಾಠ ಸರಿಯಾದ್ದು. 

ಅಪ್ಪ ಅಮ್ಮ ಇಲ್ಲದ ಮೇಲೆ ಅವರ ಕನಸುಗಳನ್ನು ಬೆಳೆಸಬೇಕು, ಅದೂ ಸಕಾರಾತ್ಮಕವಾಗಿ. ಅಪ್ಪ ಬಹಳಷ್ಟು ಸಿಟ್ಟಾಗುತ್ತಿದ್ದರು, ಅಮ್ಮ ಬಹಳಷ್ಟು ಸಮಾಧಾನ ಮಾಡುತ್ತಿದ್ದರು. ಅಪ್ಪ ಯಾಕೆ ವಿಪರೀತ ಸಿಟ್ಟಾಗುತ್ತಿದ್ದರು ಅಂತ ಈಗ ಅರಿವಾಗಿದೆ. ಅಮ್ಮ ಯಾಕೆ ಸಮಾಧಾನ ಆಗಿದ್ದರು ಎಂದು  ಅರಿವಾಗಿದೆ. ಅಪ್ಪ ಹೇಳಿದ ಮಾತುಗಳನ್ನು ಈಚೆಗೆ ನಮ್ಮ ಮನೆಯ ಮಿತ್ರ ಹೇಳಿದ್ದರು. "ಇವನು ಮನೆ, ಈ ಜಾಗವನ್ನು ಉಳಿಸಿಕೊಂಡಾನೇ, ಹೀಗೆ ಮಾಡಿದರೆ ನೆಕ್ಕಿ ತಿಂದಾರು, ಇವನನ್ನು ಬಿಡಲಿಕ್ಕಿಲ್ಲ" ಅಂತ ಹೇಳಿದ್ದರಂತೆ..!. ಅವರು ಹೇಳಿರುವ ಭಾವವು ಈ ವರ್ಷ ಅರ್ಥವಾಯಿತು..!. 

ಅಪ್ಪನಿಲ್ಲದ 4 ವರ್ಷ ಅಮ್ಮ ಇದೆಲ್ಲವನ್ನೂ ಅರ್ಥ ಮಾಡಿಸಲು ಪ್ರಯತ್ನಪಟ್ಟರೂ ಅರ್ಥ ಆಗಲಿಲ್ಲ. ಅನೇಕ ಬಾರಿ ಯಾರದ್ದೋ ಸುದ್ದಿ ಮಾತನಾಡುವಾಗ ಅಮ್ಮ ಎಚ್ಚರಿಸಿದ್ದು, ಅದರಿಂದ ಏನು ಪ್ರಯೋಜನ, ಅವರೇನಾದರೂ ಮಾಡಲಿ, ನಮ್ಮ ಕೆಲಸ ಮಾಡಿದರಾಯಿತು, ಜಗಳ ಬೇಡ ಎಂದು  ಸಮಾಧಾನವೇ ಬದುಕಿಗೆ ಮುಖ್ಯ ಎನ್ನುತ್ತಾ ಕೊನೆಯವರೆಗೂ ಎಲ್ಲಾ ನೀವನ್ನೂ ಸಹಿಸಿಕೊಂಡು, ಚೆನ್ನಾಗಿ ನೋಡಿದ್ದೀರಿ ಎನ್ನುತ್ತಾ ಇಲ್ಲವಾದರು. ಇದರ ಮಹತ್ವ ಈ ವರ್ಷ ತಿಳಿದುಕೊಂಡೆ... ಸಮಾಧಾನವೇ ಬದುಕು..., ನಾಳೆಯ ಭರವಸೆಯೇ ಬದುಕು.. 

ಈಚೆಗೆ ಕಾರ್ಯಕ್ರಮ ಒಂದರಲ್ಲಿ ಇದ್ದೆ, ಒಬ್ಬರು ನನ್ನ ಪುಟ್ಟ ಮೀಡಿಯಾದ ಬಗ್ಗೆ, ಮಾಡುವ ಕೆಲಸಗಳ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದರು. ನನಗೇ ಗೊತ್ತಿಲ್ಲದ ಹಾಗೆ ಅವರು ಬಹಳ ಪ್ರೇರಣೆ ನೀಡಿದರು.  ಈ ವರ್ಷದ ಕೊನೆಗೆ ಸಿಕ್ಕಿರುವ ಈ ಖುಷಿ , ಮುಂದಿನ ಹೆಜ್ಜೆ ಬಹಳ ಸಹಕಾರಿ. ಅದಕ್ಕಾಗಿಯೇ ಇದುವರೆಗೂ ಸಹಕಾರ ಮಾಡಿರುವ ಎಲ್ಲರನ್ನೂ ನೆನೆದುಕೊಳ್ಳುತ್ತಾ, ಮುಂದಿನ ವರ್ಷ ಸಕಾರಾತ್ಮಕ ವರ್ಷವಾಗಿಸಬೇಕು. 

ಬದುಕು ಇನ್ನಷ್ಟು ಸುಂದರವಾಗಲಿ ಮುಂದಿನ ವರ್ಷ.... ಕೆಲವು ಜವಾಬ್ದಾರಿಗಳು ಇವೆ. ಕೆಲವು ಕೊಡಲು ಇದೆ, ಕೆಲವು ಬರಲು ಇದೆ ಎನ್ನುವ ಎಚ್ಚರಿಕೆ ಇದೆ. ಇದೆಲ್ಲವೂ ಈ ವರ್ಷ ಸೊನ್ನೆಯಾಗಿ.. "ರಾಮ" ಈ ಬಾರಿ ದೇಶದಲ್ಲಿ ಪ್ರತಿಷ್ಟಾಪನೆಯಾದಂತೆ ಇಡೀ ವರ್ಷದ ಕಾರ್ಯದಲ್ಲೂ ರಾಮನ ಆದರ್ಶವೇ ಇರಲಿ ಎನ್ನುವ ಆಶಯ..


14 ಡಿಸೆಂಬರ್ 2023

ಭದ್ರತಾ ವೈಫಲ್ಯ ಹಾಗೂ ರಾಜಕೀಯ..!

ನಿನ್ನೆ ಸಂಸತ್ತಿನ ಒಳಗೆ ಇಬ್ಬರು ನುಗ್ಗಿ ಅಲ್ಲಿ ನಡೆಸಿದ ದಾಂಧಲೆಯ ಬಗ್ಗೆ ಸುದ್ದಿಯಾಯಿತು. ನಿಜಕ್ಕೂ ಅದು ಭದ್ರತಾ ವೈಫಲ್ಯ, ಎರಡು ಮಾತೇ ಇಲ್ಲ. ಇಡೀ ದೇಶದ ಹೃದಯಭಾಗ ಅದು, ಅಲ್ಲಿನ ನಡೆಯುವ ಸಣ್ಣ ವೈಫಲ್ಯವೂ ಬಹುದೊಡ್ಡ ಸಂಗತಿಯೇ ಆಗಿದೆ. ಆದರೆ ಈ ಘಟನೆ ನಡೆದ ಕೆಲವೇ ಹೊತ್ತಲ್ಲಿ ಅದೊಂದು ತೇಲಿ ಹೋದ ಸಂಗತಿಯಾಯಿತು..!. ರಾಜಕೀಯ ದಾಳಿಯಾಗಿ ಬಿಟ್ಟಿತು. ಇದು ಈ ದೇಶದ ವೈಫಲ್ಯ, ಈ ದೇಶದ ಜನರ ದೌರ್ಭಾಗ್ಯ.



ಈಚೆಗೆ ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾದರು. ನನ್ನ ಕಣ್ಣ ಮುಂದೆ ಈಗ ಈ ಘಟನೆ ಬಂದು ನಿಂತಿತು. ಹೀಗೆಲ್ಲಾ ಭದ್ರತಾ ವೈಫಲ್ಯಗಳು ನಡೆದಾಗಲೂ ರಾಜಕೀಯ ಮಾಡುತ್ತಿರುವಾಗ, ಮೊನ್ನೆ ಮೊನ್ನೆ ಹುತಾತ್ಮರಾದ ಪ್ರಾಂಜಲ್‌ ಅಂತಹವರ ಬಲಿದಾನಗಳನ್ನು , ಆ ಕುಟುಂಬ.. ತಂದೆ, ತಾಯಿ, ಪತ್ನಿ ಬಂದು ಸೆಲ್ಯೂಟ್‌ ಮಾಡುವ ಸ್ಥಿತಿ.. ಇದೆಲ್ಲಾ ಒಂಥರಾ ನೋವು. 

ಸಂಸತ್ತಿನ ಒಳಗಿನ ಘಟನೆಯ ನಂತರ ಗಮನಿಸಿ, ಎಲ್ಲಾ ಸಂಸದರು ಓಡಿದರು, ರಾಹುಲ್‌ ಗಟ್ಟಿಯಾಗಿ ನಿಂತರು...!, ಎಲ್ಲಾ ಸಂದರು ಓಡಿದರು ನಳಿನ್‌ ಸಹಿತ ಇತರರು ಹಿಡಿದರು..!. ಇವರನ್ನೆಲ್ಲಾ ಏಕೆ, ಗಡಿಭಾಗಕ್ಕೆ ಕಳುಹಿಸಬಾರದು.? ವೈಫಲ್ಯವನ್ನು ಮುಚ್ಚಲು ಇವರು ರಾಜಕೀಯವಾಗಿ ಹೀಗೆ ಚರ್ಚೆ ಮಾಡಿವಾಗ, ಟ್ರೋಲ್‌ ಮಾಡುವಾಗ ಹೀಗೆ ಅನಿಸುತ್ತದೆ. ಇದನ್ನೂ ರಾಜಕೀಯ ಮೈಲೇಜ್‌ ಪಡೆಯಲು ಯತ್ನಿಸುವ ಇಂತವರಿಗೂ ನಾವೆಲ್ಲಾ ಓಟು ಹಾಕುವ ಮೂರ್ಖರು ಅಲ್ವೇ...?.

ಹೌದು, ಇವರಿಗೆಲ್ಲಾ ಮುಂದೆ ಅಧಿಕಾರ ಮುಖ್ಯ. ಈ ಅಧಿಕಾರಕ್ಕಾಗಿ ಭದ್ರತಾ ವೈಫಲ್ಯವೂ ಸಂಗತಿಯೇ ಅಲ್ಲ, ಅದನ್ನೂ ರಾಜಕೀಯ ದಾಳವಾಗಿ ಎಸೆದು ಬಿಡುವ ಈ ದೇಶವನ್ನು, ಅವರ ಹಿಂಬಾಲಕರನ್ನು ಏನು ಅಂತ ಹೇಳುವುದು ಎನ್ನುವ ಯೋಚನೆಯಲ್ಲಿ ಇರುವಾಗಲೇ, ನನ್ನ ಸಣ್ಣ ಮಗ ಕೆಲವು ಸಮಯಗಳಿಂದ ನನಗೂ ಈ ದೇಶದ ಸೇನೆಯ ಕ್ಯಾಪ್ಟನ್‌ ಆಗಬೇಕು, ಟೆರರಿಸ್ಟ್‌ಗಳನ್ನು ಸಾಯಿಸಬೇಕು ಅಂತ ಹೇಳುತ್ತಿದ್ದ, ಮೊನ್ನೆ ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾದಾದ ಆ ವಿಡಿಯೋವನ್ನು ನೋಡುತ್ತಾ ಛೆ... ಛೆ ಎನ್ನುತ್ತಿದ್ದ ಹಾಗೂ ದೇಶ ಸೇವೆ ಇತ್ಯಾದಿಗಳ ವಿಡಿಯೋ  ಆತ ನೋಡುತ್ತಿದ್ದ.. ಆತನಿಗೆ ಏನೆನ್ನಿಸಿತೋ ಗೊತ್ತಿಲ್ಲ, ನಾನೂ ಕೇಳಿಲ್ಲ. ನನಗಂತೂ ಈ ವ್ಯವಸ್ಥೆಯಲ್ಲಿ ಬೇರೆ ಮಾದರಿಯ ದೇಶ ಸೇವೆ ಮಾಡಿಸಬಹುದು ಅಂತ ಅನಿಸಿದೆ..!.

ಹದಗೆಟ್ಟ ವ್ಯವಸ್ಥೆಗೆ ರಾಜಕೀಯವೇ ಕಾರಣ. ಅದರಲ್ಲೂ ದೇಶ , ಸೇವೆ ಎನ್ನುವವರೂ ಕಡು ಭ್ರಷ್ಟವಾಗುತ್ತಿರುವುದು ಇನ್ನೂ ವಿಷಾದ..!.


10 ಡಿಸೆಂಬರ್ 2023

ಮೌನವಾದವರ ಮನಸಿನ ಮಾತು ಕೇಳುವವರು ಯಾರು.. ..?


ಕಲ್ಲಡ್ಕಕ್ಕೆ ಕುಮಾರಸ್ವಾಮಿ ಭೇಟಿ ನೀಡಿದರು. ಸ್ವಾಗತಾರ್ಹ ಸಂಗತಿ. ಯಾರನ್ನೇ ಆದರೂ ಬದಲಾವಣೆಗೆ, ತಪ್ಪುಗಳ ಬಗ್ಗೆ ಅರಿವಾಗಿ ಮನಪರಿವರ್ತನೆಯಾದರೆ ಸ್ವಾಗತಿಸಬೇಕಾದ್ದು  ನಮ್ಮ ಧರ್ಮ. ಹೀಗಾಗಿ ಕುಮಾರಸ್ವಾಮಿ ಅವರ ಮನಸ್ಸು ಬದಲಾದ್ದಕ್ಕೆ, ಅವರಿಗೆ ತಪ್ಪು ಮಾಹಿತಿ ನೀಡಿರುವುದು, ತಪ್ಪು ಮಾಹಿತಿ ತಿಳಿದುಕೊಂಡದ್ದಕ್ಕೆ ಅವರಿಗೂ ವಿಷಾದವಿದೆ. ಈಗ ಎಲ್ಲವನ್ನೂ ಒಪ್ಪಿಕೊಂಡು ಶಾಲೆಗೆ ಭೇಟಿ ನೀಡಿರುವುದು ಸ್ವಾಗತಾರ್ಹ. 

ಕಲ್ಲಡ್ಕ ಶಾಲೆಯ ಬಗ್ಗೆಯೂ ಎರಡು ಮಾತಿಲ್ಲ. ಸಂಸ್ಕೃತಿ, ಪರಂಪರೆ ಸೇರಿದಂತೆ ನಮ್ಮ‌ ಮೌಲ್ಯಗಳನ್ನು ಎತ್ತಿ ತೋರಿಸುವ ಶಿಕ್ಷಣ ಸಂಸ್ಥೆ. ಇಲ್ಲಿನ ಎಲ್ಲಾ ಚಟುವಟಿಕೆಗಳೂ ಮಕ್ಕಳ ಬೆಳವಣಿಗೆಗೆ ಧನಾತ್ಮಕ ಪರಿಣಾಮ ಬೀರುತ್ತದೆ.


ಕುಮಾರಸ್ವಾಮಿ ಅವರು ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಆದರೆ ವಿಭಿನ್ನವಾದ ಚಿಂತನೆಗಳನ್ನು ಇರಿಸಿಕೊಂಡು, ಶಿಕ್ಷಣ ಸಂಸ್ಥೆಯ ಚಟುವಟಿಕೆಯನ್ನು ವಿರೋಧಿಸಿಕೊಂಡು ಈಗ ಅದೇ ಶಾಲೆಗೆ ಬಂದಿರುವುದು ಮಾತ್ರಾ ಚರ್ಚೆಯಾದ್ದು ಅಷ್ಟೇ. ಏಕೆಂದರೆ ವ್ಯಕ್ತಿ ನಿರ್ಮಾಣ, ವ್ಯಕ್ತಿಯ ಚಿಂತನೆಗಳನ್ನು ಭಾರತೀಯತೆಯ ಕಡೆಗೆ ಬದಲಾಯಿಸುವುದೇ ಇಷ್ಟೂ ವರ್ಷಗಳ ಕಾಲ ಅನೇಕರು ಮಾಡಿಕೊಂಡು ಬಂದಿರುವುದು, ಕಲ್ಲಡ್ಕದ ಶಿಕ್ಷಣ ಸಂಸ್ಥೆ ಕೂಡಾ ಅದನ್ನೇ ಮಾಡುತ್ತಿದೆ.

ಇಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿ ಎಂದರೆ, ಅಷ್ಟೂ ವರ್ಷಗಳ ಕಾಲ ಅಂದರೆ ಎಳವೆಯಿಂದಲೇ ಮೂಲ ಚಿಂತನೆಯಲ್ಲಿ ಅಂದರೆ ಭಾರತ, ದೇಶ, ರಾಷ್ಟ್ರೀಯತೆ ಎಂದು ಹೇಳುತ್ತಾ ಊರಿಡೀ ಓಡಾಡಿದವರು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿಗಳಿಂದ ದೂರ ಇದ್ದು ಸಂಘಟನೆ ಮಾಡುತ್ತಾ ಸಾಗಿದ ಅನೇಕರು ಇಂದು ಕರಾವಳಿ ಜಿಲ್ಲೆಯಲ್ಲಿ ಮೌನವಾಗುತ್ತಾ ಸಾಗುತ್ತಿದ್ದಾರಲ್ಲಾ...!. ಇದಕ್ಕೆ ಕಾರಣ ಏನು ಎಂಬುದು ಬಹಳ ಮುಖ್ಯವಾಗಿದೆ. ಈ ಸಂಖ್ಯೆ ಬೆಳೆಯುತ್ತಿದೆ. ಕೆಲವರು ಬೇರೆಡೆ ಸಾಗಿದ್ದಾರೆ. ಇನ್ನೂ ಕೆಲವರು ಮೌನವಾಗಿದ್ದಾರೆ. ಇಂತಹ ಕೆಲವರನ್ನೂ ಟೀಕಿಸುವುದಿದೆ. ಯಾವತ್ತೂ ಹೊಸಬರ ಸ್ವಾಗತದ ಜೊತೆಗೆ ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದವರನ್ನು ಮತ್ತೆ ಸಕ್ರಿಯ ಮಾಡುವ ಕೆಲಸ ಬಹುದೊಡ್ಡದು. ಇದು ಶಕ್ತಿ ನೀಡುವ ಕಾರ್ಯ. ಕುಮಾರಸ್ವಾಮಿ ಅವರು ರಾಜಕೀಯ ಫಿಗರ್‌ ಆಗಿರಬಹುದು, ತಪ್ಪು ಅರಿವಾಗಿ ಬದಲಾದವರು ಆಗಿರಬಹುದು. ರಾಜಕೀಯದಲ್ಲಿ ಈ ತಪ್ಪುಗಳ ಅರಿವಾಗುವುದು ಏಕೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವ.  

ಆದರೆ ನಿಜವಾಗಿಯೂ ಬದುಕನ್ನು ತೇಯ್ದವರು, ಸಮಯ ನೀಡಿದವರು, ಸಮಯ ಕಳಕೊಂಡವರು, ಮನೆಯವರ ಜೊತೆಗೆ ಸಮಯ ಕೊಡಲಾಗದೆ ಸಂಘಟನೆ ಎಂದು ಓಡಾಡಿದವರು, ಏನೂ ತಪ್ಪು ಮಾಡದೆ ಮೌಲ್ಯಗಳ ಜೊತೆ ಬದುಕಿದವರ ಮನಸಿನ ಮಾತನ್ನು ಕೇಳುವವರು ಯಾರು, ಅವರ ಮೆಲುದನಿಗೆ ಧ್ವನಿ ಆಗುವವರು ಯಾರು...?


09 ಡಿಸೆಂಬರ್ 2023

ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಅಧಿವೇಶನ |

 ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಸ್ವಾಗತಾರ್ಹ. ಅಧಿವೇಶನದಲ್ಲಿ  ಮಾತನಾಡುವುದಷ್ಟೇ ಅಲ್ಲ, ಅದರ ಫಾಲೋಅಪ್‌ ಕೂಡಾ ಅಗತ್ಯ ಇದೆ. ಅದನ್ನೂ ಶಾಸಕರು ಮಾಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಳ್ಳೋಣ. 




ಅಡಿಕೆ ಹಳದಿ ಎಲೆರೋಗ ಬಹಳ ಗಂಭೀರವಾದ ಸಮಸ್ಯೆ. ಈಚೆಗೆ ಒಂದು ಮನೆಗೆ ಭೇಟಿ ನೀಡಿದ್ದೆ, ಅವರಿಗೆ 60 ಕಂಡಿ ಅಡಿಕೆಯಾಗುತ್ತಿತ್ತು, ಅದು ಸೊನ್ನೆಗೆ ತಲುಪಿದ್ದಷ್ಟೇ ಅಲ್ಲ, ಅವರೇ ಹೇಳುವ ಹಾಗೆ ನೆಗೆಟಿವ್‌ ತಲಪಿದೆ. ಅಂದರೆ ಅಡಿಕೆ ತಿನ್ನಲೂ ಬೇರೆ ಕಡೆಯಿಂದ ತರುವ ಸ್ಥಿತಿ ಇತ್ತು. ಇದರ ಗಂಭೀರತೆ ದೂರದಿಂದ ನೋಡಿ, ಹೇಳಿದ ಯಾರಿಗೂ ಅರ್ಥವಾಗದು. ಹೀಗಾಗಿ ಈಗ ಹಳದಿ ಎಲೆರೋಗ ಎಂದು ಹೇಳಿದ ತಕ್ಷಣವೇ ಈ ರೋಗ ತೋಟದಲ್ಲಿ ಕಾಡಿದ ಹಲವು ಕೃಷಿಕರಿಗೆ ನಿರುತ್ಸಾಹ , ಇನ್ನೂ ಆರಂಭದ ಹಂತದಲ್ಲಿ‌ ಇರುವ ಕೃಷಿಕರಿಗೆ ಅದೇನೋ ನಿರೀಕ್ಷೆ. ಇದನ್ನೇ ಬಂಡವಾಳ ಮಾಡಿಕೊಳ್ಳುವವರೂ ಈ ನಡುವೆ ಇದ್ದಾರೆ...!. ಈ ಎಲ್ಲದರ ನಡುವೆ ಪುತ್ತೂರು ಕ್ಷೇತ್ರದ ಶಾಸಕರು ಸದಸನದಲ್ಲಿ  ಮಾತನಾಡಿರುವುದು  ಸ್ವಾಗತಾರ್ಹ.

ಇದರ ಜೊತೆಗೆ ಸಿಪಿಸಿಆರ್‌ಐ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದು, ತಪ್ಪು ಮಾಹಿತಿ ಇರುವುದು  ತಿಳಿಯಿತು. ಈ ಹಿಂದಿನ ಪುತ್ತೂರು ಶಾಸಕರು ಸಿಪಿಸಿಆರ್‌ಐ ಕೇರಳದ ಸಂಸ್ಥೆ ಎಂದು ಸದನದಲ್ಲಿ ಹೇಳಿದ್ದರು. ಈಗಿನ ಶಾಸಕ ಅಶೋಕ್‌ ಕುಮಾರ್‌ ಅವರು ಸಿಪಿಸಿಆರ್‌ಐ ರೈತರಿಗೆ ಬೇಕಾದ ಕೆಲಸ ಮಾಡುತ್ತಿಲ್ಲಎಂದು ಹೇಳಿರುವುದು ವಿಡಿಯೋದಲ್ಲಿ ನೋಡಿದೆ. ಸಿಪಿಸಿಆರ್‌ಐ ವಿಜ್ಞಾನಿಗಳು ಈಗ ಕೃಷಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ರೈತ ಪರವಾಗಿರುವ ನಿರ್ದೇಶಕರೂ  ಇದ್ದಾರೆ. ಈ ಹಿಂದೆ ಕೆಲವು ಅಪವಾದಗಳು ಇದ್ದವು ನಿಜ. ಆದರೆ ಈಗ ಆ ಸ್ಥಿತಿ ಇಲ್ಲ. ಹೊಸ ಹೊಸ ಅನ್ವೇಷಣೆಯನ್ನು ಮಾಡುತ್ತಿದ್ದಾರೆ. ಅಡಿಕೆ ಹಾನಿಕಾರಕ ಅಲ್ಲ ಎಂಬ ವಿಷಯದ ಮೇಲೂ, ಕಾರ್ಬನ್‌ ಸೀಕ್ವೆಸ್ಟ್ರೇಶನ್‌ ಬಗ್ಗೆಯೂ ಮಾತ್ರವಲ್ಲ ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾರೆ. ಈಗ ಅಡಿಕೆ ರೋಗ ನಿರೋಧಕ ತಳಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ, ತಳಿ ಅಭಿವೃದ್ಧಿ ಆಗುತ್ತಿದೆ. ಹೀಗಾಗಿ ಸಿಪಿಸಿಆರ್‌ಐ ಬಗ್ಗೆ ಈಗ ತೀರಾ ನೆಗೆಟಿವ್‌ ಆಗಿ , ವಿಜ್ಞಾನಿಗಳ ಬಗ್ಗೆ ಕಳಪೆಯಾಗಿ ಮಾತನಾಡುವುದು  ಕೃಷಿಕರಿಗೇ ಒಳ್ಳೆಯದಲ್ಲ. ಏಕೆಂದರೆ ಒಳ್ಳೆಯ ಕೆಲಸ ಮಾಡುವ ವೇಳೆ ನೆಗೆಟಿವ್‌ ಆಗಿ ಮಾತನಾಡಿದರೆ ಅವರ ಉತ್ಸಾಹಕ್ಕೆ ಭಂಗವಾದಂತೆ ಎಚ್ಚರಿಕೆ ವಹಿಸಬೇಕಿದೆ. 

ಈ ಹಿಂದೆ ನಾವು ಕೆಲವು ಮಂದಿ ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕ ಸಮಸ್ಯೆಗಳ ಬಗ್ಗೆ ಕೆಲವು ಶಾಸಕರ ಬಳಿ ಹೋಗಿ ದಾಖಲೆ ಸಹಿತ ಮಾತನಾಡಿದ್ದಿದೆ.  ಹೆಚು ಪ್ರಯೋಜನವಾಗದೇ ಇದ್ದಾಗ ಜೋರಾದ ಚರ್ಚೆ ಆರಂಭಿಸಿದಾಗ "ಸರ್ಕಾರ ವಿರೋಧಿ" ಎಂದು ಕೇಳಿಸಿಕೊಂಡದ್ದು ಇದೆ. ಇದೆಲ್ಲಾ ಸಮಸ್ಯೆ ಇಲ್ಲ. ವಾಸ್ತವ ಸಂಗತಿಯನ್ನು ಮಾತನಾಡದೇ ಇರುವುದೇ ಸಮಸ್ಯೆ.

ಏನೇ ಆಗಲಿ, ಈಗ ಅಡಿಕೆ ಬೆಳೆಗಾರರ ಪರವಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡುತ್ತಿದ್ದಾರೆ. ಅವರಿಗೆ ಅಭಿನಂದನೆ. ಈಗ ಹಳದಿ ಎಲೆರೋಗ ಪೀಡಿತ ಪ್ರದೇಶದ ಶಾಸಕರು, ಅಡಿಕೆ ಬೆಳೆಗಾರರ ಪರವಾಗಿರುವ ಇತರ ಶಾಸಕರೂ ಮಾತನಾಡಬೇಕಿದೆ. ಈಗಲೂ ಅವರು ಮೌನ...!

06 ಡಿಸೆಂಬರ್ 2023

ವಾಸ್ತವ.. ಆದರೆ ಕಹಿ...!

ಈ ವಾರದಲ್ಲಿ ಎರಡು ಘಟನೆಗಳು ನಡೆದವು. ಎರಡೂ ಘಟನೆಗಳೂ ರಾಜಕೀಯವಾಗಿಯೇ ಚರ್ಚೆ ಆಯಿತು..!. ವಾಸ್ತವದ ಕಡೆಗೆ ನೋಡಬೇಕಿತ್ತು.

ಭವಾನಿ ರೇವಣ್ಣ ಅವರ ಕಾರಿಗೆ ಬೈಕ್‌ ಡಿಕ್ಕಿಯಾಯಿತು. ಘಟನೆಯ ನಂತರ ಭವಾನಿ ಅವರು ಅತ್ಯಂತ ಕೆಟ್ಟದಾಗಿ ನಡೆದುಕೊಂಡರು ಎನ್ನುವುದು ಹಾಗೂ ಅಹಂಕಾರದ ಪರಮಾವಧಿ ಅಂತ ಎಲ್ಲರೂ ಹೇಳಿದರು. ಅದು ನಿಜವೂ ಹೌದು. ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಹಾಗೆ ಮಾತನಾಡಬಾರದು. ಘಟನೆಯ ನಂತರ ನಡದುಕೊಳ್ಳುವ ರೀತಿಯೂ ಬಹುಮುಖ್ಯ.

ಆದರೆ, ಈ ಘಟನೆಯ ಆಚೆಗೆ ನೋಡಿದರೆ, ನಮ್ಮ ತಪ್ಪೇ ಇಲ್ಲದ ಸಂದರ್ಭ ಯಾವ ವ್ಯಕ್ತಿಯಾದರೂ ಸಿಟ್ಟಾಗುತ್ತಾನೆ. ಬೈಕ್‌ ಸವಾರ ರಾಂಗ್‌ ಸೈಡಲ್ಲಿ ಬಂದು ಡಿಕ್ಕಿ ಹೊಡೆದ ಎನ್ನುವುದು  ಆ ವಿಡಿಯೋದ ಮೂಲಕ ತಿಳಿಯುತ್ತದೆ. ಸಹಜವಾಗಿಯೇ ನಮಗೂ ಸಿಟ್ಟು ಬರುತ್ತದೆ. ನಾನೂ ಕೂಡಾ ನನ್ನ ವಾಹನಕ್ಕೆ ಹಿಂದಿನಿಂದ  ಇನ್ನೊಂದು ವಾಹನ ಡಿಕ್ಕಿ ಹೊಡೆದಾಗವೂ ಮಾಡಬೇಕಾದ ಕೆಲಸ ಮಾಡಿದ್ದಿದೆ. ಅದು ಬಿಡಿ, ಸ್ವಲ್ಪ ಅಡ್ಡ ಬಂದರೆ ಕಾರಿನ ಗ್ಲಾಸ್‌ ಬಂದ್‌ ಮಾಡಿ ಬೈಯುವವರು ಎಷ್ಟು ಜನ  ಇಲ್ಲ. ಇಲ್ಲೂ ಹಾಗೇ ಸಣ್ಣ ವಾಹನದ್ದು ತಪ್ಪಿಲ್ಲ..!. ಏನೇ ಆದರೂ ಶಿಕ್ಷೆ ದೊಡ್ಡ ವಾಹನಕ್ಕೆ...!. ದೊಡ್ಡವರಿಗೇ...!.  ಈಗಲೂ ದ್ವಿಚಕ್ರ ವಾಹನದಲ್ಲಿ ಹೋಗುವವರು ಎಡಕ್ಕೆ ಸಿಗ್ನಲ್‌ ಹಾಕಿ ಬಲಕ್ಕೆ ಹೋಗುವವರು ಇದ್ದಾರೆ...! ಹೈವೇಯಲ್ಲಿ ಎಲ್ಲಿ ಹೋಗಬೇಕು ಎಂದು ಇನ್ನೂ ಅರಿವು ಇಲ್ಲದವರು ಇದ್ದಾರೆ. ದ್ವಿಚಕ್ರ ಮಾತ್ರ ಅಲ್ಲ, ಇತರ ವಾಹನದಲ್ಲೂ ಚಾಲಕ ಬಿಟ್ಟು ಇತರ ಎಲ್ಲರೂ ಸಿಗ್ನಲ್‌ ನೀಡುವುದು ಕಂಡಿದ್ದೇವೆ...!. ಆದರೆ ಇಲ್ಲಿ ಭವಾನಿ ಅವರ ವಾಹನ ತಪ್ಪಿಲ್ಲ. ಸಹಜವಾಗಿಯೇ ತಪ್ಪಿಲ್ಲದ ಕಾರಣ ಸಿಟ್ಟಾಗಿದ್ದಾರೆ. ಆ ಸಿಟ್ಟಿನಲ್ಲಿ ವಾಹನ ಬೆಲೆ, ಅದು ಇದು ಎಲ್ಲಾ ಬಂದಿದೆ..!. ಅದೊಂದು ಬೇಡ ಇತ್ತು. ಅಹಂಕಾರ ಅಷ್ಟೇ... ಆದರೆ ವಾಸ್ತವ ವಿಷಯ...! ಅದು ಅಲ್ಲಿಗೇ ತಣ್ಣಗಾಯಿತು..!. ರಾಂಗ್‌ ಸೈಡಿಂದ ಬಂದದ್ದು...!!?

ಈಗ ಗೂಳಿಹಟ್ಟಿ ಶೇಖರ್‌ ಅವರದು..!. ಜಾತಿಯ ಲಿಂಕ್‌ನ್ನು ತಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂದೆ ತಂದಿರಿಸಿದ್ದು, ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಹೇಳಿಕೆ ಕೊಡುವ ಹಾಗೆ ಮಾಡಿದ್ದು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹತ್ತಿರದಿಂದ ತಿಳಿದಿರುವ ಎಲ್ಲರಿಗೂ ಗೊತ್ತಿದೆ, ಅಲ್ಲಿ ಜಾತಿ ಕೇಳಿ ಕೆಲಸ ಇಲ್ಲ ಎಂದು. ಆದರೆ ಗೂಳಿಹಟ್ಟಿ ಅವರು ಬಿಜೆಪಿ ಜೊತೆ ಲಿಂಕ್‌ ಮಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಡಿದರೆ ಅವರಿಗೆ ಹಾಗೆ ಕಂಡದ್ದು ತಪ್ಪಲ್ಲ..!. ಅಲ್ಲದೇ ಇದ್ದರೆ ಅಲ್ಲಿ ಜಾತಿಯ ವಿಷಯವೇ ಇರುವುದಿಲ್ಲ. ಕೆಲವು ಕಡೆ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದೇ ಎನ್ನುವ ಪರಿಸ್ಥಿತಿ ಇರುವುದು  ಹೀಗಾಗಲು ಕಾರಣ ಎಂದು ಈಚೆಗೆ ಮಾತನಾಡುತ್ತಿದ್ದ ಹಿರಿಯರೊಬ್ಬರು ಹೇಳಿದ್ದರು. ಅದು ಸತ್ಯವಾದ ವಿಷಯ.


04 ಡಿಸೆಂಬರ್ 2023

ಮಾದರಿಯಾದ ಸುಳ್ಯದ ನಾಮಾಮಿ ಕಾರ್ಯ

ಸುಳ್ಯದ ನಾಮಾಮಿ ಬಳಗವು ಕೃಷಿ ವಲಯಕ್ಕೆ, ಗಿಡ ಆಸಕ್ತರಿಗೆ ಮಾದರಿಯಾಗುವಂತಹ ಕೆಲಸವೊಂದನ್ನು ಮಾಡಿದೆ. ಒಂದು ಅಳಿದು ಹೋಗುವ ಗಿಡದ ರಕ್ಷಣೆಯಲ್ಲಿ ಮಾಡಿರುವ ಕೆಲಸ ದಾಖಲಾಗಬೇಕು.

ನಾಮಾಮಿ ಬಳಗವು ಅಪರೂಪದ ಗಿಡಗಳ ಉಳಿಸುವ ಕೆಲಸ ಮಾಡುತ್ತಿತ್ತು. ಈಚೆಗೆ ಹೀಗೇ ಮಾತನಾಡಿವ ವೇಳೆ "ನಾಯಿಕಿತ್ತಳೆ" ಬಗ್ಗೆ ಯಾರೋ ಮಾತನಾಡಿದರು. ಈಗ ಅದು ಕಾಣೆಯಾಗುತ್ತಿದೆ ಎಂದೂ ಚರ್ಚೆಯಾಯಿತು. ತಕ್ಷಣವೇ ಕೆಲಸ ಶುರು ಮಾಡಿದ ತಂಡವು ನಾಯಿ ಕಿತ್ತಳೆ ಗಿಡಗಳನ್ನು ಹುಡುಕಲು ಆರಂಭಿಸಿತು. ಜೊತೆಗೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರೂ ಜೊತೆಯಾದರು. ಕಿತ್ತಳೆಯ ಹಿಂದೆ ಹೋದಂತೆಯೇ ಅನೇಕ ಮಾಹಿತಿಗಳು ದೊರೆತವು. ಅಪರೂಪದ ತಳಿಗಳು ಇರುವುದು  ತಿಳಿಯಿತು. ಈ ಎಲ್ಲಾ ಆಯ್ಕೆಯ ನಂತರ ಸಿಹಿಯಾಗಿರುವ ನಾಯಿಕಿತ್ತಳೆ ಹಣ್ಣಿನ ಮರಗಳನ್ನು ಹುಡುಕಿ ಕಸಿ ಕಟ್ಟಿ ಗಿಡ ಅಭಿವೃದ್ಧಿ ಮಾಡಿದರು. ಇದೆಲ್ಲಾ ಮೂರು ತಿಂಗಳಿನಲ್ಲಿ ನಡೆದ ಕೆಲಸ...!. ಈಗ ಈ ಗಿಡಗಳ ಲೋಕಾರ್ಪಣೆ ನಡೆಯಿತು.ನಾನೂ ಈ ಕಾರ್ಯಕ್ರಮದಲ್ಲಿ ಕೇಳುಗನಾಗಿ, ಗಿಡ ಪಡೆಯುವ ಕೃಷಿಕನಾಗಿ ಭಾಗವಹಿಸಿದೆ. ಅಂದರೆ ಒಂದಷ್ಟು ಮನೆಗಳಲ್ಲಿ ನಾಯಿಕಿತ್ತಳೆ ಗಿಡ ಬೆಳೆಯಲು ಆರಂಭವಾಗುತ್ತಿದೆ. ಒಂದು ಪುಟ್ಟ ಬಳಗ ಮಾಡಿರುವ ಬಹುದೊಡ್ಡ ಕೆಲಸ ಇದು. 



ಇನ್ನೂ ಬಹಳ ಆಸಕ್ತಿ ಇದೆ ಇಲ್ಲಿ. ಗಿಡ ಲೋಕಾರ್ಪಣೆಯ ವೇಳೆ ಬಹುತೇಕ ಆಸಕ್ತರು ಬಂದಿದ್ದರು. ಒಬ್ಬರು ಸಿಟ್ರಸ್‌ ವಿಭಾಗದಲ್ಲಿ ಅದರೆ ಕಿತ್ತಳೆ ವಿಭಾಗದಲ್ಲಿ ಅನೇಕ ವೆರೈಟಿ ಇರುವು ಬಗ್ಗೆ ಮಾತನಾಡಿದರು. ವಿದೇಶದಲ್ಲಿದ್ದ ಅವರು ಈಗ ಕೃಷಿಯಲ್ಲಿದ್ದಾರೆ, ಇಂತಹ ಆಸಕ್ತಿಗಳನ್ನು ಮುಂದುವರಿಸಿದ್ದಾರೆ. ಇನ್ನೊಬ್ಬರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಸದ್ಯ ವರ್ಕ್‌ ಫ್ರಂ ಹೋಂ. ಅವರೂ ಈ ನಾಯಿಕಿತ್ತಳೆ ಗಿಡಕ್ಕಾಗಿ ದೂರದಿಂದ ಬಂದಿದ್ದರು..!. ಇಷ್ಟೇ ಅಲ್ಲ, ನಾಮಾಮಿ ತಂಡದ ಪ್ರಮುಖ ಸದಸ್ಯ ಜಗದೀಶ 74 ವರ್ಷದ ಸಕ್ರಿಯ ಯುವಕ...!. ನಮ್ಮಂತಹ ಯುವಕರಿಗೆ ಉತ್ಸಾಹ ತುಂಬುವ, ಇನ್ನಷ್ಟು ಕೆಲಸ ಕೃಷಿ ಬೆಳವಣಿಗೆಯಲ್ಲಿ ಮಾಡಬೇಕು ಎನ್ನುವ ಆಸಕ್ತಿಯನ್ನು ಹೆಚ್ಚಿವ ಹಾಗಿದೆ ಅವರ ಕೆಲಸಗಳು...

ಇಂತಹ ತಂಡಗಳು ಅಲ್ಲಲ್ಲಿ ಇನ್ನಷ್ಟು ಹೆಚ್ಚಾಗಬೇಕು, ಇಲ್ಲಿ ಜನ ಮುಖ್ಯ ಅಲ್ಲ, ಕೇವಲ ಐದು ಜನ ಇದ್ದರೂ ಸಾಕು, ಯಶಸ್ಸು ಇರುವುದು ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ. ನಮಗೂ ಇಂತಹ ತಂಡ ಜೊತೆ ಇರುವುದಕ್ಕೆ, ಕೃಷಿ ಬೆಳವಣಿಗೆಯ ಬಗ್ಗೆ, ಹೊಸ ಸಾಧ್ಯತೆಗಳ ಬಗ್ಗೆ ಚರ್ಚಿಸುವುದಕ್ಕೆ ಆಸಕ್ತಿ...


01 ಡಿಸೆಂಬರ್ 2023

ಹಿಂದುತ್ವ ಮತ್ತು ಕರಾವಳಿ...!

 ಕರಾವಳಿ ಎಂದರೆ ಹಿಂದುತ್ವ. ಈಚೆಗೆ ಅದು ಮತ್ತೆ ಮತ್ತೆ ಸಾಬೀತಾಗುತ್ತಿದೆ.  ಆದರೆ ಕಳೆದ ಕೆಲವು ಸಮಯಗಳಿಂದ ಕರಾವಳಿ ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲೆಯಲ್ಲಿ‌ ಒಂಥರಾ ಒಳಜಗಳ. ಅಂದರೆ ಹಿಂದುತ್ವದ ಗುಂಪುಗಳಲ್ಲೇ ಒಳಜಗಳ. ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅದರ ಫಲಿತಾಂಶ ಪ್ರಕಟವಾಯಿತು. ಈಗಲೂ ಮತ್ತೆ ಮಂಗಳೂರು ಕ್ಷೇತ್ರದಲ್ಲಿ ಅದೇ ವಾತಾವರಣ ಸೃಷ್ಟಿಯಾಗುತ್ತಿದೆ. ಕಾರಣ ಏನು..? 

ಕೆಲವು ಸಮಯದ ಹಿಂದೆ ಒಂದು ಖಾಸಗಿ ಸಂಸ್ಥೆ, ಅವರದೇ ಕಾರಣಕ್ಕೆ  ರಾಜಕೀಯ ಕಾರಣಕ್ಕೆ ಸಮೀಕ್ಷೆ ನಡೆಸಿತು. ಆಗ ಅವರ ರಾಜಕೀಯ ಹಾಗೂ ಆಂತರಿಕ ಕಾರಣದಿಂದ ಸಮೀಕ್ಷೆ ನಡೆಸಿದ್ದರಿಂದ ಗೌಪ್ಯವಾಗಿಟ್ಟಿತ್ತು. ಕರಾವಳಿ ಹಾಗೂ ಅಭಿವೃದ್ಧಿ ಎನ್ನುವ ಕಾರಣದಿಂದ ನನ್ನಲ್ಲೂ ಖಾಸಗಿಯಾಗಿ ಮಾತನಾಡಿದ್ದ ಕಾರಣದಿಂದ ಇದರ ಫಲಿತಾಂಶದ ಬಗ್ಗೆ ಆಗಾಗ ಕೇಳುತ್ತಲೇ ಇದ್ದೆ,  ಒಂಚೂರು ಮಾಹಿತಿ ನೀಡಿದ್ದರು.

ಕರಾವಳಿ ಜಿಲ್ಲೆ ಎನ್ನುವುದು ಹಿಂದುತ್ವದ ಹೆಸರಿನಲ್ಲಿಯೇ ಗೆಲ್ಲುತ್ತದೆ. ಇಲ್ಲಿ ಅಭಿವೃದ್ಧಿಗಿಂತಲೂ ಮುಖ್ಯವಾಗಿ ಹಿಂದುತ್ವವೇ ಮುಖ್ಯವಾಗುತ್ತದೆ. ಇದಕ್ಕಾಗಿ ಸಣ್ಣ ಸಣ್ಣ ಸಂಗತಿಯೂ ಇಲ್ಲಿ ಬಹುಮುಖ್ಯವಾಗುತ್ತದೆ. ಇಲ್ಲಿ ಜಾತಿಯ ಹೆಸರಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಹಿಂದುತ್ವ ಮಾತ್ರವೇ ಸಾಕಾಗುತ್ತದೆ, ಅಭಿವೃದ್ಧಿ ಕಡಿಮೆ ಇದ್ದರೂ ಪರವಾಗಿಲ್ಲ. ಅದಕ್ಕಾಗಿಯೇ ಕೆಲವು ಘಟನೆ ನಡೆಯುತ್ತದೆ, ಬೆಳೆಯುತ್ತದೆ ಎಂದಿದ್ದರು.  ಇಲ್ಲಿ ಯಾವ ಪಕ್ಷವೇ ಆಗಲಿ, ಹಿಂದುತ್ವ ಬಿಟ್ಟು ಇಲ್ಲಿ ಗೆಲ್ಲುವುದು ಕಷ್ಟ. ಆದರೆ ಈಚೆಗೆ ಇಲ್ಲಿ ಟ್ರೆಂಡ್‌ ಬದಲಾಗುತ್ತಿದೆ ಹಿಂದುತ್ವದ ಹೆಸರಿನ ರಾಜಕೀಯ ಸಾಮಾನ್ಯರಿಗೂ ತಿಳಿಯುತ್ತಿದೆ, ಹೀಗಾಗಿ ಬದಲಾವಣೆ ಸಾಧ್ಯತೆ ಇದೆ  ಎನ್ನುವುದು ಆ ಸಮೀಕ್ಷಾ ವರದಿ ಹೇಳಿತ್ತು.ಅದರ ಸಣ್ಣ ರಿಸಲ್ಟ್‌ ಪುತ್ತೂರು ಚುನಾವಣೆ. ಇದು ಕರಾವಳಿ ಜಿಲ್ಲೆಯ, ಅದರಲ್ಲೂ ಮಂಗಳೂರು ಜಿಲ್ಲೆಯ ಭವಿಷ್ಯದ ಕನ್ನಡಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವಕ್ಕೆ  ಪುತ್ತೂರು ಮತ್ತೆ ಪ್ರಯೋಗ ಶಾಲೆಯಾಯಿತು. ಕರಾವಳಿ ಜಿಲ್ಲೆಯಲ್ಲಿ ಸುಳ್ಯ ಹಾಗೂ ಪುತ್ತೂರು ಹಿಂದುತ್ವದ ಪ್ರಯೋಗಶಾಲೆಯ ಹಾಗೆ. ಇಂದು ಇದೆರಡೂ ಕ್ಷೇತ್ರದಲ್ಲಿ ಹಿಂದುತ್ವವೇ ಮತ್ತೆ ಮತ್ತೆ ಎದ್ದು ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಹಿಂದುತ್ವದ ಹೆಸರಿನಲ್ಲಿ ಗೆದ್ದರು, ಶಾಸಕನಾಗಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೂ ಹಿಂದೂ ವಿರುದ್ಧವಾದ ಯಾವ ಚಟುವಟಿಕೆಯೂ ಮಾಡಿಲ್ಲ, ಹೀಗಾಗಿ ಅವರಿಗೆ ಈಗ ಪ್ಲಸ್‌ ಆಗಿದೆ..!.ಆದರೆ ಬಿಜೆಪಿ, ಸಂಘಪರಿವಾರ ಇನ್ನಷ್ಟು ಕುಸಿದಿದೆ. ಯಾಕೆ ಕುಸಿದಿದೆ...?.ಯಾವತ್ತೂ ಇಷ್ಟೊಂದು ಕುಸಿದಿರಲಿಲ್ಲ. ಅಂದು ಶಕುಂತಳಾ ಶೆಟ್ಟಿ ಅವರು ಸ್ವಾಭಿಮಾನಿಯಾಗಿ ಸ್ಫರ್ಧೆ ಮಾಡಿದಾಗಲೂ ಬಿಜೆಪಿ-ಸಂಘಪರಿವಾರ ತನ್ನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿತ್ತು.ಅದು ನಿಜಕ್ಕೂ ಪ್ರಯೋಗಶಾಲೆಯೂ ಆಗಿತ್ತು.


ಈಚೆಗೆ ಅರುಣ್‌ ಕುಮಾರ್‌ ಪುತ್ತಿಲ ಅವರ ನೇತೃತ್ವದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ಪೂರ್ವಬಾವಿ ಸಭೆ ನಡೆದಿತ್ತು. ಪ್ರೀತಿಯಿಂದ ಸಭೆಗೆ ಆಹ್ವಾನಿಸಿದ್ದರು, ಹೋಗಿದ್ದೆ. ಸಭೆಯಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಸೇರಿದ್ದರು. ನನಗೆ ಅಚ್ಚರಿ ಆಗಿತ್ತು. ಆ ನಂತರ ವಿಚಾರಿಸಿದೆ, ಒಂದು ದಿನದ ಮುಂದೆ ಕರೆ ಮಾಡಿ ಆಹ್ವಾನಿಸಿದ ಸಭೆ ಅದು. ಚುನಾವಣೆ ಮುಗಿದ ಬಳಿಕವೂ ಅಷ್ಟೊಂದು ಪ್ರಮಾಣದಲ್ಲಿ ಸೇರಿದ ಜನರು ಹಾಗೂ ಭಾಗವಹಿಸಿದ ಬಹುತೇಕ ಜನರು ಕೂಡಾ ಸಿದ್ಧಾಂತದ, ಹಿಂದುತ್ವ ಎನ್ನುತ್ತಿದ್ದವರೇ ಇದ್ದರು. ಅಚ್ಚರಿ ಆಯ್ತು, ಚುನಾವಣೆ ಮುಗಿದ ನಂತರವೂ ಅದೇ ಪ್ರಮಾಣದಲ್ಲಿ ಪುತ್ತಿಲ ಅವರ ಬೆಂಬಲಿಗರು, ಜನರು ಅಭಿಮಾನಿಗಳಾಗಿದ್ದಾರೆ ಎಂದರೆ... ?. ಒಬ್ಬರನ್ನು ಕೇಳಿದೆ, ಏನು ಕತೆ ಅಂತ... ಅವರು ಹೇಳಿದ ಸಂಗತಿ ಬಹಳ ಕುತೂಹಲ ಮೂಡಿಸಿತು..

ಅರುಣ್‌ ಕುಮಾರ್‌ ಅವರು ಏಕೆ ರಾಜಕೀಯ ಪ್ರವೇಶ ಮಾಡಬಾರದು..?.ಅನೇಕ ಸಮಯಗಳಿಂದ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದೇ ಕಾರಣ ಅಲ್ಲ ಎಂದೂ ಹಲವು ಕಾರಣ ಹೇಳಿದರು. ನನಗೆ ಇದು ವಿಶೇಷ ಅಂತ ಅನಿಸಲಿಲ್ಲ. 

ಮುಂದೆ ಹೇಳುತ್ತಾ ಅವರು ಹೇಳಿದರು, ನಮಗೆ ಸಭೆಯಲ್ಲಿ ಮಾತನಾಡುತ್ತಾ ಹೇಳುತ್ತಾರೆ, ಭ್ರಷ್ಟಾಚಾರ ನಿಲ್ಲಿಸಬೇಕು, ಹಿಂದುತ್ವವೇ ಉಸಿರಾಗಬೇಕು, ಅನ್ಯರೊಂದಿಗೆ ವ್ಯವಹಾರ ಮಾಡಬಾರದು, ಜಾತಿ ಸಂಘಟನೆಗಳಲ್ಲಿ ಕಾಣಿಸಬಾರದು..... ಹೀಗೇ ಹತ್ತಾರು ಸಂಗತಿಗಳನ್ನು ಹೇಳುತ್ತಾರೆ. ಆದರೆ ಕೆಲವು ದಿನ ಕಳೆದು ನೋಡಿದರೆ ಹೀಗೆ ಹೇಳಿದ ಪ್ರಮುಖರೆಲ್ಲಾ ಅದನ್ನೇ ಮಾಡುತ್ತಿರುತ್ತಾರೆ. ಭ್ರಷ್ಟಾಚಾರದಲ್ಲಿ ಎದ್ದು ಕಾಣುತ್ತಾರೆ, ಜಾತಿ ಸಂಘಟನೆಯ ಒಳಗೆ ಇರುತ್ತಾರೆ, ಅನ್ಯರೊಂದಿಗೆ ಕದ್ದು ವ್ಯವಹಾರ ಮಾಡುತ್ತಾರೆ...!, ಜಾತಿ ಸಂಘಟನೆಯಲ್ಲಿ ಇರಬಾರದು ಎನ್ನುತ್ತಾ ಜಾತಿಗಳನ್ನು ಒಡೆಯುತ್ತಾರೆ, ಮತ್ತೆ ಜಾತಿಗಳಿಗೇ ಮಣೆ ಹಾಕುತ್ತಾರೆ...ಹಾಗಿದ್ದರೆ ಹಿಂದುತ್ವ ಎಲ್ಲಿದೆ... .?.  ಹೀಗೇ ಪಟ್ಟಿ ಬೆಳೆಸುತ್ತಾ..., ಏನಿಲ್ಲದೇ ಇದ್ದರೆ ಅರುಣಣ್ಣ ಕಾರ್ಯಕರ್ತನ ಜೊತೆಗೆ ಇರುತ್ತಾರೆ. ಅವರ ಮೇಲೂ ಆರೋಪ ಮಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಆದರೆ ಅದು ವ್ಯಕ್ತಿಗತ ಆರೋಪ. ಆಗದೇ ಇದ್ದವರನ್ನೆಲ್ಲಾ ಇದೇ ರೀತಿ ಮಾಡುವುದು,.. ಎನ್ನುತ್ತಾ... ಹಲವು ಘಟನೆಗಳನ್ನು ವಿವರಿಸಿದರು...

ಇಂದು ಬಹುತೇಕ ಜನರು ಅರುಣ್‌ ಕುಮಾರ್‌ ಪುತ್ತಿಲ ಅವರ ಜೊತೆಗೆ ಇರುವ ಕಾರಣ ಇದು. ಹಿಂದುತ್ವಕ್ಕಾಗಿ ಅಷ್ಟೇ. ಇದು ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಇರುವ ಆಕ್ರೋಶದ ಧ್ವನಿ ಅಷ್ಟೇ. ಇವರಿಗೆಲ್ಲಾ ಅನ್ಯ ಪಕ್ಷಗಳ ಜೊತೆ ಹೋಗಲು ಮನಸ್ಸಿಲ್ಲ, ಅವರೆಲ್ಲಾ ಹಿಂದುತ್ವ ಎನ್ನುವ ಕಾರಣಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಜೊತೆ ಇದ್ದಾರೆ. ಹಿಂದುತ್ವ ಹೇಳುತ್ತಾ, ಹಿಂದೂ ಸಮಾಜ ಎನ್ನುತ್ತಾ ಒಳ ಒಪ್ಪಂದ, ತಮಗೆ ಕಪ್ಪ ಕೊಡುವವರಿಗೇ ಮಣೆ ಹಾಕುವುದು, ಕಮಿಶನ್‌ ಪಡೆಯುವುದು.... ಇದೆಲ್ಲಾ ಎಲ್ಲಾ ಕಾರ್ಯಕರ್ತರಿಗೆ ಇಂದಿನ ಡಿಜಿಟಲ್‌ ಮಾಧ್ಯಮದ ಯುಗದಲ್ಲಿ ತಕ್ಷಣವೇ ತಿಳಿಯುತ್ತದೆ. 

ಚುನಾವಣೆಗಳಲ್ಲಿ ಬರುವ ಫಂಡ್‌ ಎಲ್ಲೆಲ್ಲಿಗೋ ರವಾನೆಯಾಗುವುದು, ಮಿತಿಗಿಂತ ಜಾಸ್ತಿ ಖರ್ಚು ತೋರಿಸುವುದು ಇದೆಲ್ಲಾ ಕಾರ್ಯಕರ್ತರಿಗೆ ತಕ್ಷಣವೇ ತಿಳಿಯುತ್ತದೆ. ಇಂದು ಇಂತಹ ಸಂಗತಿಗಳು ಕಾರ್ಯಕರ್ತರಿಗೆ ತಿಳಿದ ಕಾರಣದಿಂದಲೇ ಅಸಮಾಧಾನದ, ನೊಂದ ಮತಗಳೆಲ್ಲಾ ಪುತ್ತಿಲ ಪರವಾಗಿಯೋ, ತಿಮರೋಡಿ ಪರವಾಗಿಯೋ, ಸತ್ಯಜಿತ್‌ ಪರವಾಗಿಯೋ ವಾಲುತ್ತದೆ. ಗಮನಿಸಿ ನೋಡಿ, ಇವರೆಲ್ಲಾ ಹಿಂದುತ್ವಕ್ಕಾಗಿಯೇ ಹಿಂದೆ , ಈಗಲೂ ಕೆಲಸ ಮಾಡುವವರು. ಇವರ ಮೇಲೆ ವಿರೋಧ ಇರಬಹುದು, ಆದರೆ ಜನರು ಈ ವಿರೋಧ, ಆರೋಪಗಳನ್ನು ಒಪ್ಪುತ್ತಿಲ್ಲ. ಯುವ ಕಾರ್ಯಕರ್ತರೆಲ್ಲರೂ ಹಿಂದುತ್ವದ ಇಂತಹ ನಾಯಕರ ಪರವಾಗಿಯೇ ಇರುವುದು ಗಮನಿಸಬೇಕಾದ ಅಂಶ. ಇದರ ಪರಿಣಾಮವೇ ಗ್ರಾಪಂ ಚುನಾವಣೆಯ ಫಲಿತಾಂಶ, ಮತ್ತೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಸೇರುವ ಯುವ ಕಾರ್ಯಕರ್ತರು...!. ಈಚೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆಗಳಲ್ಲಿ ಕಾಣುವ ಉತ್ಸಾಹ, ಸಂಘಟನೆಯೇ ಇದಕ್ಕೆಲ್ಲಾ ಉತ್ತರಗಳು.

ಆದರೆ ಇಂದು ಪುತ್ತಿಲ, ಸತ್ಯಜಿತ್‌, ತಿಮರೋಡಿ ಅವರಂತಹ ಅನೇಕರನ್ನು ವಿರೋಧ ಮಾಡುವವರನ್ನು ಗಮನಿಸಿ. ಒಂದಿಲ್ಲೊಂದು ಸಂಘಟನೆಯಲ್ಲಿ, ಒಂದಿಲ್ಲೊಂದು ವ್ಯವಹಾರದಲ್ಲಿ ಇರುತ್ತಾರೆ, ಯಾರದೋ ಹಿಂಬಾಲಕರು ಆಗಿರುತ್ತಾರೆ. ಇದೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯನೂ ಈಗ ಅರ್ಥ ಮಾಡಿಕೊಳ್ಳದಷ್ಟು ದಡ್ಡನಲ್ಲ.

ಹಿಂದೆ, ಸಭೆಯಲ್ಲಿ ಸಲಹೆ, ಸೂಚನೆ ನೀಡುತ್ತಿದ್ದ ಹಿರಿಯರು,  ಸ್ವತ: ಅವರೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಈ ಕಾರಣದಿಂದ ಗೌರವ ಉಳಿಸಿಕೊಳ್ಳುತ್ತಿದ್ದರು. ಇಡೀ ವ್ಯವಸ್ಥೆಯನ್ನು ಈ ಕಾರಣದಿಂದಲೇ ನಿರ್ವಹಿಸುತ್ತಿದ್ದರು, ನಿಯಂತ್ರಣಕ್ಕೆ ತರುತ್ತಿದ್ದರು. ಯಾವ ಅಸಮಾಧಾನಗಳು ಇದ್ದರೂ ಒಂದೇ ಮಾತಿನಲ್ಲಿ ನಿಯಂತ್ರಣ ಮಾಡುತ್ತಿದ್ದರು. ಅಂದರೆ ಒಳಗೂ-ಹೊರಗೂ ಒಂದೇ ಆಗಿದ್ದರು. ಇಂದಿಗೂ ಸಂಘಪರಿವಾರದಲ್ಲಿ, ಬಿಜೆಪಿಯಲ್ಲಿ ಅಂತಹವರು ಇದ್ದಾರೆ. ಆದರೆ ಅವರೆಲ್ಲಾ ಮೌನವಾಗಿದ್ದಾರೆ. ಕೆಲವರು ಹತಾಶರಾಗಿದ್ದಾರೆ. ನೊಂದಿದ್ದಾರೆ. ಖಾಸಗಿಯಾಗಿ ಮಾತನಾಡಿಸಿದರೆ "ದೊಡ್ಡ ಮಾಹಿತಿ" ನೀಡುತ್ತಾರೆ.

 ಈಗಿನ ಬಹುತೇಕ ಜನರ ಜೊತೆ ಅದರಲ್ಲೂ ಕರಾವಳಿಯ ಸಂಘಪರಿವಾರದ "ಹಿರಿಯರ" ಜೊತೆ ಒಬ್ಬ ಬೆಂಬಲಿಗ ಇರುತ್ತಾನೆ. ಎಲ್ಲಾ ಕಡೆಯೂ ಅವರ ಹಿಂದೆಯೇ...!. ಹೀಗಾಗಿ ಅವನೇ ಎಲ್ಲಾ ವಿಭಾಗಕ್ಕೂ..!. ಬಿಜೆಪಿಯಿಂದಲೂ ಸ್ಫರ್ಧೆ, ಸಹಕಾರ ಭಾರತಿಯಿಂದಲೂ ಸ್ಫರ್ಧೆ, ಧಾರ್ಮಿಕ ಕ್ಷೇತ್ರದಿಂದಲೂ ಕಣಕ್ಕೆ , ಕೆಲವು ನಿಗಮಗಳಿಗೆ ಸ್ಫರ್ಧೆ...!. ಇನ್ನೊಬ್ಬ ಯುವ ಕಾರ್ಯಕರ್ತನಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ವ್ಯಕ್ತಿ ನಿರ್ಮಾಣದ ಉದ್ದೇಶವೇ ತಪ್ಪಿ ಹೋದಂತಿದೆ ಕರಾವಳಿ ಜಿಲ್ಲೆಯಲ್ಲಿ..!. ಭ್ರಷ್ಟರ ಕೂಟವಾಗಿ ಬೆಳೆಯುತ್ತಿದೆ ಈಗ. ತುಳಿಯುವುದೇ ಉದ್ದೇಶವಾಗಿದೆ.

ಈಗ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮಾತುಕತೆ ನಡೆಸಿ ಮತ್ತೆ ಬಿಜೆಪಿ ಅಥವಾ ಸಂಘಪರಿವಾರದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ಆದಾಗ, ಕೆಲವರು ಹೇಳಿದ್ದಿದೆಯಂತೆ, " ಅವರು ಮಾಡಿರುವ ಡ್ಯಾಮೇಜ್‌ ಸರಿಯಾಗ್ತದಾ" ಎಂದು...!

ಅನೇಕರಿಗೆ ಗೊತ್ತಿಲ್ಲ, ಪುತ್ತಿಲ ಅವರ ಜೊತೆಗೆ ಇರುವ ಬಹುತೇಕ ಯುವಕರು ಹೇಳುವುದು, ಹಿಂದುತ್ವಕ್ಕೆ ನಿಮ್ಮಿಂದ ಡ್ಯಾಮೇಜ್‌ ಆಗಿದೆ, ಪುತ್ತಿಲ, ಸತ್ಯಜಿತ್‌ ಅವರಂತಹವರಿಂದ ಆಗಿಲ್ಲವೆಂದು ಹೇಳುತ್ತಿರುವವರೇ...!., ಇದಕ್ಕಾಗಿಯೇ ಇಂದು ಪುತ್ತಿಲ ಅವರ ಜೊತೆ, ಸತ್ಯಜಿತ್‌ ಅವರ ಜೊತೆ, ತಿಮರೋಡಿ ಅವರ ಜೊತೆ ಯುವಕರು ಸೇರುತ್ತಾರೆ. 

ಕಳೆದ ಬಾರಿಯ ಪುತ್ತೂರು ಚುನಾವಣೆ ಗಮನಿಸಿ, ಚುನಾವಣೆಯ ವೇಳೆ ಅರುಣ್‌ ಪುತ್ತಿಲ ಮೇಲೆ ಇನ್ನಿಲ್ಲದ ಅಪಪ್ರಚಾರ ಮಾಡಿದರು. ಯಾವುದೂ ಸಾಮಾಜಿಕವಾಗಿ ಸದ್ದು ಮಾಡಲಿಲ್ಲ, ಸೋಶಿಯಲ್‌ ಮೀಡಿಯಾದಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡಿದರು. ಅದಕ್ಕೆ ಜನರು ಸೊಪ್ಪು ಹಾಕಲಿಲ್ಲ. ಅಂದರೆ ಯಾವುದೋ ಒಂದು ಘಟನೆಯನ್ನು ಇರಿಸಿಕೊಂಡು ಅದನ್ನು ಮುನ್ನೆಲೆಗೆ ತರಲು ಪ್ರಯತ್ನ ಮಾಡಿದರು. ಸಾಕಷ್ಟು ಪತ್ರಿಕಾಗೋಷ್ಟಿ ಮಾಡಿದರು...!. ಇದನ್ನೇ ಇನ್ನೂ ಹಲವರು ಮಾಡಿಲ್ಲವೇ..? ಚುನಾವಣೆಯ ಹಣವನ್ನು ಏನೆಲ್ಲಾ ಮಾಡಿದ್ದರು..? ದೇವಸ್ಥಾನದಲ್ಲಿ ಡಬಲ್‌ ಟೆಂಡರ್‌ ಮಾಡಿಸಿಲ್ಲವೇ..? , ಜಮೀನು ಖರೀದಿ ಮಾಡಿಲ್ಲವೇ, ಕೆಲವು ಪ್ರಕರಣಗಳಲ್ಲಿ ಮಾತುಕತೆ ನಡೆಸಿ "ಡೀಲ್"‌ ಮಾಡಿಲ್ಲವೇ..  ಎಂದು ಮರುಪ್ರಶ್ನೆ ಮಾಡುವ ಮಟ್ಟಕ್ಕೆ ಈಗ ಜನರೂ, ಹಿಂದೂ ಕಾರ್ಯಕರ್ತರು ಮಾಹಿತಿ ಕಲೆ ಹಾಕಿದ್ದಾರೆ. ಅದಕ್ಕಾಗಿಯೇ ಕಳೆದ ಬಾರಿ ಅರುಣ್‌ ಪುತ್ತಿಲ ಅವರ ಮೇಲೆ ಮಾಡಿರುವ ಆರೋಪಗಳೂ ಕೆಲಸ ಮಾಡಿಲ್ಲ. ಈಗಲೂ ಇಂತಹ ಆರೋಪ, ಅಪವಾದಗಳು ಕೆಲಸ ಮಾಡದು. ಎಲ್ಲವೂ "ವೈಟ್"‌ ಆಗಿರುವ ಕಾರಣದಿಂದ ಈಗಲೂ ಇಂತಹ ಅಪವಾದಗಳು ಇನ್ನಷ್ಟು ಗಟ್ಟಿಯಾಗಲು ಕಾರಣವಾಗುತ್ತಿದೆ.

ಈಗ ಕರಾವಳಿಯಲ್ಲಿ ಬಿಜೆಪಿ, ಸಂಘಪರಿವಾರ ಆಂತರಿಕವಾಗಿ ಸೋಲು ಕಂಡಿದ್ದರೆ ಅದು ಇಲ್ಲಿನ ನಾಯಕರ ಕಾರಣದಿಂದ. ಒಳಒಪ್ಪಂದದ ಕಾರಣದಿಂದ, ಭ್ರಷ್ಟಾಚಾರದಿಂದ, ಕಪ್ಪಕಾಣಿಕೆಯ ಕಾರಣದಿಂದ, ಹಿಂದುತ್ವ ಎನ್ನುತ್ತಾ ಜಾತಿಯನ್ನು ಒಡೆದಿರುವ ಕಾರಣದಿಂದ, ನಡೆಯೊಂದು ನುಡಿಯೊಂದು ಆಗಿರುವ ಕಾರಣದಿಂದ...

ಈಗ  ಲೋಕಸಭಾ ಚುನಾವಣೆಯ ಸಮಯದಲ್ಲೂ ಅದೇ ಕಾಣುತ್ತಿದೆ.. ಅನೇಕ ಕಾಣಿಕೆಗಳ ಪ್ರಭಾವ ಈಗಲೇ ಕಾಣಲು ಆರಂಭವಾಗಿದೆ. ಕಪ್ಪಕಾಣಿಕೆಯ ಪ್ರಭಾವಕ್ಕೆ ಕರಾವಳಿಯಲ್ಲಿ ಜನರು ಸೊಪ್ಪು ಹಾಕುವುದಿಲ್ಲ ಎಂದು ಪುತ್ತೂರಿನಲ್ಲಿ ಸಂದೇಶ ನೀಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಕರಾವಳಿ ಸರಿಯಾಗುವ ಲಕ್ಷಣಗಳು ಇಲ್ಲ. ಹೀಗಾಗಿ ಇದೇ ವೇಳೆ ಕಾಂಗ್ರೆಸ್‌ ಹಿಂದುತ್ವ ಪರವಾಗಿರುವ ಸಮರ್ಥನನ್ನು ಅಭ್ಯರ್ಥಿಯಾಗಿ ಇಳಿಸಿದರೆ ಕರಾವಳಿಯಲ್ಲಿ "ಕೈ"ಎತ್ತುವುದು ಖಚಿತ... ಆದರೆ ಅಲ್ಲೂ "ರಾಜಕೀಯ" ಮೇಳೈಸುತ್ತಿದೆ...!.

ಚುನಾವಣೆಯ ಹೊತ್ತಿಗೆ ಇನ್ನು ಕಾಣುವುದು ಮೋದಿ ಹವಾ..!. ಯಾವ ವ್ಯಕ್ತಿಯೂ, ಯಾವ ಪಕ್ಷವೂ ತನ್ನ ನಾಯಕನ ಹಾದಿಯಲ್ಲಿ, ನಾಯಕ ಮಾದರಿ ಅನುಸರಿಸಿದರೆ ಮಾತ್ರವೇ ಗ್ರಾಮೀಣ ಮಟ್ಟಕ್ಕೂ ನಾಯಕನ ಉದ್ದೇಶ ತಲುಪಲು ಸಾಧ್ಯ. ಆದರೆ ಇಂದು ದಕ್ಷಿಣ ಕನ್ನಡದಲ್ಲೇ ಗಮನಿಸಿದರೆ ಸ್ವಚ್ಛ ಭಾರತ್..‌, ಗ್ರಾಮೀಣ ಪ್ರದೇಶದಲ್ಲೂ ಡಿಜಿಟಲ್‌ , ಯುವಕರಿಗೆ ಉದ್ಯೋಗ, ಕೃಷಿ ಬೆಳವಣಿಗೆ ಸೇರಿದಂತೆ ಮೋದಿ ಅವರ ಉದ್ದೇಶಗಳನ್ನು ತಲುಪಿಸಲು ಕೆಲಸ ಮಾಡಿದ ನಾಯಕರು ಎಷ್ಟು..!? ಇಂದೂ ಕಸದ ರಾಶಿ ಬೀಳುತ್ತಿದೆ..!. ನೀವು ಗಮನಿಸಿ ಅದೇ ಮೋದಿ ಹೆಸರು ಹೇಳುವ ನಾಯಕರ ಕಟ್ಟಡದ ಸುತ್ತಲೂ ಬೇಕಾದರೆ ಕಸ ಇರುತ್ತದೆ...!. ಹಾಗಾಗಿ ಮೋದಿ ಹೆಸರಿನಲ್ಲಿ ಬರುವವನೂ ಅಂತಹ ಕೆಲಸದ ಆಸಕ್ತಿ ಉಳ್ಳವನೂ ಆಗಿರಬೇಕು...!

ಈ ರಾಜಕೀಯದ ನಡುವೆ ಅಪಾಯ ಹಾಗೂ ಭಯ ಏನೆಂದರೆ ಚುನಾವಣೆಗೂ ಮುನ್ನ ಗಲಭೆಗಳಾದೀತಾ....!!?

ಆದರ್ಶ ಗ್ರಾಮದಲ್ಲಿ ಅನುದಾನಕ್ಕೆ "ಭಗೀರಥ ಪ್ರಯತ್ನ " | ಇದುವೇ ಐದು ವರ್ಷದ ಮಾರ್ಕ್‌ ಕಾರ್ಡ್....!‌ |

ಪ್ರಧಾನಿಗಳ ಕನಸಿನ ಕೂಸು ಎಂಬಂತೆ,  ಪ್ರತೀ ಸಂಸದರಿಂದ ಆದರ್ಶ ಗ್ರಾಮದ ಆಯ್ಕೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಳ್ಪ ಆದರ್ಶ ಗ್ರಾಮ.

ಪ್ರಧಾನಿಗಳ ಕನಸು ಹೇಗಿತ್ತೆಂದರೆ, ಪ್ರತೀ ಸಂಸದರು ತಮ್ಮ ಸ್ವಂತ ನಿಧಿಯನ್ನು ಹೊರತುಪಡಿಸಿ ಪ್ರತ್ಯೇಕವಾದ ಅನುದಾನ  ಈ ಗ್ರಾಮಗಳಿಗೆ ತರಬೇಕು. ಅಂದರೆ ಖಾಸಗಿ ಕಂಪನಿಗಳ ಜೊತೆ ಆ ಕ್ಷೇತ್ರದ ಸಂಸದ ಮಾತುಕತೆ ನಡೆಸಿ ಅವರಿಂದ ಸಿಎಸ್‌ಆರ್‌ ಫಂಡ್‌ ತರುವುದು. ಅಭಿವೃದ್ಧಿಯ ಹೊರತಾಗಿ ಅಂದರೆ ಭೌತಿಕ ಅಭಿವೃದ್ಧಿ ಹೊರತಾಗಿ , ಸಾಮುದಾಯಿಕ ಅಭಿವೃದ್ಧಿ ಬೇರೆಯೆ ಇರುತ್ತದೆ. ಅದು ಜನರ ಚಿಂತನಾ‌ ಮಟ್ಟದ ಬೆಳವಣಿಗೆ, ಸಾಮಾಜಿಕ‌ ಬದ್ಧತೆ ಇತ್ಯಾದಿಗಳೂ ನಡೆಸುವುದು.ಹಾಗೆಂದು ನಾನು ಆದರ್ಶ ಗ್ರಾಮದ ಬಗ್ಗೆ ತಿಳಿದುಕೊಂಡದ್ದು. ಎಂತಹ ಅದ್ಭುತವಾದ ಐಡಿಯಾ. ಹಾಗೇ ಆ ಗ್ರಾಮ ಎಲ್ಲಾ ಆಯಾಮಗಳ ಮೂಲಕವೂ ಆದರ್ಶ ಆಗಬೇಕು.‌ಅದಕ್ಕಾಗಿ ಆಯ್ಕೆ ಆಗಬೇಕಿರುವುದು ತೀರಾ ಹಿಂದುಳಿದ ಗ್ರಾಮ ದಕ್ಷಿಣ  ಕನ್ನಡ ಜಿಲ್ಲೆಗೆ ಆಯ್ಕೆಯಾದ್ದು ಬಳ್ಪ ಗ್ರಾಮ.‌ ಬಹುಪಾಲು ಅರಣ್ಯ‌ಇರುವ ಗ್ರಾಮ.‌ಒಂದು ಕಾಲದಲ್ಲಿ ‌ವಿಪರೀತ ಮಂಗನಕಾಯಿಲೆ ಕಾಡಿದ ಗ್ರಾಮ. ಈಗಲೂ ಚಿರತೆ,‌ಕಾಡುಪ್ರಾಣಿಗಳ‌ ಹಾವಳಿ ಇರುವ ಊರು.‌ ಇಂತಹ ಊರಲ್ಲಿ ಸಹಜವಾಗಿಯೇ ಅಭಿವೃದ್ಧಿಯ ಪಟ್ಟಿ ದೊಡ್ಡದೇ ಇರುತ್ತದೆ.

ನಾನು ನಿತ್ಯವೂ ಬರುವುದು,‌ಓಡಾಡುವುದು ಇದೇ  ಬಳ್ಪದ ಮೂಲಕ. ಬಳ್ಪ ಎಂಬ ಆದರ್ಶ ಗ್ರಾಮಕ್ಕೆ ಈಗ ಸಾಕಷ್ಟು ಅನುದಾನ ಬಂದಿದೆ..!. 

ಇಲ್ಲಿ ಬಳ್ಪದ ಸರ್ಕಾರಿ ಶಾಲೆಯನ್ನು ಸುಸಜ್ಜಿತವಾಗಿ ಮಾಡಲಾಗಿದೆ, ರಿಂಗ್‌ ರಸ್ತೆ ಮಾಡಲಾಗಿದೆ, ಬೋಗಾಯನಕೆರೆ ಅಭಿವೃದ್ಧಿ ಮಾಡಲಾಗಿದೆ, ಕೆಲವು ಹಳ್ಳಿ ರಸ್ತೆ ದುರಸ್ತಿ ಆಗಿದೆ, ಪಂಚಾಯತ್‌ ಕಟ್ಟಡ ಆಗಿದೆ... ಹೀಗೇ ಕೆಲವು ಕೆಲಸ ಆಗಿದೆ. ಇನ್ನೂ ಪಟ್ಟಿ ಇದೆ...ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಹಾಗಾಗಿ ಅದರ ಪಟ್ಟಿ ಇನ್ನೂ.... ಅದು ಮುಗಿಯದ್ದು, ಮುಗಿಯಲೂ ಬಾರದು... 

ಈ ಎಲ್ಲದರ ನಡುವೆ ಸರ್ಕಾರದ ಐದು ವರ್ಷ ಅವಧಿ ಪೂರೈಸುತ್ತಾ ಬರುತ್ತಿದ್ದಂತೆಯೇ ಈಚೆಗೆ ಕೆಲವು ದಿನಗಳಿಂದ ಆದರ್ಶ ಗ್ರಾಮ ಬಳ್ಪದ ಅಲ್ಲಲ್ಲಿ ಬ್ಯಾನರ್‌ ಕಾಣುತ್ತಿದೆ... 

ಅದರಲ್ಲಿ ಅನುದಾನದ ಪಟ್ಟಿ, ಅನುದಾನ ತರಲು ಶ್ರಮಿಸಿದ ಯುವಕರೊಬ್ಬರನ್ನೂ ಉಲ್ಲೇಖಿಸಲಾಗಿದೆ. ಈಗ ಇರುವುದು ಪ್ರಶ್ನೆ. ಹಾಗಿದ್ದರೆ ಆದರ್ಶ ಗ್ರಾಮ ವೈಫಲ್ಯವಾಗಿದೆ ಎಂದು ಹೇಳಲು ಕಾರಣವೇನು..? ಸಂಸದರು ಅಥವಾ ಪ್ರಧಾನಿಗಳ ಪಕ್ಷದ ಪ್ರಮುಖರು ಯಾರೊಬ್ಬರೂ ಆದರ್ಶ ಗ್ರಾಮದ ಬಗ್ಗೆ ಯೋಚನೆ ಮಾಡಿಲ್ಲವೇ...? ಗ್ರಾಮದ ಅಭಿವೃದ್ಧಿಗೆ, ಆದರ್ಶ ಗ್ರಾಮಕ್ಕಾಗಿ ಅನುದಾನ ತರಲು ಪ್ರಯತ್ನಿಸಿದ ಯುವಕ ಒಬ್ಬನೇ ಎಷ್ಟು ಪ್ರಯತ್ನ ಮಾಡಬಲ್ಲ...?. ಒಂದು ಗ್ರಾಮದ ಅಭಿವೃಧ್ಧಿಗೆ ಒಬ್ಬ ಯುವಕ ಮಾತ್ರಾ ಸಾಕಾಗದು. ಒಂದು ಕಡೆ "ಭಗೀರಥ ಪ್ರಯತ್ನ" ಎಂದು‌ ಉಲ್ಲೇಖಿಸಲಾಗಿದೆ. ಆದರ್ಶ ಗ್ರಾಮದ ಅಭಿವೃದ್ಧಿಗೆ ಭಗೀರಥ‌ ಪ್ರಯತ್ನದ ಮೂಲಕ ಅನುದಾನ ಬಂದಿದೆ ಎಂದು‌ ಫಲಾನುಭವಿ ಜನರೇ ಹೇಳುತ್ತಾರಾದರೆ , ದೂರದಿಂದ ನಿಂತ ಯಾರೂ ಮಾತನಾಡಬೇಕಾಗಿಲ್ಲ...!. ಅದರ ರಿಸಲ್ಟ್ ಕಾರ್ಡ್ ಇಲ್ಲೇ ಇದೇ...!



ಅಷ್ಟೇ ಅಲ್ಲ, ಇಲ್ಲಿ ಅಷ್ಟೊಂದು ಪಂಚಾಯತ್‌ ಸದಸ್ಯರು ಪ್ರಧಾನಿಗಳ ಕನಸಿಗೆ ಪ್ರಯತ್ನವೇ ಮಾಡಿಲ್ಲವೇ...?. ಹಾಗಿದ್ದರೆ, ಇಲ್ಲಿ ಒಂದು ವೇಳೆ ಆದರ್ಶ ಗ್ರಾಮ ವೈಫಲ್ಯವಾಗಿದ್ದರೆ ಅದು ಸಂಸದರಿಂದ, ಪ್ರಧಾನಿಗಳ ಕಾರಣದಿಂದ ಅಲ್ಲ, ಸಕ್ರಿಯ ಯುವಕರ ಕೊರತೆಯಿಂದ. ಪ್ರಧಾನಿಗಳ ಪಕ್ಷದ ಕಾರಣದಿಂದ, ಇದುವರೆಗೂ ಇದ್ದ ಈ ಕ್ಷೇತ್ರದ ಶಾಸಕರ ಕಾರಣದಿಂದಲೇ...!?

ಅಂದು ಕೆಲವು ಸಮಯ ನಾನು ಪತ್ರಿಕೆಯಲ್ಲಿ ಬರೆಯುವ ಮೂಲಕ ರಾಷ್ಟ್ರಜಾಗೃತಿ ಮಾಡುತ್ತಿದ್ದೆ. ನನಗೆ ಗೊತ್ತಿದೆ, ಜನರೇ ಮಾಡಿದ ಹಳ್ಳಿಯ ಒಂದು ಕಟ್ಟವನ್ನೂ ಆದರ್ಶ ಎಂದು ಬರೆದಿದ್ದೆ. ಹಾಲು ಸೊಸೈಟಿ ಇಡೀ ಗ್ರಾಮದಲ್ಲಿ ಗೋಬರ್ ಗ್ಯಾಸ್ ಮಾಡುವ, ಹೈನುಗಾರಿಕೆ ಮಾಡುವ ಕನಸನ್ನೂ ಬರೆದಿದ್ದೆ, ಕೇಸು ರಹಿತ ಗ್ರಾಮದ ಕನಸನ್ನೂ ಬರೆದಿದ್ದೆ...! ಅದೆಲ್ಲಾ ಆಗಿದೆಯೋ ಇಲ್ಲವೋ ಗೊತ್ತಿಲ್ಲ.

ಇನ್ನೂ ಒಂದು ಕನಸು ಇಲ್ಲಿ ಇದೆ, ಪ್ರತೀ ಊರು ಅಭಿವೃದ್ಧಿ ಆಗಲು, ಅನುದಾನ ತರಿಸಬಲ್ಲ ಸಾಕಷ್ಟು ಯುವಕರು, ಸಕ್ರಿಯ ಕಾರ್ಯಕರ್ತರು ಅಗತ್ಯ ಇದೆ ಎನ್ನುವುದಕ್ಕೆ ಬಳ್ಪವೇ ಸಾಕ್ಷಿ. ಒಬ್ಬ ಯುವಕ ಭಗೀರಥ ಪ್ರಯತ್ನದಿಂದ ಅನುದಾನ ತರಿಸಿರುವ ಬಗ್ಗೆ ಜನರು ಮಾತನಾಡುತ್ತಾರಾದರೆ, ಅಂತಹ ಯುವಕರು ಪ್ರತೀ ಗ್ರಾಮದಲ್ಲಿ ಬೆಳೆಯಬೇಕಿದೆ.ಗ್ರಾಮದ ಅಭಿವೃದ್ಧಿಗೆ...! , ಅದಕ್ಕೆ ಬಳ್ಪ ಆದರ್ಶ...!‌

ಬಳ್ಪದಂತಹ ಆದರ್ಶ ಗ್ರಾಮಕ್ಕೆ ಭಗೀರಥ ಪ್ರಯತ್ನದ ಮೂಲಕ ಅನುದಾನ ತರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಹಾಗೂ ಜನರು ಇದನ್ನು ಬಹಿರಂಗವಾಗಿ ಹೇಳುತ್ತಾರೆ ಎನ್ನುವುದೇ ಐದು ವರ್ಷದ ಆದರ್ಶ ಗ್ರಾಮದ ಮಾರ್ಕ್‌ ಕಾರ್ಡ್...!

ಕುಲ್ಕುಂದ ಜಾನುವಾರು ಜಾತ್ರೆ...!

ಒಂದು ಸಂಪ್ರದಾಯ, ಒಂದು ಸಂಸ್ಕೃತಿ, ಒಂದು ಇತಿಹಾಸ...

ನಾವೆಲ್ಲಾ ಸಂಸ್ಕೃತಿ ಉಳಿಸುವ ಬಗ್ಗೆ ಮಾತನಾಡುತ್ತಲೇ ಇರಬೇಕಾದರೆ , ಸದ್ದಿಲ್ಲದೇ ಒಂದು ಸಂಸ್ಕೃತಿ , ಒಂದು ಐತಿಹಾಸಿಕ ಘಟನೆಯೊಂದು ಮರೆಯಾಗಿ ಬಿಟ್ಟಿತು. ಕೇವಲ ಸಾಂಕೇತಿಕವಾಗಿ ಉಳಿದುಕೊಂಡಿತು.

ಸುಮಾರು 10 ವರ್ಷಗಳ ಹಿಂದೆ ಅಂದರೆ , ಅದು 2012. ಅಂದು ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಚರ್ಚೆ, ಗದ್ದಲ. ಎಲ್ಲಾ ಮೀಡಿಯಾಗಳೂ ಅಲ್ಲೇ ಇದ್ದವು ಕೆಲವು ದಿನ...!.

ಕುಲ್ಕುಂದ ಜಾನುವಾರು ಜಾತ್ರೆ ಮೂಲಕ ಕಸಾಯಿಖಾನೆಗೆ ಗೋವುಗಳು ಸಾಗಾಟ ಮಾಡಲಾಗುತ್ತದೆ. ಇದಕ್ಕಾಗಿ ಈ ಆಚರಣೆ ನಿಲ್ಲಬೇಕು ಎಂಬುದು ಚರ್ಚೆಯ ಸಾರಂಶವಾಗಿತ್ತು. ಈ ಚರ್ಚೆಗೆ ನಿಜವಾಗಿಯೂ ಅಂದು ಅರ್ಥ ಇತ್ತು. ಕಸಾಯಿಖಾನೆಗೆ ಎತ್ತುಗಳು, ಕೋಣಗಳು ಸಾಗಾಟ ಆಗುತ್ತಿತ್ತು ಕೂಡಾ.

ಆದರೆ ಇದರ ತಡೆ ಹೇಗೆ ? ಈ ಬಗ್ಗೆ ಚರ್ಚೆ ಆಯಿತು. ಆಗ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಿಂದಲೇ ವ್ಯವಸ್ಥೆ ಮಾಡಿಸಿಕೊಂಡು, ಈ ಸಂಪ್ರದಾಯ ಉಳಿಯಬೇಕು, ಸಂಸ್ಕೃತಿ ಉಳಿಯಬೇಕು ಹಾಗೂ ಗೋವುಗಳು ಕುಲ್ಕುಂದಲ್ಲಿ ಇರಬೇಕು, ಬರಬೇಕು ಎಂದು ಯೋಚಿಸಿಕೊಂಡು , ಜಾನುವಾರು ಜಾತ್ರೆಯ ಸಮಯದಲ್ಲಿ ಗೋತಳಿ ಪ್ರದರ್ಶನ ಹಾಗೂ ಗೋವಿಗೆ ಸಂಬಂಧಿಸಿದ ಕಾರ್ಯಗಳು, ಸಮ್ಮೇಳನ ಇತ್ಯಾದಿ ನಡೆಸುವುದು ಹೆಚ್ಚು ಸೂಕ್ತ ಎಂದು ನಿರ್ಧರಿಸಲಾಗಿತ್ತು.  ಆ ಪ್ರಕಾರ ಕೆಲವು ಸಮಯ ಹಾಗೇ ನಡೆಯಿತು.

ಆದರೆ‌ ಜಾನುವಾರು ಜಾತ್ರೆ‌ ನಡೆಸುವ ಜವಾಬ್ದಾರಿ ಪಂಚಾಯತ್ ಮೇಲೆ ಇದೆ ಎಂದೂ ಅಂದು ಚರ್ಚೆಯಾಗಿತ್ತು. ಸಂಪ್ರದಾಯ ಉಳಿಸುವ ನೆಲೆಯಲ್ಲಿ ದೇವಸ್ಥಾನದ ವತಿಯಿಂದ ನಡೆಸುವುದು ಸೂಕ್ತ ಎಂದು ಅಂದು ಅಲಿಖಿತವಾದ ಮಾತುಕತೆ ನಡೆದಿತ್ತು‌,‌"ಹಿರಿಯರ" ಮುಂದೆ...!. ಈಗ ಅದೆಲ್ಲವೂ ಮಾಯವಾಗಿದ್ದೇಕೆ ಎಂಬುದು ಗೊತ್ತಿಲ್ಲ. ಮುಂದಿನ ಬೆಳವಣಿಗೆ‌ ಗೊತ್ತಿಲ್ಲ. 

ಈ ಚಿತ್ರ 2011 ರಲ್ಲಿ ತೆಗೆದದ್ದು


ಈಗ ಮುಖ್ಯವಾಗಿ ಕುಕ್ಕೆ ಕ್ಷೇತ್ರದಲ್ಲಿ ಬಹುಶ: ಇಂತಹ ಆಚರಣೆ ನಡೆಸುವುದಕ್ಕೆ ಅನುದಾನದ ಕೊರತೆ ಇರಲಿಕ್ಕಿಲ್ಲ. ಇದೊಂದು ಐತಿಹಾಸಿಕ ಘಟನೆ, ಇತಿಹಾಸ ಕೂಡಾ ಇದೆ. ನಾವು ಯಾವುದೋ ಜಯಂತಿ ಆಚರಣೆ ಮಾಡುವುದಕ್ಕೆ ವಿರೋಧ ಮಾಡುತ್ತೇವೆ, ನಾವು ಗೋವುಗಳ ರಕ್ಷಣೆ ಬಗ್ಗೆ ಮಾತನಾಡುತ್ತೇವೆ, ನಾವು ಗೋವು ಸಾಕುವಂತೆ ಒತ್ತಾಯ ಮಾಡುತ್ತೇವೆ... ಈ ಎಲ್ಲಾ ಗದ್ದಲಗಳ ನಡುವೆ, ನಮ್ಮದೇ ಒಂದು ಆಚರಣೆಯನ್ನು ನಡೆಸುವುದಕ್ಕೆ ನಮಗೆ ಮರೆತೇ ಹೋಯಿತೇ....!?.

ಗೋವು ಉಳಿಸುವುದರಿಂದ, ಗೋವಿನ ಪ್ರೀತಿ ಬೆಳೆಸುವುದರಿಂದ ಯಾವ "ರಾಜಕೀಯ" ಲಾಭವೂ ಇಲ್ಲ...!, ಅದೇ ಗೋವು ಕಸಾಯಿಖಾನೆಗೆ ಸಾಗಾಟವಾದರೆ, ಅದರಿಂದ ಮಾತ್ರವೇ "ರಾಜಕೀಯ" ಲಾಭ ಇದೆ...!. ಇಷ್ಟೇ ಇಂದಿನ ಜಗತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ...!

05 ನವೆಂಬರ್ 2022

ಅಡಿಕೆ ಹಳದಿ ಎಲೆರೋಗದ ಸಭೆ | ಕಾರಣಗಳನ್ನು ಹುಡುಕುತ್ತಲೇ ಹೋದರೆ ಹೇಗೆ ? | ಒಂದು ಹೆಜ್ಜೆ ಮುಂದೆ ಹೋಗುವುದು ಯಾವಾಗ ? |

 


ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್‌ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ.  ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.

ಈಗ ಇರುವ ಪ್ರಶ್ನೆ ಎಂದರೆ, ಅಡಿಕೆ ಎಲೆಚುಕ್ಕಿ ರೋಗದಲ್ಲಿಯೂ ವಿಜ್ಞಾನಿಗಳು ಕಾರಣ ಪತ್ತೆ ಮಾಡಿದ್ದಾರೆ, ಅದಕ್ಕೆ ಬೇಕಾದ ಔಷಧಿಯನ್ನೂ ಹೇಳಿದ್ದಾರೆ. ಹಳದಿ ಎಲೆರೋಗದಲ್ಲಿಯೂ ಈಗ ಕಾರಣ ಸಿಕ್ಕಿದೆ, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳು ಇನ್ನೂ ಸಿಕ್ಕಿಲ್ಲ. ದಾರಿಗಳು ಇದೆ, ಅವು ದೀರ್ಘ ಕಾಲಿಕ.  ಆದರೆ ಇದುವರೆಗೂ ಈ ದಾರಿ ಚಾಲನೆಗೆ ಬಂದಿಲ್ಲ. ವಿಜ್ಞಾನಿಗಳ ಕೆಲಸ ರೋಗದ ಪತ್ತೆ ಹಾಗೂ ಅದಕ್ಕೆ ಪರಿಹಾರ ಮಾರ್ಗ. ಪರಿಹಾರಗಳನ್ನು ಅನುಷ್ಟಾನ ಮಾಡುವ ಕೆಲಸ ಸಂಸ್ಥೆಗಳಿಗೆ, ಸರ್ಕಾರಗಳಿಗೆ, ಆಡಳಿತಕ್ಕೆ.

ಅಡಿಕೆ ಬೆಳೆಗಾರರಿಗೆ ಈಗ ಬೇಕಾದ್ದು ಅಡಿಕೆ ಹಳದಿರೋಗಕ್ಕೆ ಪರಿಹಾರ ಇದೆಯೋ ಇಲ್ಲವೋ ? ಇದ್ದರೆ ಏನು ಮಾಡಬಹುದು ? ಇಲ್ಲದೇ ಇದ್ದರೆ ಬದುಕಿಗೆ ಪರ್ಯಾಯ ಏನು ? ಇದಿಷ್ಟೇ ಈಗ ರೈತರು ಬಯಸುವುದು. ಇದರಲ್ಲಿ ವಿಳಂಬ ಆದಷ್ಟು ಕೃಷಿಕರಿಗೇ ಸಮಸ್ಯೆಯಾಗುತ್ತದೆ. ಹೀಗಾಗಿ ಯಾವ ಸಭೆಗಳು ನಡೆದರೂ ಅತಿ ಶೀಘ್ರದಲ್ಲಿಯೇ ಉತ್ತರವೂ ಸಿಗಬೇಕಿದೆ. ಮುಂದೆ ಅಡಿಕೆ ಸಮಸ್ಯೆಯ ಬಗ್ಗೆ ಇಷ್ಟರಲ್ಲೇ ಚರ್ಚಿಸುತ್ತಾ, ಸಂಶೋಧನೆ ಮಾಡುತ್ತಾ ಕೂತರೆ ಹೇಗೆ ? ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಭವಿಷ್ಯ ಹೀಗೇ ಹಲವಾರು ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯ ಆಗಲಿದೆ. ಈ ಬಗ್ಗೆ ಸಾಮಾಹಿಕ ಚಿಂತನೆ, ಚರ್ಚೆ ನಡೆಯಬೇಕಾಗುತ್ತದೆ. ಇದರ ಜೊತೆಗೇ ಅಡಿಕೆ ಭವಿಷ್ಯದ ಬಗ್ಗೆಯೇ ಗಂಭೀರವಾದ ಚಿಂತನೆ ಅಗತ್ಯ ಇದೆ. 

ನಾವು ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೆಲ್ಲಾ ಪಿಪಿಟಿ ನೋಡಿ, ಕೇಳಿ ಸಾಕಾಗಿದೆ. ಆದರೆ ಅದಕ್ಕಿಂತ ಆಚೆಗೆ ಯಾವ ಫಲಿತಾಂಶವೂ, ಪ್ರಯೋಗದ ಫಲಿತಾಂಶವೂ ಲಭ್ಯವಾಗುತ್ತಿಲ್ಲ. ಇನ್ನೂ ಸಂಶೋಧನೆಯ ಹಾದಿಯಲ್ಲಿಯೇ ಉಳಿದುಕೊಂಡರೆ ಹೇಗೆ? ಹಳದಿ ಎಲೆರೋಗ ಕಾಣಿಸಿಕೊಂಡು ವರ್ಷಗಳು ಅನೇಕ ಉರುಳಿದರೂ ಪರಿಹಾರ ಕಾಣದೇ ಇರುವುದು  ಈ ದೇಶ ಗಂಭೀರ ವಿಷಯ ಆಗಬೇಕು. ಪ್ರತೀ ಬಾರಿಯೂ ನಾವು ಹಳದಿ ಎಲೆರೋಗದ ಪಿಪಿಟಿ ನೋಡಿ, ಕಾರಣ ಪೈಟೋಪ್ಲಾಸ್ಮಾ ಎಂದು ತಿಳಿದುಕೊಂಡು ಬಂದರೆ ಹೇಗೆ? ಇನ್ನು ಒಂದು ಹೆಜ್ಜೆಯಾದರೂ ಮುಂದೆ ಹೋಗಬೇಕು. ನಿನ್ನೆಯ ಸಭೆಯಲ್ಲೂ ಕಾರಣಗಳನ್ನು ಎಲ್ಲರೂ ಹೇಳಿದರು. ಪರಿಹಾರದ ಕಡೆಗೆ ಬರುವಾಗ ಮೌನವಾಗುತ್ತದೆ, ಚರ್ಚೆ ಹೆಚ್ಚಾಗುತ್ತದೆ, ಟೀಕೆ, ವಿರೋಧ, ಅಸಮಾಧಾನಗಳು ಕಾಣುತ್ತದೆ. ಇನ್ನು ಅನುದಾನಗಳು ಸಿಗುತ್ತವೆ ಎಂದಾಗ ಇನ್ನೊಂದಿಷ್ಟು ಪ್ರಾಜೆಕ್ಟ್‌ ಗಳು ತಯಾರು ಮಾಡುವವರು ಇದ್ದಾರೆ. ಇದರಿಂದ ಕೃಷಿಕರಿಗೇ ಸಮಸ್ಯೆ ಹೊರತು ಬೇರೆ ಪ್ರಯೋಜನವೇ ಇಲ್ಲ. ಎಲ್ಲಾ ಪರಿಹಾರ ಮಾರ್ಗಗಳೂ ದೀರ್ಘ ಕಾಲಿಕ, ಕೊರೋನಾ ಮಾದರಿಯಲ್ಲಿ ತಕ್ಷಣದ ಪರಿಹಾರಗಳು ಇಲ್ಲವೇ ಇಲ್ಲ.  

ಅಡಿಕೆಯ ಹಳದಿ ಎಲೆರೋಗದ ಬಗ್ಗೆ 2000 ಇಸವಿಯ ನಂತರ ಯಾವ ಸಂಶೋಧನೆಗಳು ನಡೆದಿಲ್ಲ ಎನ್ನುವುದು ನಿನ್ನೆಯ ಸಭೆಯಲ್ಲಿ ಕೊಟ್ಟ ಮಾಹಿತಿ ಪತ್ರದಲ್ಲಿ ಉಲ್ಲೇಖ ಇತ್ತು. ಈಚೆಗೆ ಸರ್ಕಾರವೂ ಅಡಿಕೆ ಎಂದರೆ ಕಡತಗಳನ್ನು ಬದಿಗೆ ಸರಿಸುತ್ತಿದೆ.ಏಕೆಂದರೆ ಅಡಿಕೆ ಹಾನಿಕಾರಕ ಎಂಬ ಕಾರಣದಿಂದ. 

ಈಗ ನಡೆದ ಸಭೆಯಲ್ಲೂ ಎಲ್ಲಾ ವಿಜ್ಞಾನಿಗಳು ಪಿಪಿಟಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದುವರೆಗೆ ನೀಡಿದ ಎಲ್ಲಾ ಮಾಹಿತಿಗಳನ್ನೂ ಮತ್ತೆ ಹೇಳಿದ್ದಾರೆ.   ಇನ್ನು ಅದರ ಫಾಲೋಅಪ್‌ ಮಾಡುವ ಕೆಲಸ ಮಾತ್ರಾ. ಅದರ ನೇತೃತ್ವ ಇರುವುದು ಈಗ ಅಷ್ಟೇ.

ಇದರ ಜೊತೆಗೆ ಈಚೆಗೆ ನನಗೆ ಅನಿಸುತ್ತಿದೆ, ಅಡಿಕೆ ಹಳದಿ ಎಲೆರೋಗ, ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೃಷಿಕರೆಲ್ಲಾ ಸಂಘಟಿತರಾಗಲೇಬೇಕಿದೆ. ಇಲ್ಲದಿದ್ದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈಗಾಗಲೇ ಸಂಘಟನೆಯ ನೆಲೆಯಲ್ಲಿ ನಾವೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುತ್ತಿದ್ದೇವೆ. ಎಲ್ಲರೂ ಜೊತೆಯಾದರೆ ಪರಿಹಾರ ಬೇಗನೆ ಸಾಧ್ಯವಿದೆ. ಚಿಂತನೆಗಳಲ್ಲಿ ವ್ಯತ್ಯಾಸ ಇರಬಹುದು, ಟೀಕೆಗಳು ಇರಬಹುದು, ಖಾರವಾಗಿ ಹೇಳುವವರೂ ಇದ್ದಾರೆ, ವಿಷಾದಿಸುವವರೂ ಇರುತ್ತಾರೆ, ಹತಾಶೆಗೆ ಒಳಗಾದವರೂ ಇದ್ದಾರೆ. ಇವರೆಲ್ಲರೂ ಜೊತೆ ಇದ್ದರೆ ಮಾತ್ರವೇ ಬಹುಬೇಗನೆ ಪರಿಹಾರದ ಮಾರ್ಗ ಸಾಧ್ಯವಿದೆ.




02 ನವೆಂಬರ್ 2022

100 ಕಿಮೀ ದೂರದಿಂದ "ಪ್ರೀತಿ"ಯ ಹೋಳಿಗೆ ಬಂತು...!

 

ಸುಮಾರು 100 ಕಿಮೀ ದೂರದಿಂದ ನಮ್ಮ ಮನೆಗೆ 20 ಹೋಳಿಗೆ ಹಾಗೂ 4 ತಿರುಪತಿ ಲಾಡು ಬಂತು..!.‌ , ವಿಷಯ ಹೋಳಿಗೆಯದ್ದು ಅಲ್ಲ ಲಾಡಿನದ್ದೂ ಅಲ್ಲ. ಅದು ಪ್ರೀತಿಯದ್ದು, ಸ್ನೇಹದ್ದು. ಹೀಗಾಗಿ ಈ ಸಂಬಂಧಗಳನ್ನು, ಸ್ನೇಹವನ್ನು ನಾವು ಯಾವ ಲೆಕ್ಕದಲ್ಲಿಯೂ ಅಳೆಯುವುದಕ್ಕೆ ಸಾಧ್ಯವಿಲ್ಲ.

ವಿಷಯ ಇಷ್ಟು....., ಇಂದು ಪತ್ನಿಯ ತವರು ಮನೆಯಿಂದ ಮಾವ ಹೋಳಿಗೆಯನ್ನು ಪ್ಯಾಕ್‌ ಮಾಡಿ ಕಳುಹಿಸಿದರು. ಇದು ವಿಷಯ ಅಲ್ಲ. ಎಲ್ಲರಿಗೂ ಇಂತಹ ಅನುಭವವಿದೆ. ನಾವೂ ಕೂಡಾ ಇದನ್ನೇ ಮಾಡುತ್ತೇವೆ, ಮಾಡಿದ್ದೇವೆ ಕೂಡಾ. ನನ್ನ ಅಮ್ಮನಿಗೂ ಇದೆಲ್ಲಾ ಬಹಳ ಅಚ್ಚುಮೆಚ್ಚು.  ಬಂದವರಿಗೆ ಹಪ್ಪಳ, ಜೇನು, ಹಲಸಿನ ಹಣ್ಣು, ರಂಬುಟಾನ್‌.... ಹೀಗೇ....!. ಮನೆಯಲ್ಲಿ ಏನಿದೆಯೋ ಅದು ಕೊಡುತ್ತಿದ್ದರು. ಕೆಲವು ಸಲ 4 ರಂಬುಟಾನ್‌ ನನ್ನ ತಂಗಿಯ ಮನೆಗೆ ನನ್ನ ಬಳಿ ಕೊಟ್ಟು ಕಳುಹಿಸಿದ್ದೂ ಇದೆ. ಅದು ಪ್ರೀತಿ ಅಷ್ಟೇ. ಇದರ ಹಿಂದಿರುವ ಭಾವದ ಬಗ್ಗೆ ಧ್ವನಿಸಬೇಕು.

ಇಲ್ಲಿ ಒಂದು ಸಂಬಂಧ, ಒಂದು ಪ್ರೀತಿ, ಒಂದು ಸ್ನೇಹದ‌  ವಿಷಯಗಳು ಹೆಚ್ಚು ಮಹತ್ವ ಪಡೆಯುತ್ತವೆ. ಇಲ್ಲಿ ಹೋಳಿಗೆ ದುಡ್ಡು ಕೊಟ್ಟರೆ ಖರೀದಿ ಮಾಡಬಹುದು, ಆದರೆ ಪ್ರೀತಿಯನ್ನು, ಸ್ನೇಹವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅರ್ಥವಾಗಬೇಕಾದ ವಿಷಯ ಅಷ್ಟೇ. 

ಕಳೆದ ಬಾರಿ ಪುತ್ತೂರಿಗೆ ಹೋಳಿಗೆಯನ್ನು ಮಾವ  ಕಳುಹಿಸಿದ್ದರು, ನಾನು  ಆ ದಿನ ಪುತ್ತೂರಿನಲ್ಲಿ ಯಾವ ಕೆಲಸ ಇಲ್ಲದಿದ್ದರೂ ಕಾರಿನಲ್ಲಿ ಹೋಗಿ 15 ಹೋಳಿಗೆಯ ಪಾರ್ಸೆಲ್ ಪಡೆದು ಹೋಟೆಲ್‌ನಲ್ಲಿ ಚಹಾ ಕುಡಿದು ವಾಪಾಸ್‌ ಮನೆಗೆ ಬಂದು ಹೋಳಿಗೆ ಸವಿದಿದ್ದೆವು. ಇದರ ಖರ್ಚು ಲೆಕ್ಕ ಹಾಕಿದರೆ ಒಂದು ಹೋಳಿಗೆಯ ಅಸಲು 50 ರೂಪಾಯಿಗಿಂತ ಹೆಚ್ಚು ಆದೀತು. ಆದರೆ ಆ ಹೋಳಿಗೆಯ ಹಿಂದೆ ಇರುವ ಭಾವ ಹಾಗೂ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ಅನೇಕ ಸಲ ಇಂತಹದ್ದಕ್ಕೆಲ್ಲಾ ಬೆಲೆ ಇಲ್ಲದೆಯೇ ಕೇವಲ ಹಣ ಹಾಗೂ ಹಣದ ಹಿಂದಿನ ದಾರಿಗಳ ಬಗ್ಗೆ ಮಾತ್ರವೇ ಯೋಚನೆ ಮಾಡಿದರೆ, ಯಾವ ಭಾವವೂ ಇಲ್ಲದೆ ಶುಷ್ಕವಾಗಿರಬೇಕಾಗುತ್ತದೆ. ಇದು ಇಡೀ ಸಂಬಂಧದಲ್ಲಿ ಸೃಷ್ಟಿ ಮಾಡುವ ತಲ್ಲಣ ಬಹುದೊಡ್ಡದು. ‌ಅನೇಕ ಸಲ ಈ ತಲ್ಲಣಗಳನ್ನು ಮೌನವಾಗಿ ಎದುರಿಸಬೇಕಾಗುತ್ತದೆ. ಏಕೆಂದರೆ ಭಾವವೇ ಇಲ್ಲದ ಶುಷ್ಕದ ಜೊತೆ ಗುದ್ದಾಡಿ ಏನು ಪ್ರಯೋಜನ?. 

ಅತೀ ಹತ್ತಿರದವರಿಂದ ಎಲ್ಲರೂ ಬಯಸುವುದು  ಸ್ನೇಹ ಹಾಗೂ ಪ್ರೀತಿ ಅಷ್ಟೇ. ಅದು ಶುಷ್ಕವಾಗುತ್ತಾ ಹೋದಂತೆಯೇ ಬದುಕು ಸಡಿಲವಾಗುತ್ತದೆ. ಒಂಟಿಯಾಗಬೇಕಾಗುತ್ತದೆ. ಸ್ನೇಹ, ಸಂಬಂಧ ಎಂಬುದು  ದಿನವೂ ಮಾತನಾಡಿಕೊಳ್ಳುವ ವಿಷಯವೂ ಅಲ್ಲ, ಆದರೆ ಆಪತ್ಕಾಲದಲ್ಲಿ ನೆರವಾಗುವ, ನೆರವಿಗೆ ಧ್ವನಿಯಾಗುವ , ಪ್ರತಿಧ್ವನಿಯಾಗುವ ವಿಷಯ ಅಷ್ಟೇ. ಎಲ್ಲಾ ಬಾರಿಯೂ ಎಲ್ಲಾ ಸಂದರ್ಭದಲ್ಲಿಯೂ ನೆರವಿಗೆ ಬಯಸುವುದೂ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ಇದುವೇ ಪ್ರೀತಿ. ಪ್ರೀತಿ, ಸಂಬಂಧ ಎಂದರೆ ಅಧಿಕಾರವೂ ಅಲ್ಲ, ದುರ್ಬಳಕೆಯೂ ಅಲ್ಲ, ಬಳಕೆಯೂ ಅಲ್ಲ.

ಸ್ನೇಹ ಎಂದರೆ ಹೀಗೆ ಎಂದೂ ವಿವರಿಸುವುದು  ಕಷ್ಟ. ಆದರೆ ಹಣದ ನಡುವೆ, ಲೆಕ್ಕಾಚಾರದ ನಡುವೆ ಸಂಬಂಧ ಬೆಸೆಯದೆ ಎನ್ನುವುದನ್ನು  ಹೇಳಬಹುದು. ಯಾವ ಎಣಿಕೆಯೂ ಇಲ್ಲದೆಯೇ ಹೋಳಿಗೆ ತಲುಪಿಸಲೇ ಪುತ್ತೂರಿಗೆ ಬಂದ ಮಾವ, ಹೋಳಿಗೆ ತಲುಪಿಸಲು ಪಟ್ಟ ಸಾಹಸ... ಮನೆಯಲ್ಲಿ ಕಾತರದಿಂದ ಕಾಯುವ ಅವರ ಮಗಳು...ನನ್ನ ಪತ್ನಿ.....!  ಇದೆರಡೂ ಇರುವುದು  ಹಣದ ಮೇಲಲ್ಲ, ಪ್ರೀತಿಯ ಮೇಲೆ.... , ಮಗಳ ಮೇಲಿನ ಅವರ ಪ್ರೀತಿಗೆ ನಾನ್ಯಾಕೆ ಕೊಂಕು, ಅಡ್ಡಿ ಮಾಡಲಿ, ನಾನೂ ಸಹಕಾರಿಯಾದೆ. ಹೋಳಿಗೆಗೆ ಆಗುವ ಖರ್ಚು ನೋಡಲಿಲ್ಲ, ಪ್ರೀತಿಯನ್ನು ದಾಟಿಸಿದೆ ಅಷ್ಟೇ.

ಈ ಬಾರಿ 50 ಕಿಮೀ ದೂರ ಬಂದ ಮಾವ ಪುತ್ತೂರಿನಿಂದ ಪ್ಯಾಕ್‌ ಮಾಡಿ ಪಾರ್ಸೆಲ್‌ ಹಾಕಿದರು, ನಾನು ಬಸ್ಸಿನಿಂದ ಪಡೆದುಕೊಂಡೆ. ಈ ಹೋಳಿಗೆ ಒಂದು ಸಂಬಂಧ ಸ್ಥರವನ್ನು ಎತ್ತಿ ತೋರಿಸಿತು ಅಷ್ಟೇ. ಮನುಷ್ಯ ಬದುಕಿನಲ್ಲಿ ಬೇಕಾದ್ದು ಹಾಗೂ ಉಳಿಯುವುದು ಇದೇ ತಾನೆ..

ಪರಮಮಿತ್ರ ವೇಣುಗೋಪಾಲ ಶೇರ ಹೇಳುತ್ತಾರೆ, ಮಾರಾಯ  ಸ್ನೇಹ ಎನ್ನುವುದು ಬಳಕೆಗೂ ಅಲ್ಲ, ದುರ್ಬಳಕೆಗೂ ಅಲ್ಲ.. ಅದು ಅನುಭವಿಸಲು ಬದುಕಿನ ಸಂತಸ ಹೆಚ್ಚಿಸಲು...

 

27 ಅಕ್ಟೋಬರ್ 2022

ಅಮ್ಮನಿಲ್ಲದ ದೀಪಾವಳಿ |

 


ಈ ಬಾರಿ ನಮಗೆ ದೀಪಾವಳಿ ಇಲ್ಲ. ಅಮ್ಮನಿಲ್ಲದ ಈ ದೀಪಾವಳಿ ಆಚರಿಸುವುದಾದರೂ ಹೇಗೆ? ಹಾಗಿದ್ದರೂ ಕೆಲವು ಜವಾಬ್ದಾರಿಗಳ ದೀಪ ಬೆಳಗಬೇಕಿತ್ತು. 

ಪ್ರತೀ ವರ್ಷ ಅಮ್ಮನೇ ನನಗೆ ದೀಪಾವಳಿ. ಅಮ್ಮನೇ ನನಗೆ ಬೆಳಕು. ದೀಪಾವಳಿ ಹಾಗೂ ಇತರ ಎಲ್ಲಾ ಹಬ್ಬಗಳಲ್ಲೂ ಅಮ್ಮನೇ ಹಾಗೆ ಮಾಡು, ಹೀಗೆ ಮಾಡು ಎನ್ನುತ್ತಿದ್ದರು. ಈ ಬಾರಿ ಹಾಗೆ ಮಾಡು .. ಹೀಗೆ ಮಾಡು ಎಂದು ಹೇಳುವ ಮಾತುಗಳಿಲ್ಲ.ಅಮ್ಮನಿಲ್ಲ ದೀಪಾವಳಿ ಮಾತ್ರವಲ್ಲ ಯಾವ ಹಬ್ಬವೂ ಈ ವರ್ಷ ನನಗಿಲ್ಲ.

ಮಕ್ಕಳಿಗೆ ದೀಪಾವಳಿ ಖುಷಿ. ಈ ಖುಷಿಗೆ ಬೆಳಕಾಗಬೇಕಲ್ಲ. ಅಪ್ಪನೂ ಇಲ್ಲದ .. ಅಮ್ಮನೂ ಇಲ್ಲದ ದೀಪಾವಳಿ ನನಗೆ. ಆದರೆ ಮಕ್ಕಳಿಗೆ ಕತ್ತಲು ಕಳೆದು ಬೆಳಕಾಗುವ ದೀಪಾವಳಿ. ಪಟಾಕಿ ಸಿಡಿಸುವ ದೀಪಾವಳಿ....  ನನಗಿಲ್ಲದ ದೀಪಾವಳಿ,.... ಮಕ್ಕಳಿಗೆ ಸಂಭ್ರಮದ ದೀಪಾವಳಿ.... ಈ ಎರಡನ್ನೂ ಹೊಂದಿಸಿಕೊಳ್ಳುವುದು ಹೇಗೆ?. ಒಂದು ಇಡೀ ಕೊಂಡಿ ಕಳಚಿ ಇನ್ನೊಂದು ಕೊಂಡಿಯನ್ನು ಹಿಡಿಯುವ , ಮುನ್ನಡೆಸುವ ಜವಾಬ್ದಾರಿ. ಹೇಳಿದಷ್ಟು, ಬರೆದಷ್ಟು ಸುಲಭವಲ್ಲ. ಎಚ್ಚರಿಸುವವ ಇಲ್ಲದೆಯೇ ಎಚ್ಚರವಾಗಿರಬೇಕು. ಎಚ್ಚರಿಸುವವನು ಇಲ್ಲದೆ ಬಾಳ ನೌಕೆಯ ಸಾರಥಿಯಾಗಬೇಕು.

ಅಪ್ಪನೂ ಇಲ್ಲದ ಮೇಲೆ ದೀಪಾವಳಿ ಇತ್ತು. ಆದರೆ ಎಚ್ಚರಿಸುವ ಅಮ್ಮ ಇದ್ದರು. ಆಗಾಗ ಎಚ್ಚರಿಸುತ್ತಿದ್ದರು. ಎಲ್ಲಿ ಹಳಿ ತಪ್ಪುತ್ತದೋ ನೋಡಿ ಎಚ್ಚರಿಸುತ್ತಿದ್ದರು. ಹೆಚ್ಚು ಬರೆದರೂ ಅದೇನು ಅಂತ ಕೇಳುತ್ತಿದ್ದರು.  ಆಗಾಗ ನನ್ನ ಲೆಕ್ಕ ಪುಸ್ತಕವನ್ನು ನೋಡಿ ಹೇಳುತ್ತಿದ್ದರು.. ಕೇಳುತ್ತಿದ್ದರು. "ಈ ಲೋಕದಲ್ಲಿ ಇರುವುದೆಲ್ಲಾ ಉಪಯೋಗಕ್ಕೆ ಇರುವುದು , ಆದರೆ ನಮಗೆ ಯಾವುದು ಅಗತ್ಯ ಎನ್ನುವುದು ನಮಗೆ ತಿಳಿದಿರಬೇಕು" ಎಂದು ಆಗಾಗ ಎಚ್ಚರಿಸುತ್ತಿದ್ದರು. ದೀಪಾವಳಿಯ ಪಟಾಕಿಯ ಭರಾಟೆಗೆ ನನಗೆ ನೆನಪಾದ್ದು ಈ ಮಾತು. ಇದೇ ಪಾಠ ಮಕ್ಕಳಿಗೂ ಹೇಳಿದೆ, ಪಟಾಕಿ ಬೇಕು.. ಸಂಭ್ರಮಕ್ಕೆ, ಆದರೆ ಎಷ್ಟು ಬೇಕು... ಅಂತ ಅಮ್ಮನ ಮಾತನ್ನು ಸ್ವಲ್ಪ ಡೈಲ್ಯೂಟ್‌ ಮಾಡಿ ಹೇಳುತ್ತಿದ್ದೆ. ಈಗ ನನಗೆ ಹೇಳುವವರು ಯಾರು ? ಕೇಳುವವರು ಯಾರು ?. ಅಮ್ಮ ಇಲ್ಲದ ಮೇಲೆ  ಮನಸ್ಸಿನ ಓಟದಲ್ಲಿ ಅನೇಕ ಬಾರಿ ಎಡವಿದ್ದೇನೆ,  ನಿಧಾನವಾಗಿ ಕುಳಿತು, ಅಮ್ಮ ಹೇಳಿದ್ದು ನೆನಪಿಸಿಕೊಳ್ಳುತ್ತಾ ಸಾವರಿಸಿಕೊಂಡು ತಪ್ಪನ್ನು ಸರಿ ಮಾಡುತ್ತೇನೆ. 

ಈಚೆಗೆ ಯಾರಿಗೂ ಹೆಚ್ಚು ಕರೆ ಮಾಡುತ್ತಿಲ್ಲ, ಆದರೂ ಆಗಾಗ ವಾಟ್ಸಪ್‌ ನನ್ನನ್ನು ಕೆಣಕಿಸುತ್ತದೆ, ಯಾವುದೋ ಪೋಸ್ಟ್‌ ನೋಡಿದಾಗ ಕೆರಳಿಸುತ್ತದೆ, ವಿಷಾದವಾಗುತ್ತದೆ, ಪ್ರತಿಕ್ರಿಯೆ ನೀಡಲೇಬೇಕು ಎಂದು ಅನಿಸಿ ಬಿಡುತ್ತದೆ. ಅದನ್ನು ಹಾಕಿಯೂ ಆದ ಮೇಲೆ ಚರ್ಚೆಯೂ ಆಗುತ್ತದೆ... ಇದೆಲ್ಲಾ ಬೇಕಿತ್ತಾ ಅಂತ ಅಮ್ಮನ ಮಾತುಗಳು ನೆನಪಾಗುತ್ತದೆ, "ಜಗಳ ಯಾಕೆ, ಚರ್ಚೆ ಯಾಕೆ, ಆಗದಿದ್ದರೆ ಸುಮ್ಮನೆ ಇದ್ದು ಬಿಡು. "

ಅಮ್ಮನ ನೆನಪುಗಳು ಸದಾ ಕಾಡುತ್ತದೆ. ಅಪ್ಪನೂ ಆಗಾಗ ಎಚ್ಚರಿಸುತ್ತಾರೆ. ಅಪ್ಪ ಇಲ್ಲವಾದ ಮೇಲೆ ಅಮ್ಮ ಹಾಗಲ್ಲ ಹೀಗೆ ಎಂದರು. ಅನೇಕ ಬಾರಿ ನಮಗೆಷ್ಟೇ ಮಾಹಿತಿ ಇದ್ದರೂ ಅದರ ಪ್ರಾಕ್ಟಿಕಲ್‌ ಅನುಭವ ಬೇರೆಯೇ. ಅದು ಅಮ್ಮನೇ ಕೊಡುತ್ತಿದ್ದರು.

ಈಗೀಗ ಕೆಲವು ಸಮಯ ತಲೆಯೊಳಗೆ ಖಾಲಿಯಾಗಿ ಬಿಡುತ್ತದೆ, ಬ್ಲಾಂಕ್‌ ಆಗಿಬಿಡುತ್ತದೆ. ಕೃಷಿಯಲ್ಲಿ ಸಾಕಷ್ಟು ಕೆಲಸ ಇದ್ದರೂ ಮುಂದೆ ಯಾವುದು ಅಂತ ತಿಳಿದಿದ್ದರೂ ತಕ್ಷಣಕ್ಕೆ ಖಾಲಿಯಾಗಿಬಿಡುತ್ತದೆ. ಈಗ ಅದೆಲ್ಲಾ ಸುಧಾರಿಸುವ ಹಂತಕ್ಕೆ ಬಂದಿದೆ. ದೀಪಾವಳಿಯ ಸಮಯದಲ್ಲಿ ಅಮ್ಮ ನೆನಪಾದರು.

ದೀಪಾವಳಿಯ ಸಡಗರ ಎಲ್ಲೆಡೆಯೂ ಕೇಳಿತ್ತು. ಮಕ್ಕಳಿಗೂ ಖುಷಿಯಾಗಿತ್ತು. ಸದ್ದಿಲ್ಲದೆ ಮಧ್ಯಾಹ್ನ ಪತ್ನಿ, ಮಕ್ಕಳ ಜೊತೆ ತಂಗಿಯ ಮನೆಗೆ ಹೋದೆ, ಊಟ ಮಾಡಿದೆ, ನಿದ್ದೆ ಮಾಡಿದೆ ಸುಖಾ ಸುಮ್ಮನೆ ಬಂದೆ. ಮಕ್ಕಳು ಆಟವಾಡಿದರು, ಖುಷಿ ಪಟ್ಟರು. ಎಲ್ಲಾ ಕೆಲಸಗಳ ನಡುವೆಯೇ ಖಾಲಿಯಾಗುವ ಮನಸ್ಸುಗಳನ್ನು ಮರುಭರ್ತಿ ಹೇಗೆ ? ಎಂದು ಯೋಚಿಸುವ ಕಾಲ ಇದಲ್ಲ. ಮುಂದಿನ ಕೊಂಡಿಗಳಿಗೆ ದಾರಿದೀಪವಾಗಬೇಕು. ಅದು ಈ ಬಾರಿ ಆಚರಣೆಯೇ ಇಲ್ಲದ ದೀಪಾವಳಿಯ ನಡುವೆ ದೀಪವಾಗಬೇಕು. ಸುಲಭ ಇಲ್ಲ........

13 ಅಕ್ಟೋಬರ್ 2022

#ಅಮ್ಮ ಹೇಳಿದ ಸತ್ಯ | ಈ ಜಗತ್ತಿನೊಳಗೆ ಎಲ್ಲವೂ ಬಹಳ ನಿಗೂಢ |

ಕಾಕತಾಳೀಯ ಎನ್ನುವುದೋ ಅಥವಾ ಏನೋ ಸೂಕ್ಷ್ಮವಾದ ಸಂಗತಿ ಇದೆಯೋ? ಮೌನವಾಗಿ ಕುಳಿತಾಗ ಯೋಚನೆಗಳು ಸಾಗುತ್ತವೆ... 



ನನ್ನ ಅಪ್ಪನನ್ನು 2018 ಆಗಸ್ಟ್ 4 ರಂದು‌ ಹೃದಯಾಘಾತದಿಂದ ಕಳೆದುಕೊಂಡೆ. ಅಪ್ಪ ಇಲ್ಲವಾಗುವ ಸುಮಾರು ಒಂದು ವರ್ಷದ ಹಿಂದೆ‌ ಹೀಗೇ ಜಾತಕ ನೋಡುತ್ತಾ ಅಪ್ಪ ಹೇಳಿದ್ದರು," ನನಗೆ ಇನ್ನು ಒಂದೇ ವರ್ಷ ಆಯಸ್ಸು, ಅದಾಗಿ ಸರಿಯಾಗಿ 4 ವರ್ಷಕ್ಕೆ ಅಮ್ಮನೂ ಬರುತ್ತಾರೆ. ನೀನು ಎಚ್ಚರವಾಗಿರು" ಎಂದಿದ್ದರು. ಆಗ ನಾನು ಅಮ್ಮನ ಜೊತೆ  ಹೇಳಿದ್ದೆ," ಇದೆಲ್ಲಾ ಮರ್ಲು, ಸುಮ್ಮನಿರಿ, ಅಪ್ಪ ಯಾಕೆ ಹೀಗೆ ಹೇಳುತ್ತಾರೆ" ಎಂದಿದ್ದೆ. ಅಮ್ಮನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

ಹಾಗಿದ್ದರೂ ನಮ್ಮ ಪ್ಯಾಮಿಲಿ ವೈದ್ಯರ ಬಳಿ ಅಪ್ಪನ ಚೆಕ್ ಅಪ್ ಮಾಡುತ್ತಾ ಹೆಚ್ಚಿನ ಚೆಕ್ ಅಪ್  ಮಾಡಿಸಲು ಆಸಕ್ತನಾಗಿದ್ದೆ, ಇದಕ್ಕಾಗಿಯೇ ಪ್ಯಾಮಿಲಿ ವೈದ್ಯರೇ ಅಪ್ಪನಿಗೆ ಹೇಳಿಸುವ ವ್ಯವಸ್ಥೆ ಮಾಡಿದ್ದೆ. ನಮ್ಮ ವೈದ್ಯರು ಹೇಳಿದ್ದಕ್ಕೆ, ಅಪ್ಪ ನಮ್ಮ ವೈದ್ಯರಿಗೆ ಹೇಳಿದ್ದು, "ಇಲ್ಲಿಯೇ ಸಾಕು, ಇದಕ್ಕಿಂತ ಆ ಕಡೆ ಹೋದರೆ ವಾಪಾಸ್ ಬರಲು ಇಲ್ಲ. ಬರುವುದು ತಪ್ಪಿಸಲು ಆಗದು ಎಂದಿದ್ದರು." ಅದಾಗಿ ಒಂದು ವರ್ಷದೊಳಗಡೆ ಅಪ್ಪ ಹೃದಯಾಘಾತದಿಂದ ಇಲ್ಲವಾದರು.

ಅಮ್ಮನ ಧೈರ್ಯ ಇತ್ತು. ಅಮ್ಮನ ಆರೋಗ್ಯ ಸುಧಾರಣೆಗೆ ನಿರಂತರ ಓಡಾಟ ಇದ್ದೇ ಇತ್ತು. ಏನು ಬೇಕೋ ಅದು, ಹೇಗೆ ಬೇಕೋ ಹಾಗೆ. ಪ್ರತೀ ತಿಂಗಳ ರಕ್ತಪರೀಕ್ಷೆ ಪುತ್ತೂರಿನ ಐಡಿಯಲ್ ಲ್ಯಾಬ್ ನಲ್ಲಿ. ಒಮ್ಮೆ ಅಮ್ಮ ಹೇಳಿದ್ದರು, "ಇದೆಲ್ಲಾ ಯಾಕೆ ಅಂತ ಗೊತ್ತಾಗುವುದಿಲ್ಲ,‌ ಸುಮ್ಮನೆ ಖರ್ಚು ಎಂದಿದ್ದರು" ಇದಕ್ಕೆ ಐಡಿಯಲ್ ಲ್ಯಾಬ್ ನ ಸುಚೀಂದ್ರ ಪ್ರಭು ಅವರು ಹೇಳಿದ್ದು,"ಅದು ಮಕ್ಕಳ ಕರ್ತವ್ಯ, ನೀವು ಹಾಗೆ ಹೇಳಬಾರದು "ಎಂದಿದ್ದರು. ಅಂದಿನಿಂದ ಅಮ್ಮ ಯಾವ ಚಿಕಿತ್ಸೆಗೂ ಮಾತನಾಡಿಲ್ಲ. ನೀವು ಹೇಳಿದ ಹಾಗೆ ಎಂದಿದ್ದರು.ಕಾರಿನಲ್ಲಿ ನಾನು, ತಂಗಿ, ಅಮ್ಮ ಎಲ್ಲಾ ಕಡೆಗೂ ಯಾವಾಗ ಬೇಕೋ ಆವಾಗ ಚಿಕಿತ್ಸೆಗೆ ಹೋದದ್ದಾಯಿತು.ಯಾವ ವೈದ್ಯರು ಬೇಕೋ ಆ‌ ವೈದ್ಯರು.

ಹಾಗಿದ್ದರೂ, ಅಪ್ಪ ಹೇಳಿದ ದಿನ ಬಂದೇ ಬಿಟ್ಟಿತು. ಸರಿಯಾಗಿ 4 ವರ್ಷ. 2022 ಆಗಸ್ಟ್ 4  ಅಮ್ಮ ಇಲ್ಲವಾದರು. ನೋಡುತ್ತಾ ಇದ್ದಂತೆಯೇ, ಕೈಲಾಗದಂತೆ ನೋಡಬೇಕಾಯಿತೇ ಹೊರತು ಆ ದಿನವನ್ನು ಇಲ್ಲವಾಗಿಸಲು ಆಗಲೇ ಇಲ್ಲ. ಅದಕ್ಕಿಂತ ಮುಂದೆ ಹೋದರೆ, ಅಪ್ಪ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಅಮ್ಮ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಎರಡೂ ಒಂದೇ...! ಅಪ್ಪ ಕೃಷ್ಣ ಪಕ್ಷ , ಅಮ್ಮ ಶುಕ್ಲ ಪಕ್ಷ. ಅಂದರೆ 15 ದಿನಗಳ ವ್ಯತ್ಯಾಸ.

ಈ ಜಗತ್ತು ಬಹಳ ಕುತೂಹಲ. ಅನೇಕ ಬಾರಿ ಅನಿಸಿದ್ದಿದೆ, ಇದೆಲ್ಲಾ ಏನು? ಅಂತ. ಅಪ್ಪ ಹೇಗೆ ಹೇಳಿದರು ಹೀಗೆ? ಅಪ್ಪ ಯಾಕೆ ಹೇಳಿದರು ಹೀಗೆ? ಹೀಗೂ ಅನಿಸುತ್ತದೆ. ಇದ್ದಾಗ ಅಪ್ಪನ ಜೊತೆ ಅದನ್ನು ಕೇಳಲಿಲ್ಲ. ಅಮ್ಮನಲ್ಲೂ ಕೇಳಲಿಲ್ಲ. 

ಈಗ ಅದರೊಳಗಿನ ಸತ್ಯದ ಹುಡುಕಾಟದಲ್ಲಿ ಸೋಲು ಖಚಿತವೇ ಆಗಿದೆ.‌ಅದಕ್ಕಾಗಿಯೇ ಅಪ್ಪ ಅಮ್ಮ ಇಬ್ಬರಿಗೂ ಈಗ ನನ್ನ ಪಾಲಿನ ಕರ್ತವ್ಯವನ್ನು ಪಾಲಿಸುವುದು, ಮುಗಿಸುವುದು. ಅವರ ಕನಸುಗಳನ್ನು ಬೆಳೆಸುವುದು, ಮುಂದೆ ದಾಟಿಸುವುದು. ಇದು ನನಗೆ ಮಾತ್ರಾ ಸಂಬಂಧಿಸಿದ್ದು ಅಂತ‌ ತಿಳಿದಿದ್ದರೂ ಹಂಚಿಕೊಳ್ಳುವುದಕ್ಕೆ, ದಾಖಲಿಸುವುದಕ್ಕೆ ಕಾರಣವಿದೆ. ಆ ಕಾರಣವೇ ಮನಸ್ಸು. ಆಗಾಗ ಕಾಡುವ ನೆನಪುಗಳಿಗೆ ಉತ್ತರವಿಲ್ಲ. ಒಮ್ಮೊಮ್ಮೆ‌ ಕೆಲಸವಿಲ್ಲ, ಮಾತುಗಳಿಲ್ಲ,‌ ನಿದ್ರೆಯೂ ಇಲ್ಲ.


ಮತ್ತೆ ಮತ್ತೆ ಕಾಡುವ ನೆನಪಲ್ಲಿ ಅಮ್ಮನೇ ಬರುತ್ತಾರೆ.ಮತ್ತೆ ಮತ್ತೆ ಬರುತ್ತಾರೆ. ಈ ಜಗದೊಳಗಿನ ನಿಗೂಢತೆಯ ಒಳಗೆ ಸಾಗಿದಾಗ ಉತ್ತರ ಸಿಗದ ಪ್ರಶ್ನೆಗಳೇ ಅವು.! ಅದೆಲ್ಲಾ ಕಾಕತಾಳೀಯವೇ ? ಆಥವಾ ನಿಗೂಢವಾದ ಸತ್ಯವೇ....?

ಅಮ್ಮನ ಆರೋಗ್ಯ ಹದಗೆಡುತ್ತಾ ಸಾಗಿತು. ಸತತ ಪ್ರಯತ್ನದ ನಡುವೆಯೇ ನೋಡುತ್ತಾ ಇರಬೇಕಾಯಿತೇ ಹೊರತು ,ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಆಗಾಗ ಇಂಜೆಕ್ಷನ್ ಇತ್ತು. ಕೊನೆಗೆ ಅಮ್ಮನಿಗೂ ಅನಿಸಿತ್ತು ,‌ಈ ಚಿಕಿತ್ಸೆಗಳು ಪ್ರಯೋಜನವಿಲ್ಲ ಅಂತ. ಆದರೆ ನಮ್ಮ ಪ್ರಯತ್ನ, ಕಾಳಜಿಯ ಕಾರಣದಿಂದ ಅದನ್ನು ಜೊತೆಗೇ ಇರುವ ನಮ್ಮಲ್ಲಿ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಅದನ್ನು ಪರೋಕ್ಷವಾಗಿ ಹೇಳುತ್ತಿದ್ದರು ಅಮ್ಮ.

ಅಮ್ಮ ಇಲ್ಲವಾಗುವ ವಾರದ ಹಿಂದೆ,  ತಂಗಿಯ ಜೊತೆ ಅಮ್ಮ
 ಹೇಳಿದ್ದರು,"ನಾನು ಉಸಿರು ನಿಲ್ಲಿಸುವ ಸಮಯವನ್ನು ನಿಮಗೆ ನೋಡಲಾಗದು, ನೀವು ಅಳುತ್ತಾ ಇರಬಾರದು" ಎಂದು. ಅದನ್ನು ಗಂಭೀರವಾಗಿ ಪರಿಗಣಿಸದ ನಾವು ಅದೊಂದು ಹೇಳಿಕೆಯಾಗಿ ಭಾವಿಸಿ ಸುಮ್ಮನಾದೆವು.

ಅಂದು ಆ.4. ಬೆಳಗ್ಗೆ ಅಮ್ಮ ಅರ್ಧ ಚಹಾ ಕುಡಿದದ್ದು ಬಿಟ್ಟರೆ ಇನ್ನೇನು ಇರಲಿಲ್ಲ. ನಾನು ಆಗ ಕೆಲ ದಿನಗಳಿಂದ ಮನೆಯಿಂದ ಹೊರಗೆ‌ ಹೋಗುತ್ತಿರಲಿಲ್ಲ. ಕಾರಣ ಅಮ್ಮನ ಸೇವೆ. ಅಂದೂ ಮನೆಯಲ್ಲಿದ್ದೆ. ಬೆಳಗ್ಗೆ ಚಿಕ್ಕಪ್ಪ ಕರೆ ಮಾಡಿದ್ದರು, ಆರೋಗ್ಯ ಏರುಪೇರು ಇದೆ ಸ್ವಲ್ಪ ಚೆಕ್ ಅಪ್ ಮಾಡಿಸಬೇಕಿತ್ತು, ಪುತ್ತೂರಿಗೆ ತೆರಳಬೇಕು ಎಂದರು. ತಕ್ಷಣ ನನಗೆ ಬರುವ ಸ್ಥಿತಿಯಲ್ಲಿಲ್ಲ ಎಂದೆ. ಆದರೆ ನಮ್ಮ ಪ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿ ಅವರ ಮನೆಗೇ ಹೋಗುವ ವ್ಯವಸ್ಥೆ ಮಾಡಿಸಿದೆ. ತಂಗಿ‌ ಮನೆಯಲ್ಲಿದ್ದಳು , ಒಮ್ಮೆ ಚಿಕ್ಕಪ್ಪನಲ್ಲಿಗೆ  ಹೋಗಿ ಬಾ ಎಂದೆ.

ಮನೆಯಲ್ಲಿದ್ದ ನಾನು ಅಮ್ಮನ ನೋಡಿದೆ. ಆಗಿನ್ನು ಮಾತನಾಡುತ್ತಿರಲಿಲ್ಲ.‌ ನಿದ್ರೆ ಮಾಡಿದ್ದಾರೆ ಎಂದು ಅಂದುಕೊಂಡು ಎರಡು ದಿನದ ಹಿಂದೆ  ನನ್ನ ಸಹೋದರ ಸಿಸಿ ಕ್ಯಾಮರಾ‌ ವೀಕ್ಷಿಸಲು ಹೇಳಿದ್ದರಿಂದ ಎರಡೂ ದಿನ ಹೋಗದ ನಾನು ತಕ್ಷಣ ನೋಡಿ ಬರುವೆ ಎಂದು ಹೋರಟೆ,‌ ಜೊತೆಗೆ ಮಗನೂ‌ ಬಂದ.ಅಲ್ಲಿಗೆ ತಲಪಿದ‌ ಎರಡೇ ನಿಮಿಷಕ್ಕೆ ಮನೆಯಿಂದ  ಮಡದಿಯ  ಕರೆ ಬಂತು ತಕ್ಷಣವೇ ಬನ್ನಿ ಅಂತ.

 ಚಿಕ್ಕಪ್ಪನಲ್ಲಿಗೆ ಹೋಗಿದ್ದ ತಂಗಿಗೂ ಕರೆ ಹೋಗಿತ್ತು. ಇಬ್ಬರೂ ಓಡೋಡಿ ಬಂದೆವು. ಇಬ್ಬರೂ ಹೆಚ್ಚು ಕಮ್ಮಿ ಒಂದೇ ಸಮಯಕ್ಕೆ ತಲಪಿದೆವು. ಅಮ್ಮ ಹೇಳಿದಂತೆಯೇ ಆಗಿತ್ತು. ನಾವು ತಲಪುವಷ್ಟರಲ್ಲಿ ಅಮ್ಮನ ಉಸಿರು ನಿಂತಿತ್ತು.  ಇಬ್ಬರೂ ಗಂಗಾಜಲ ಬಿಟ್ಟಾಗ ಗುಟುಕು ನೀರು ಕುಡಿದ ಅಮ್ಮ ಸ್ತಬ್ಧವಾದರು. ಆಗ ಗಂಟೆ‌ ಸುಮಾರು 12.
ನಾನು ಭಾವುಕನಾಗಿ ಒಬ್ಬಂಟಿಯಾದೆ.ಅಮ್ಮ ಹೇಳಿದ ಮಾತು ನಿಜವಾಯಿತು. ಅಮ್ಮನ ಉಸಿರು‌‌ ನಿಲ್ಲುವಾಗ ನಾವಿಬ್ಬರೂ ಇರಲಿಲ್ಲ. ನನ್ನ ಮಡದಿ ಇದ್ದಳು. ನಾನು ಹಾಗೂ ತಂಗಿ ಇದ್ದೆವು, ಆದರೆ ಆ ಕ್ಷಣದಲ್ಲಿ ಇರಲಿಲ್ಲ. 

ಈ ಜಗತ್ತು ಬಹಳ ನಿಗೂಢ ಅಂತ ಅನಿಸಿದ್ದು ಈ ಕಾರಣಕ್ಕೆ. ಅಮ್ಮ ಏಕೆ ಹಾಗೆ ಹೇಳಿದರು? ಹೇಗೆ ಹೇಳಿದರು. ಅಷ್ಟೂ ಸಮಯ‌ ಜೊತೆಯೇ ಇದ್ದ ನಾವಿಬ್ಬರೂ ಅದೇ ಸಮಯಕ್ಕೆ ಏಕೆ ಅಲ್ಲೇ ಆ ಕಡೆ ಇದ್ದೆವು? ನಾವು ಇದ್ದರೂ ಏನೂ ಮಾಡಲಾಗುತ್ತಿರಲಿಲ್ಲ‌ ಎನ್ನುವುದೂ ಸತ್ಯವೇ. ಆದರೂ ಅಮ್ಮ ಹೇಳಿದಂತೆ ಹೇಗಾಯಿತು? ಯಾರಿಗೆ ಗೊತ್ತು ಈ ಜಗದ ನಿಗೂಢತೆ?

ನನಗೆ ಗೊತ್ತು, ಹೀಗೆ ಹೇಳುವುದರಿಂದ, ಬರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಇಲ್ಲವಾದ ಅಮ್ಮ ಬರಲಾರಳು. ಆದರೆ ಈ‌‌ ಪ್ರಶ್ನೆಗಳನ್ನು ನಾನು ಯಾರಿಗೆ ಕೇಳಲಿ? ಯಾರಿಗೆ ಹೇಳಲಿ? ಅಮ್ಮನಿಲ್ಲದ ಈ ಲೋಕದಲ್ಲಿ ಅಮ್ಮನಿಗೇ ಕೇಳುವ ಹಾಗೆ ಬರೆಯಬೇಕು, ಆದರೂ ಉತ್ತರವಿಲ್ಲ ನಿಜ. ಆದರೆ ಸಮಾಧಾನ ತರುತ್ತದೆ.ಬರಹಕ್ಕೆ ಆ ಶಕ್ತಿ ಇದೆ. ಮೌನವಾಗುತ್ತಾ ನಾಳಿನ ಕಡೆಗೆ ಯೋಚಿಸಬೇಕು.




06 ಮೇ 2022

ನುಡಿಯಲ್ಲೂ.... ನಡೆಯಲ್ಲೂ... ಒಂದೇ ಆಗಿರುವುದು ಸುಲಭವಾ ?



ಇವರ ಬಗ್ಗೆ ಬರೆಯಲೇಬೇಕು. ಏಕೆಂದರೆ ಅಪರೂಪದ ವ್ಯಕ್ತಿತ್ವ. ಅದು ಹಿಂದುತ್ವದ ವ್ಯಕ್ತಿತ್ವ.  ಹಿಂದುವಾಗಿ ಕಾಣುತ್ತಾ ಜಾತಿವಾದಿಗಳಾಗುವ  ಕಾಲದಲ್ಲಿ ಇಂತಹವರ ಪರಿಚಯವಾಗಬೇಕು ಹಾಗೂ . ನನ್ನ ಮನಸ್ಸಿನಲ್ಲಿ  ಇದು ದಾಖಲಾದ್ದನ್ನು ಅಕ್ಷರ ರೂಪಕ್ಕೆ ಇಳಿಸಬೇಕು. ಈ ವ್ಯಕ್ತಿತ್ವ ಶ್ರೀನಿವಾಸ ಉಬರಡ್ಕ. 

ಶ್ರೀನಿವಾಸ ಉಬರಡ್ಕ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನನಗೆ ಪರಿಚಯ. ಪರಿಚಯ ಅನೇಕ ಸಮಯಗಳಿಂದ ಇದ್ದರೂ ಬಹಳ ಹತ್ತಿರ ಏನೂ ಇರಲಿಲ್ಲ. ಎಲ್ಲರಂತೆ ಅವರೂ ಒಬ್ಬರು ಪರಿಚಯಸ್ಥರು ಅಷ್ಟೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನನ್ನ ಪರಿಚಯಿಸಿದವರು  ಲಕ್ಷ್ಮೀಶ ಗಬ್ಲಡ್ಕ ಹಾಗೂ ವೇಣುಗೋಪಾಲ ಮುರುಳ್ಯ. ಆರ್‌ ಎಸ್‌ ಎಸ್‌ ಪರಿಚಯದ ನಂತರ  ಅವರಿಬ್ಬರೂ ನನಗೆ ಅಂದು ಸ್ಫೂರ್ತಿಯಾದ್ದು ಹಿಂದುತ್ವದ ಕಾರಣಕ್ಕೆ. ಜಾತಿಯ ಗೋಡೆಯನ್ನು ಬಿಟ್ಟು ದಾಟಿರುವುದಕ್ಕೆ. ಆ ಕಾರಣದಿಂದಲೇ ಅನೇಕರ ಮನೆಗೆ ಹಿಂದುವಾಗಿ ಹೋಗಿದ್ದೆ, ನಮ್ಮ ಮನೆಯಲ್ಲೂ ಹಿಂದೂಗಳಾಗಿಯೇ ಎಲ್ಲರೂ ಕಂಡಿದ್ದೆವು.  ಈಗ ಶ್ರೀನಿವಾಸ ಅವರು ಕೂಡಾ ಹಿಂದುತ್ವದ ಕಾರಣದಿಂದ ಹೆಚ್ಚು ಆಪ್ತರಾಗುತ್ತಾ ಹೋದರು. ಅದಕ್ಕೆ ಈಚೆಗಿನ ಅವರ ಮನೆಯ ಖಾಸಗಿ ಕಾರ್ಯಕ್ರಮವೂ ಕಾರಣವಾಯಿತು. ಅದಕ್ಕಿಂತಲೂ ಮೊದಲು ಪರಿಚಯವು ಹೆಚ್ಚು ಪರಿಚಯವಾಗಲು ಕಾರಣವಿದೆ...

ಆಗ ಶ್ರೀನಿವಾಸ ಉಬರಡ್ಕ ಅವರಿಗೆ ಸಂಘದ ಜವಾಬ್ದಾರಿ ಇತ್ತು. ಚುನಾವಣೆಯ ಹೊತ್ತಿನಲ್ಲಿ ಸಂಘವು ಒಂದಿಷ್ಟು ಕೆಲಸ ಮಾಡಬೇಕು ಎಂಬ ಸೂಚನೆ ಇತ್ತು. ಅದನ್ನು ಶಿರಸಾ ಪಾಲಿಸಬೇಕಾಗಿತ್ತು ಅಲ್ಲಿನ ಜವಾಬ್ದಾರಿ ಇದ್ದವರಿಗೆ. 

ಆ ಚುನಾವಣೆಯ ಹೊತ್ತಿನಲ್ಲಿ ನಾವು ನಮ್ಮ ಊರಿನ ಮೂಲಭೂತ ವ್ಯವಸ್ಥೆಗಳ ಬಗ್ಗೆ ಹೋರಾಟ ನಡೆಯುತ್ತಿದ್ದ ಕಾಲ. ಅನೇಕ ಸಮಯಗಳಿಂದ ಓಟು ಮಾಡಿ, ಅವರ ಜೊತೆಗೇ ವಿವಿಧ ಸ್ಥರದಲ್ಲಿ  ಗುಪ್ತವಾಗಿ ಕೆಲಸ ಮಾಡಿಯೂ ನಾವು ಬೇಡಿಕೆಯೇ ಸಲ್ಲಿಸಬಾರದು ಎಂದು ಅರ್ಥವಾಗಿದ್ದ ಸಮಯ ಅದು. ಪತ್ರಿಕೆಯಲ್ಲಿ ಬರೆಯಬಾರದು ಎಂದು ಹೇಳಿದ್ದ ಸಮಯ ಅದು, ಉದ್ಘಾಟನೆಗೆ ಎಂದು ಕರೆಯಿಸಿ ಪರೋಕ್ಷವಾಗಿ ನಮಗೇ ಬೈದ ಸಮಯ ಅದು. ಇದೆಲ್ಲಾ ಆದ ಬಳಿಕ  ಅಷ್ಟೂ ಸಮಯವೂ ಜೊತೆಯಾಗಿದ್ದರೂ ನಾವೆಲ್ಲರೂ ಪರಕೀಯರಂತೆ ಇರಬೇಕಾಗಿ ಬಂದಾಗ ನಾವೆಲ್ಲಾ ಜೊತೆಯಾಗಿ ನಮ್ಮೂರಿನ ಮೂಲಭೂತ ಸಮಸ್ಯೆ ನಿವಾರಣೆಗೆ ಯಾವ ಪಕ್ಷಗಳಿಗೂ ಮತ ನೀಡದೇ ಇರಲು ನಾವು ಒಂದಷ್ಟು ಜನ ಯೋಚನೆ ಮಾಡಿದ್ದೆವು. ಏಕೆಂದರೆ ಅದುವರೆಗೂ ನಾವು ಸಿದ್ಧಾಂತದ ಆಧಾರದಲ್ಲಿಯೇ ಮತ ಚಲಾಯಿಸುತ್ತಿದ್ದ ಹಾಗೂ ಅದೇ ಪಕ್ಷದ ಗಣ್ಯ ವ್ಯಕ್ತಿಗಳು ಆ ಸಿದ್ಧಾಂತಗಳಿಗೆ ಬೆಲೆ ಕೊಡಲಿಲ್ಲ. ಉಳಿದ ಪಕ್ಷಗಳಂತೆಯೇ ಮಾಡಿದ್ದರು ಕೂಡಾ.  ನಮಗೂ ನೈತಿಕವಾಗಿ ಯಾವ ಪಕ್ಷಗಳಲ್ಲೂ ಕೇಳಲು ಆಗದೇ ಇರುವ ಸ್ಥಿತಿ ಇದ್ದುದರಿಂದ   ಎಲ್ಲವೂ ಸಮಾನ ಎಂದು ತಿಳಿದು  ಯಾವ ಸಿದ್ದಾಂತಗಳೂ ಇಲ್ಲವೆಂದು ನಮ್ಮ ನಿರ್ಧಾರ ಬದಲಾಯಿಸಲು ಯೋಚಿಸುತ್ತಿದ್ದೆವು. ಮತ ಬಹಿಷ್ಕಾರ ಅಥವಾ ನೋಟದ ಯೋಚನೆಯಲ್ಲಿ ಇದ್ದೆವು. ಆಗ ಶ್ರೀನಿವಾಸ ಉಬರಡ್ಕ ಅವರು ಮನೆಗೆ ಆಗಮಿಸಿ, ಆ ಪಕ್ಷಕ್ಕೆ ಏಕೆ ಮತ ನೀಡಬೇಕು ಹಾಗೂ ಸಿದ್ಧಾಂತಗಳನ್ನು ಏಕೆ ಬದಲಿಸಬಾರದು ಎಂದು  ಹೇಳಿದ್ದರು. ಅದರ ಜೊತೆಗೆ ನಿಮ್ಮ ಮೂಲಭೂತ ವ್ಯವಸ್ಥೆಯ ಬಗ್ಗೆ ಚುನಾವಣೆಯ ನಂತರ ಮಾತಾಡೋಣ ಎಂದಿದ್ದರು. ಅವರ ಮಾತಿಗೆ ಬೆಲೆ ನೀಡಿದ್ದೆವು, ಏಕೆಂದರೆ ಶ್ರೀನಿವಾಸ ಉಬರಡ್ಕ ಅವರು ನೇರ ನಡೆ ನುಡಿಯವರು. ಅವರು ಪಕ್ಷದ ಹಿಂದೆ ಹೋದವರಲ್ಲ, ಆದರೆ ಸಂಘಟನೆಯ ಸೂಚನೆಯಂತೆ ಪಕ್ಷದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರು ಎನ್ನುವುದು  ನಮಗೆ ತಿಳಿದಿತ್ತು. 

ಅದಾಗಿ ಚುನಾವಣೆ ಮುಗಿದು ಕೆಲವು ಸಮಯವಾದರೂ ನಮ್ಮ ಬೇಡಿಕೆಗಳಿಗೆ ಯಾವ ಪ್ರತಿಕ್ರಿಯೆಯೂ ಇಲ್ಲದಾಗ ಮತ್ತೆ ಶ್ರೀನಿವಾಸ ಅವರಲ್ಲಿ  ಕೇಳಿದಾಗ ನಾನು ಮಾತು ತಪ್ಪಿದ್ದೇನೆ, ಈಗ ಪಕ್ಷದವರು ಈ ಬಗ್ಗೆ ಮಾತು ಎತ್ತುತ್ತಿಲ್ಲ, ಅಂದು ಗಮನಕ್ಕೆ ತಂದಿದ್ದೇನೆ ಎಂದರು. ಆ ಬಳಿಕ ಶ್ರೀನಿವಾಸ ಉಬರಡ್ಕ ಅವರ ಜೊತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಜೊತೆಗಿನ ನನ್ನ ಸ್ನೇಹ ಹೀಗೇ ಮುಂದುವರಿಯುತ್ತದೆ, ಆದರೆ ಇನ್ನು ನೀವು ನಮ್ಮ ಯಾವುದೇ ಹೋರಾಟದಲ್ಲಿ ನಮ್ಮ ರಾಜಿಗೆ ಬರಬಾರದು ಎಂದು ಹೇಳಿದ್ದೆವು. ಮೌನವಾಗಿ ನಗಾಡಿದ ಅವರು ಸುಮ್ಮನಾದರು. ಅದಾದ ಬಳಿಕದ ಯೋಚನೆ ಆರಂಭಿಸುತ್ತಿದ್ದಾಗ ಕೇಂದ್ರ ಸರಕಾರದ ಚುನಾವಣೆ ಬಂದಿತ್ತು. ಮೋದಿ ಅವರ ಹೆಸರಿಗಾಗಿ ಆ ಬಾರಿ ಮೌನ ವಹಿಸಿದೆವು. ಪಂಚಾಯತ್‌ ಚುನಾವಣೆಯ ವೇಳೆಗೆ ಯಾರ ಮಾತನ್ನೂ ಕೇಳದೆ ನಾವು ಹೋರಾಟಕ್ಕೆ ಸಿದ್ಧರಾದೆವು. ಅಂದಿನಿಂದ ಇಂದಿನವರೆಗೆ ಹೀಗೇ ಮಾತುಕತೆಗಳಾದರೂ ನಮ್ಮ ಹೋರಾಟಕ್ಕೂ ಅವರಿಗೂ ವಿರೋಧ ಇದೆ. ಆದರೆ ಇತರ ಸಾಮಾಜಿಕ ಕೆಲಸಗಳ ಬಗ್ಗೆ ಸದಾ ಚರ್ಚೆ ಇದೆ. 

ಅದಾದ ಬಳಿಕ ನನ್ನ ತಂದೆಯವರು ನಿಧನರಾದಾಗ ಕರೆ ಮಾಡಿ ಸಾಂತ್ವನ ಹೇಳಿದ, ಸಹಾಯ ಕೇಳಿದ, ಮನೆಗೆ ಬಂದು ಮಾತುಕತೆ ನಡೆಸಿ ಧೈರ್ಯ ತುಂಬಿದವರಲ್ಲಿ  ಶ್ರೀನಿವಾಸ ಉಬರಡ್ಕ ಹಾಗೂ ತಳೂರು ಚಂದ್ರಣ್ಣನೂ ಇದ್ದರು. 

ಇದೆಲ್ಲಾ ಘಟನೆಗಳ ನಂತರವೂ ಸ್ನೇಹ ಮುಂದುವರಿಯಿತು. ಸಾಮಾಜಿಕ ಸಂಗತಿಯನ್ನು ಬಿಟ್ಟು.

ಈಚೆಗೆ ಶ್ರೀನಿವಾಸ ಉಬರಡ್ಕ ಅವರ ಮಗಳ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು. ಸಹಜವಾಗಿಯೇ ನನಗೆ ಕುತೂಹಲ ಇತ್ತು. ಹಿಂದುತ್ವದ ಪ್ರತಿಪಾದಕ, ಜಾತಿ ವ್ಯವಸ್ಥೆಯನ್ನು ಯಾವ ಕಾರ್ಯಕ್ರಮದಲ್ಲೂ ತಾರದ ವ್ಯಕ್ತಿ, ಇಡೀ ಕುಟುಂಬದ ಸದಸ್ಯರ, ಇನ್ನೊಂದು ಕುಟುಂಬದ ಮಂದಿಯನ್ನು ಮನವೊಲಿಸಿ ತಾವು ನಂಬಿದ ಸಿದ್ದಾಂತವನ್ನು  ಹೇಗೆ ಅನುಷ್ಟಾನ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೆ. ಆದರೆ ನನ್ನ ಯೋಚನೆ, ನಿರೀಕ್ಷೆಗೂ ಮೀರಿ ಅವರು ಕಾರ್ಯಕ್ರಮ ನಡೆಸಿದರು. ಈ ಮೂಲಕ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡರು ಎಂಬುದು ನನ್ನ ಭಾವನೆ. ಹೀಗಾಗಿ ಅಕ್ಷರದ ಮೂಲಕ ದಾಖಲಿಸಬೇಕಾಯಿತು. 

ಈ ವಿವಾಹ ಕಾರ್ಯಕ್ರಮಕ್ಕೆ ಪೂರ್ವಯೋಜಿತವಾಗಿ ಬೆಳಗ್ಗೆಯೇ ಇರಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಂದ ಕೊಂಚ ತಡವಾಗಿ ಭಾಗವಹಿಸಬೇಕಾಯಿತು.  ಜಾತಿಯಲ್ಲಿ ಬ್ರಾಹ್ಮಣ. ಆಚರಣೆಯಲ್ಲಿ ಹಿಂದುವಾಗಿದ್ದ ಶ್ರೀನಿವಾಸ ಅವರು ತಮ್ಮ ಮಗಳ ಮದುವೆಯಲ್ಲೂ ಸಂಪ್ರದಾಯಗಳೊಂದಿಗೆ ಹಿಂದುತ್ವವನ್ನು ಎತ್ತಿ ಹಿಡಿದರು. ಅದು ಸುಲಭದ ಕೆಲಸ ಅಲ್ಲ. ಮಾತು ಹಾಗೂ ಕೃತಿಯಲ್ಲಿ,  ನೇರ ನಡೆನುಡಿ ಇದ್ದರೆ ಮಾತ್ರವೇ ಈ ರೀತಿ ನಡೆಯಲು ಸಾಧ್ಯ. ನನ್ನ ಅಜ್ಜನೂ ಒಬ್ಬರು ಇದ್ದರು. ಅವರಿಗೂ ಈ ರೀತಿ ನಡೆದುಕೊಳ್ಳಲು ಆಗಿತ್ತು. ಉಳಿದ ಎಲ್ಲೆಡೆಯೂ ಆಚರಣೆಯಲ್ಲೂ ವ್ಯತ್ಯಾಸ ಇದ್ದುದನ್ನು ಕಂಡಿದ್ದೇನೆ. 

ಮದುವೆಯಲ್ಲಿ ಎರಡು ಕುಟುಂಬಗಳು, ಅದರಲ್ಲಿ ಇರುವ ಸಂಪ್ರದಾಯವಾದಿಗಳು, ಅವರ  ಮನವೊಲಿಸುವುದು  ಹಾಗೂ ಖಡಕ್‌ ಆಗಿ ಹೇಳುವುದು ಇದೆಲ್ಲಾ ಮದುವೆಯ ಕಾರ್ಯಕ್ರಮದಲ್ಲಿ ಸುಲಭದ ಕೆಲಸ ಅಲ್ಲ. ಸಂಘಟನೆ ಯಾವುದೇ ಇದ್ದರೂ ಅದೆಲ್ಲಾ ಬದಿಗಿರಲಿ ಎಂದು ಪುರೋಹಿತರಿಂದ ತೊಡಗಿ ಎಲ್ಲರೂ ಹೇಳುವ ಕಾಲದಲ್ಲಿ ಶ್ರೀನಿವಾಸರು ಮಗಳ ಮದುವೆಯಲ್ಲಿ  ಸಮಾಜದಲ್ಲಿ ಉಪೇಕ್ಷಿತ ಸಮಾಜ ಎಂದು ಯಾವುದನ್ನು ಗುರುತಿಸುತ್ತದೋ ಅದೇ ಸಮುದಾಯದ ಯುವಕ ವೈಯಕ್ತಿಕ ಗೀತೆ ಹಾಡಿದರು, ಅಕ್ಷತೆ ಹಾಕಿದರು. ಮಂಟಪಕ್ಕೆ ಬಂದರು. ಅಂದರೆ  ಇಡೀ ಹಿಂದೂ ಸಮಾಜವೇ ಬಂದಿದೆ ಎಂದೇ ಅರ್ಥವಾಯಿತು ಇಲ್ಲಿ. ಎಲ್ಲೂ ಯಾವ ತಾರತಮ್ಯ ಇಲ್ಲ. ಹಿಂದುತ್ವ ಎನ್ನುವುದು  ಓಟಿಗಾಗಿಯೋ,  ಉಪದೇಶಕ್ಕಾಗಿಯೋ ಇರುವ ಈ ಕಾಲದಲ್ಲಿ ನಾವೆಲ್ಲಾ ಇಂತಹವರಿಂದ ಪ್ರೇರಣೆಗೆ ಒಳಗಾದವರೇ.  

ಅಂತಹ ಜನರು ಈಗಿಲ್ಲ...  ಮಾತಿಗೂ ಕೃತಿಗೂ ವ್ಯತ್ಯಾಸ ಇದೆ ಎಂದು ಭ್ರಮನಿರಸನಗೊಂಡಿದ್ದೆ. ಓಟಿಗಾಗಿ ಮಾತ್ರವೇ ಹಿಂದುತ್ವ ಎಂದು ಭಾವಿಸಿಕೊಂಡಿದ್ದೆ. ಆದರೆ ಶ್ರೀನಿವಾಸ ಉಬರಡ್ಕ ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು. ಅವರ ಹಿಂದುತ್ವದ ಉದ್ದೇಶವೂ ಸಮಾನತೆಯೇ ಆಗಿದೆ ಎಂದು ಭಾವಿಸಿಕೊಂಡೆ. ಇಂತಹವರು ಯಾವತ್ತೂ ಪ್ರೇರಣೆಯೇ. ಇಂದು ನಾನು ಅನೇಕರಿಗೆ ವಿರೋಧಿ ಎಂದು ಅನಿಸಬಹುದು.ಅಭಿವೃದ್ಧಿ ಪರವಾಗಿ ಯೋಚಿಸುವುದು  ನಿರಂತರ.   ಆದರೆ ನಾನು ಇದುವರೆಗೂ ಕಲಿತ ಪಾಠ ಹಾಗೂ ಸ್ಫೂರ್ತಿಯಾದ  ಹಿಂದುತ್ವ ಆಚರಿಸಿದ್ದೇನೆ. ಆದರೆ ಈಗ ಹೊಡಿ, ಬಡಿಯ ಕಡೆಗೆ ಮನಸ್ಸಿಲ್ಲ. ಹಿಂದುವಾಗಿ ದೇಶದ ಕಡೆಗೆ ಸಂಸ್ಕೃತಿ ಉಳಿಸುವ, ಬೆಳೆಸುವ ಯೋಚನೆಯನ್ನು ಎಂದಿಗೂ ಬಿಡದೇ ಇರಲು ಶ್ರೀನಿವಾಸ, ವೇಣುವಣ್ಣ ಅಂತಹವರು ಮುಖ್ಯ ಕಾರಣ. 

ವಧೂವರರಿಗೆ ಶುಭಾಶಯ. ಅವರ ಮಗಳ ಬದುಕು ಸುಂದರವಾಗಲಿ. ಶುಭವಾಗಲಿ.




06 ಡಿಸೆಂಬರ್ 2021

ಒಂದು ಕಣ್ಣೀರು ಕೂಡಾ ಉದ್ಯಮವಾಗಬಹುದಾದರೆ, ನಾವೆಲ್ಲಿದ್ದೇವೆ…..? ಬದಲಾವಣೆ ಹೇಗೆ ?

 ಎಷ್ಟೇ ಹೇಳಿದರೂ ಇಂದು ಜಗತ್ತು ಉದ್ಯಮವಾಗಿ ಬದಲಾಗುತ್ತಿದೆ. ಏನೇ ಮಾತನಾಡಿದರೂ ಕೊನೆಗೆ ಬಂದು ನಿಲ್ಲಿವುದು ನನಗೇನು ಅಥವಾ ನಮಗೇನು ಲಾಭ ಎಂದೇ ? ಇಂತಹ ಕಾಲಘಟ್ಟದಲ್ಲಿ ಮಾನಸಿಕವಾಗಿ ಸ್ವಲ್ಪ ಯೋಚಿಸಬಲ್ಲ ಹಾಗೂ ಅಂತಹ ವಾತಾವರಣವನ್ನು ಸೃಷ್ಟಿ ಮಾಡುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಹೀಗಾಗಿ ಈಗ ಯೋಚಿಸಬೇಕಾದ ಕಾಲಘಟ್ಟ.

ಈ ಜಗತ್ತಿಗೆ, ಈ ಸಮಾಜಕ್ಕೆ ಕೊಡುಗೆ ಏನು ನೀಡಬಹುದು ? ಎಂಬ ಪ್ರಶ್ನೆಯನ್ನು ಒಬ್ಬರು ಕೇಳಿದರು. ಅನೇಕರು ವಿವಿಧ ರೀತಿಯ ಉತ್ತರ ನೀಡಿದರು. ಅವರವರ ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಉತ್ತರಗಳನ್ನು ನೀಡಿದರು. ಅದರಲ್ಲಿ ಬಹುಪಾಲು ಈ ಜಗತ್ತಿನಲ್ಲಿ ಸೃಷ್ಟಿಸಿಯಾಗಿದೆ ಕೂಡಾ. ಇನ್ನೇನಿದ್ದರೂ ಅದರದ್ದೇ ಮುಂದಿನ ಭಾಗ ಅಷ್ಟೇ…!. . ಅನೇಕ ಯುವ ಪತ್ರಕರ್ತರನ್ನು ಅದೇ ಪ್ರಶ್ನೆ ಕೇಳಿದಾಗ ಹೇಳುವ ಉತ್ತರ, “ ಈ ಸಮಾಜವನ್ನು ಬದಲಾಯಿಸಲು ನಾನು ಪತ್ರಿಕೋದ್ಯಮ” ಆಯ್ಕೆ ಮಾಡಿಕೊಂಡಿದ್ದೇನೆ ಎಂದೇ. ಇಂತಹ ಉದ್ದೇಶ ಇಟ್ಟುಕೊಂಡಿರುವ ಪತ್ರಕರ್ತರು ನಂತರ ಸೋಲುವುದು ಎಲ್ಲಿ ? ಎಂಬುದೇ ಬಹುದೊಡ್ಡ ಪ್ರಶ್ನೆ. ಈ ಬದಲಾವಣೆ ಆಗಬೇಕಾದ್ದು ಎಲ್ಲಿ ?. ಹಾಗಿರುವ ಬದಲಾವಣೆ ಏನು ? 

ಇಂದಿನ ಕಾಲಘಟ್ಟದಲ್ಲಿ ಈ ದೇಶಕ್ಕೆ, ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ ಕೊಡುಗೆಯೇ ನೈತಿಕ ಮೌಲ್ಯಗಳು. ಈ ದೇಶದ ಪರಂಪರೆಯಾದ ನೈಜತೆಯ ಪುನರುತ್ಥಾನ ಅಷ್ಟೇ. ಅದನ್ನು ಚಿಂತಿಸುವ ಹಾಗೆ ಮಾಡಬೇಕಾದ್ದೇ ಪತ್ರಿಕೋದ್ಯಮ ವಿಭಾಗ, ಏಕೆಂದರೆ ಇಂದು ಯೋಚಿಸುವಂತೆ ಹಾಗೂ ಅದನ್ನು ಓದುವಂತೆ ಮಾಡುವು ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ. ಅದು ಸೋಶಿಯಲ್ ಮೀಡಿಯಾ, ಆನ್ ಲೈನ್ ಮೀಡಿಯಾ, ಪತ್ರಿಕಾ ರಂಗ, ದೃಶ್ಯ ಮಾಧ್ಯಮ. ಇಲ್ಲೆಲ್ಲಾ ಸತ್ಯದ ಯೋಚನೆಯನ್ನು ಯೋಜಿಸುವ ಮನಸ್ಸುಗಳು ಬೆಳೆಯಬೇಕಾದ ಅವಶ್ಯಕತೆ ಇದೆ. ಏಕೆಂದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಒಂದು ಕಾಲಂ ಪ್ರಕಟವಾಗುತ್ತಿದೆ, “ಫ್ಯಾಕ್ಟ್ ಚೆಕ್” . ಅಂದರೆ ಅಷ್ಟೂ ಪ್ರಮಾಣದಲ್ಲಿ ಸುಳ್ಳುಗಳು ವಿಜೃಂಭಿಸುತ್ತವೆ, ಎಷ್ಟೆಂದರೆ ಸತ್ಯವೇ ಸುಳ್ಳೆಂದು ಹೇಳುವ ಕಾಲಘಟ್ಟ ಬಂದಾಗಿದೆ. ಹೀಗಾಗಿ ಇಲ್ಲೊಂದು ಬದಲಾವಣೆಯ ಪರ್ವ ಆರಂಭವಾಗಬೇಕಿದೆ. 

ಇಷ್ಟೇ ಇಲ್ಲ, ಅದಾರಾಚೆಗೆ ಬಂದರೆ,ಒಂದು ಕುಟುಂಬದ ಕಣ್ಣೀರು, ಒಂದು ಕುಟುಂಬ ಖಾಸಗಿ ಬದುಕುಗಳೂ ಇಂದು ಉದ್ಯಮವಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲಿ ಇದಕ್ಕೇ ಪ್ರಾಶಸ್ತ್ಯ ಎಂದಾದರೆ ಒಂದು ಕಣ್ಣೀರು ಕೂಡಾ ಉದ್ಯಮವಾಗುತ್ತದೆ ಎಂದಾದರೆ ಅಲ್ಲಿ ಮನುಷ್ಯತ್ವ ಸಾಯುತ್ತಿದೆ ಎಂದೇ ಅರ್ಥ. ಒಂದು ಮನೆಯೊಳಗಿನ ಕಣ್ಣೀರಿಗೆ ಇಡೀ ಸಮಾಜವೇ ಬೆಳಕಾಗುತ್ತದೆಯಾದರೆ ಇಂದು ಸಮಾಜದಲ್ಲಿ ಯಾವ ಕುಟುಂಬಗಳೂ ಸಂಕಷ್ಟದಲ್ಲಿ ಇರಬಾರದಾಗಿತ್ತು. ಆದರೆ ಹಾಗಾಗುತ್ತಿಲ್ಲ, ಆ ಕುಟುಂಬದ ಸಂಕಷ್ಟದ ಕಣ್ಣೀರು ನೋಡುತ್ತಾ, ಆನಂದವೋ, ಮತ್ತೆ ಕಣ್ಣೀರೋ.. ? ಏನೋ ಒಂದು ಆಗುತ್ತಿದೆ ಎನ್ನುವುದು ಇಲ್ಲೊಂದು ಬದಲಾವಣೆ ಬೇಕಿದೆ ಎನ್ನುವುದರ ಸೂಚಕವಷ್ಟೇ.

ಇಷ್ಟೇ ಅಲ್ಲ, ನೈತಿಕ ಅಧ:ಪತನಗಳು ಎಲ್ಲಾಗುತ್ತಿವೆ ಎಂದರೆ ಮಾಧ್ಯಮ ರಂಗದಲ್ಲಿಯೇ..!. ಯಾವುದೋ ಖಾಸಗಿ ಕ್ಷಣಗಳು, ನೈತಿಕ ಅಧ:ಪತನದ ವಿಡಿಯೋ ಕೂಡಾ ಉದ್ಯಮವಾಗುತ್ತದೆ. ಸೆಕ್ಸ್ ವಿಡಿಯೋಗಳೂ ಕೂಡಾ ಸೋಶಿಯಲ್ ಮೀಡಿಯಾದಿಂದ ತೊಡಗಿ ದೃಶ್ಯ ಮಾಧ್ಯಮಗಳಲ್ಲಿ ರಾರಾಜಿಸುತ್ತವೆ ಹಾಗೂ ಇಡೀ ದಿನ ಪ್ರಸಾರವಾಗುತ್ತದೆ ಎಂದಾದರೆ ಪ್ರತೀ ವ್ಯಕ್ತಿಯೂ ನೈತಿಕವಾಗಿ ಕುಸಿತವಾಗಿದ್ದಾನೆ ಎಂದೇ ಅರ್ಥ.ಇಲ್ಲೂ ಬದಲಾವಣೆಯ ನಿರೀಕ್ಷೆ ಇದೆ.

ಇಂದು ಪುಟ್ಟ ಪುಟ್ಟ ಮಾಧ್ಯಮ ಗಮನಿಸಿದರೂ, ಸಮಾಜದಲ್ಲಿ ಒಳ್ಳೆಯದನ್ನು ಫೋಕಸ್ ಮಾಡದೆ, ಕೊಲೆ, ಸುಲಿಗೆ, ಸೆಕ್ಸ್, ಸೇರಿದಂತೆ ಋಣಾತ್ಮಕ ಸಂಗತಿಗಳನ್ನೇ ಏಕೆ ಪ್ರಸಾರ ಮಾಡುತ್ತಿವೆ ಎಂಬ ಸಮೀಕ್ಷೆ ಮಾಡಿದರೆ, ಅದೆಲ್ಲವೂ ವ್ಯವಹಾರವಾಗಿದೆ, ಅದೆಲ್ಲಾ ಉದ್ಯಮವಾಗಿದೆ. ಅಂತಹ ಸಂಗತಿಗಳೇ ಓದಿಸುತ್ತವೆ, ಹೀಗೆ ಓದಿಸಿದರೆ ಮಾಧ್ಯಮ ಓಡುತ್ತದೆ, ಮಾಧ್ಯಮ ಓಡಿದರೆ ಹಣ ಬರುತ್ತದೆ…!. ಇಷ್ಟೇ ಇಲ್ಲಿರುವ ಸಂಗತಿಗಳು. 

 ಇಂತಹ ವ್ಯವಸ್ಥೆ ಬದಲಾಯಿಸಲು ತಕ್ಷಣಕ್ಕೆ ಸಾಧ್ಯವೇ ಇಲ್ಲ ಎಂಬುದೂ ವಾಸ್ತವ. ಆದರೆ ಸಣ್ಣ ಪ್ರಯತ್ನವೊಂದು ಆರಂಭವಾಗಬಹುದು ಅಷ್ಟೇ. ನದಿಯ ಮೊದಲ ಹನಿಯಂತೆ ಇದೂ ಒಂದು ಪ್ರಯತ್ನವಷ್ಟೇ. ರಚನಾತ್ಮಕವಾದ ದೃಷ್ಟಿಕೋನದಿಂದಲೇ ಹೆಜ್ಜೆ ಇರಿಸಿಕೊಂಡು ಸಮಾಜಕ್ಕೆ ಯಾವ ಉಪಯೋಗವೂ ಇಲ್ಲದ ಸುದ್ದಿಗಳ ಕಡೆಗೆ ಹೆಚ್ಚು ಫೋಕಸ್ ಮಾಡದೇ ಇರುವುದಷ್ಟೇ ಸದ್ಯದ ಪರಿಹಾರ. ಅಂತಹ ಮನಸ್ಥಿತಿಯನ್ನು ಯುವಪತ್ರಕರ್ತರು ಬೆಳೆಯಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ತರಬೇತಿಯೂ ಆ ನೆಲೆಯಲ್ಲಿಯೇ ನಡೆಯಬೇಕಿದೆ.ಇಂತಹ ನಡೆಯಲ್ಲೂ ಸವಾಲುಗಳು ಇರುತ್ತವೆ.

 ವಾಸ್ತವದಲ್ಲಿ, ಉದ್ಯಮದ ನಡೆಗಿಂತಲೂ ರಚನಾತ್ಮಕವಾದ ನಡೆಗಳು ಯಾವತ್ತೂ ಹೆಚ್ಚು ಸವಾಲುಗಳೇ. ಇಂತಹ ಸಂಗತಿಗಳಲ್ಲಿ ದುಡ್ಡು ಆಗುವುದಿಲ್ಲ,  ಇಂದಿನ ಸಮಾಜದಲ್ಲಿ ದುಡ್ಡ ಕೂಡಾ ಅಗತ್ಯವಾದ ಕಾರಣ ಇಂತಹ ರಚನಾತ್ಮಕ ನಡೆಗಳಲ್ಲಿ ದುಡ್ಡು ಆಗದೇ ಇದ್ದರೆ ಸಮಾಜದಲ್ಲಿ ಸಶಕ್ತವಾಗಿ ಬದುಕು ಹೇಗೆ ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕಾಗಿ ಒಂದಷ್ಟು ಸಹೃದಯ ಹಾಗೂ ನಿಜವಾಗೂ ಬದಲಾವಣೆಯ ಮನಸ್ಸುಳ್ಳ ಕೂಟಗಳು ಬೇಕಾಗಬಹುದು, ಅಂತಹ ಕೂಟವನ್ನು ಯುವಪತ್ರಕರ್ತರೇ ನಿರ್ಮಾಣ ಮಾಡುತ್ತಾ, ಸಮಾಜದಲ್ಲಿ ಬದಲಾವಣೆ, ಯೋಚಿಸುವ ಬದಲಾವಣೆ, ತರಲು ಸಾಧ್ಯವಿದೆ, ಒಮ್ಮೆ ಯೋಚನೆಗೆ ಬಂದರೆ ಉಳಿದೆಲ್ಲಾ ಬದಲಾವಣೆಗಳೂ ಸಹಜವಾಗಿಯೇ ಆಗುತ್ತದೆ. ಇಂತಹದ್ದೊಂದು ಪ್ರಯತ್ನ ಯುವಪತ್ರಕರ್ತರಿಂದ ನಡೆಯಲು , ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಲು ತರಬೇತಿ ಕೇಂದ್ರಗಳೂ ಗಟ್ಟಿಯಾಗಬೇಕು.


( ವಿವೇಕಾನಂದ ಪತ್ರಿಕೋದ್ಯಮ ಕಾಲೇಜಿನ ವಿಕಸನ ಪತ್ರಿಕೆಗಾಗಿ ಬರೆದದ್ದು )


17 ಅಕ್ಟೋಬರ್ 2021

ದೇಸೀ ಗೋವಿನ ಪ್ರೀತಿ...! ಪಿಕ್‌ ಅಪ್‌ ಗೆ ಬಾಡಿಗೆ ಸಮರ್ಪಣೆಯೂ....!!



ನನಗ್ಯಾಕೋ ಗೋವು ಎಂದರೆ ಒಂಚೂರು ಪ್ರೀತಿ ಹೆಚ್ಚು. ನಮ್ಮನೆಯಲ್ಲಿ ಒಂದು ಹೋರಿ ಸಹಿತ ಒಂದು ದನ ಎರಡು ಕರು ಸಾಕುತ್ತಿದ್ದೇವೆ. ಹೋರಿ ಸಾಕುವುದು  ಕೂಡಾ ಪ್ರೀತಿಯ ಕಾರಣಕ್ಕೆ. ಅನೇಕರು "ಗಿರಾಕಿ"ಗಳು ಬಂದರು. ಹೋರಿ ಕೊಡಲು ಒತ್ತಾಯ ಮಾಡಿದರೂ, ಈಗಲೂ  ಹೋರಿ ಸಾಕುತ್ತಿದ್ದೇವೆ.
ಎಲ್ಲೇ ಹೋದರೂ ಸಂಜೆ ಬಂದು ಮನೆಯಲ್ಲಿ ಹಟ್ಟಿಯೊಳಗೆ ಹೋಗಲೇಬೇಕು. ಹಾಲು ಕರೆಯುವ ಕೆಲಸ ಇದ್ದೇ ಇದೆ. ಬೆಳಗ್ಗೆ 3.30 ಕ್ಕೆ ಹಾಲು ಕರೆದ ದಿನ ಇದೆ ರಾತ್ರಿ 11 ಕ್ಕೂ ಬಂದು ಹಾಲು ಕರೆದು, ಕರುವಿಗೆ ಹಾಲುಣಿಸಿದ ದಿನವೂ ಇದೆ. ಅದು ದೇಸೀ ದನ. ...!.ಇದಿಷ್ಟು ಬೇಸಿಕ್‌ ಹೇಳಲು ಕಾರಣ ಇದೆ. ಗೋವು ಸಾಕಾಣಿಕೆ ಹಾಗೂ ಆರೈಕೆಯ ಭಾಗವನ್ನು ಹೇಳಿಯೇ  ನಮ್ಮ ಗೋವಿನ ಕತೆಯನ್ನು ದಾಖಲಿಸಬೇಕಿತ್ತು.

ಸುಮಾರು ಹದಿನೈದು ವರ್ಷಗಳ ಹಿಂದಿನ ಕತೆ ಇದೆ. ಭಾರತೀಯ ಗೋ ತಳಿಯ ಬಗ್ಗೆ‌ ಎರಡು ಕಾರಣಗಳಿಂದ ಹೆಚ್ಚು ಇಷ್ಟವಾಯಿತು. ಒಂದು ಗೋವಿನ ಮಹತ್ವ, ಇನ್ನೊಂದು ಭೂಮಿಯ ಫಲವತ್ತತೆಯಲ್ಲಿ ದೇಸೀ ಗೋವಿನ ಪಾತ್ರದ ಬಗ್ಗೆ. ಇಲ್ಲೂ ಎರಡು ವಿಚಾರಗಳ ಕಡೆಗೆ ಆಕರ್ಷಿತನಾಗಿದ್ದೆ. ಮೊದಲನೆಯದು ನಾನು ಪಡೆದ  ದೇಸೀಯತೆಯ ಹಾಗೂ ದೇಶದ ಬಗೆಗಿನ ಶಿಕ್ಷಣ. ಇನ್ನೊಂದು ರಾಮಚಂದ್ರಾಪುರ ಮಠದ ಗೋ ತಳಿ ಸಂರಕ್ಷಣೆಯ ಕಾಳಜಿಗೆ ಸಹಕಾರ ನೀಡುವ ಪ್ರೀತಿ.

ಹೀಗಾಗಿ ರಾಮಚಂದ್ರಾಪುರ ಮಠದ ಕಡೆಯಿಂದ ದೇಸೀ  ಗೋ ತಳಿಯನ್ನು ಮನೆಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಾವೂ ಈ ಯೋಜನೆಯಲ್ಲಿ ಭಾಗಿಯಾದೆವು. ಅದು ಕಾಂಕ್ರೇಜ್‌ ತಳಿಯ ಗೋವು. ನಮ್ಮೂರಿಗೆ ಹೊಸನಗರದಿಂದ ಒಂದು ಲೋಡ್‌ ಅಂದರೆ 13  ಗೋವುಗಳನ್ನು  ತರುವ ಜವಾಬ್ದಾರಿ ನಮ್ಮ ಮೇಲಾಯಿತು. ಗೋವಿನ ತರುವ ಬಗ್ಗೆ ಅದೊಂದು ತಂಡ ಯೋಜನೆ ಸಿದ್ಧ ಮಾಡಿತು. ಲಾರಿಯಲ್ಲಿ  ಗೋವು ತರುವ ಕೆಲಸ ನಮ್ಮದಾಯಿತು. ನನ್ನ ಜೊತೆ ನನ್ನ ಕುಟುಂಬದ ಸಹೋದರನೂ ಜೊತೆಗಿದ್ದರು.

ಅಂದು ನಾವಿಬ್ಬರೂ ಲಾರಿಯಲ್ಲಿ ಸಂಜೆ ಹೊಸನಗರದಿಂದ ಹೊರಟಾಯಿತು. ಸುಮಾರು ಕುಂದಾಪುರದ ಬಳಿ ತಲುಪಿದಾಗ ತಡರಾತ್ರಿಯಾಯಿತು. ಅಷ್ಟರಲ್ಲಿ ಒಂದು ಜೀಪಲ್ಲಿ ಬಂದ ಬಜರಂಗದಳದ ತಂಡ ಲಾರಿಯನ್ನು ತಡೆಯಿತು. ತಡೆದ ಬಳಿಕ ಗಲಾಟೆಯೋ ಗಲಾಟೆ...! ,ಇದು ಕಸಾಯಿಖಾನೆಗೆ ಹೋಗುತ್ತಿದೆ ಎಂದು ಆ ರಾತ್ರಿಯಲ್ಲಿ ಬೊಬ್ಬಿಟ್ಟರು. ಯಾವ ಉತ್ತರ ನೀಡಿದರೂ ಕೇಳಲಿಲ್ಲ. ನಮಗೆಲ್ಲಾದರೂ ಸಮಸ್ಯೆಯಾದರೆ, ತಡೆಯಾದರೆ ತಿಳಿಸಲು ಮೊಬೈಲ್‌ ನಂಬರ್‌ ನೀಡಿದ್ದರು. ಆದರೆ ನಮ್ಮ ಬಳಿ ಮೊಬೈಲ್‌ ಇರಲಿಲ್ಲ. ಹೀಗಾಗಿ ಅಲ್ಲೇ ಪಕ್ಕದ ಯಾರದೋ ಮೊಬೈಲ್‌ ನಿಂದ ಕರೆ ಮಾಡಲು ಹೇಳಿದೆವು. ಆದರೆ ಆ ಕಡೆಯಿಂದ ಕರೆ ಸ್ವೀಕಾರವಾಗಲಿಲ್ಲ...!. ನಾವಂತೂ ಗಲಿಬಿಲಿಯಾದೆವು. ಅಷ್ಟರಲ್ಲಿ ಬೊಬ್ಬೆಯೂ ಹೆಚ್ಚಾಯಿತು, ಇದು ಕಸಾಯಿಖಾನೆಗೇ ಎಂದರು. ನನ್ನ ಜೊತೆಗಿದ್ದ ಅಣ್ಣನೂ ಹಲವು ಉತ್ತರ ನೀಡಿದರೂ ಒಪ್ಪಲಿಲ್ಲ ಆ ತಂಡ. ಕೊನೆಗೆ ಸಮೀಪದ ಪೊಲೀಸ್‌ ಠಾಣೆಗೆ ತೆರಳುವಂತೆ ಲಾರಿ ಚಾಲಕನಿಗೆ ಹೇಳಿದೆವು. ಲಾರಿ ಚಾಲಕ ಪೊಲೀಸ್‌ ಠಾಣೆಗೆ ತಿರುಗಿಸಿದ. ಅಷ್ಟರಲ್ಲಿ ಪೊಲೀಸರೂ ಸ್ಥಳಕ್ಕೆ ಬಂದರು. ಮೊದಲೇ ಮಾಹಿತಿ ಇದ್ದ ಪೊಲೀಸರು ನಮಗೆ ಸುಗಮವಾಗಿ ಹೋಗಲು ಅವಕಾಶ ಮಾಡಿಕೊಟ್ಟರು. ಹಾಗೆ ಊರಿಗೆ ಬಂದಾಗ ಬೆಳಗ್ಗೆ ಆಗಿತ್ತು.ಇಲ್ಲಿ 13 ಮನೆಗಳಿಗೆ ಕಾಂಕ್ರೇಜ್‌ ತಳಿಯ ಗೋವನ್ನು ತಲುಪಿಸಲಾಯಿತು. 

ಕಾಂಕ್ರೇಜ್‌ ತಳಿಯ ಗೋವು ನಮ್ಮ ಹಟ್ಟಿಯೊಳಗೆ ಬಂದ ಬಳಿಕ ನಿಧಾನವಾಗಿ ಇತರ ತಳಿಯ ಗೋವುಗಳನ್ನು ಮಾರಾಟ ಮಾಡಲಾಯಿತು. ಸವಾಲುಗಳು ಇದ್ದದ್ದು ಆಗಲೇ.ನಿಯಮದ ಪ್ರಕಾರ ಹಾಗೂ ದೇಸೀ ತಳಿಯ ಪ್ಯೂರಿಟಿ ಉಳಿಸಿಕೊಳ್ಳಲು ಸಂಕರ ಮಾಡಬಾರದು,  ಬೆದೆಗೆ ಬಂದಾಗ ಹೋರಿಯ ಬಳಿಯೇ ಕೊಂಡೋಗಬೇಕು. ಈ ಕೆಲಸ ಮಾತ್ರಾ ಸದಾ ನೆನಪಿನಲ್ಲಿ ಉಳಿಯಬೇಕಾದ್ದೇ ಆಗಿದೆ.  ನಮ್ಮ ಮನೆಯ ಕಾಂಕ್ರೇಜ್‌ ತಳಿಯ ಗೋವು ಬೆದೆಗೆ ಬಂದಿತು. ಇದನ್ನು ಸಂಕರಕ್ಕಾಗಿ ಹೋರಿಯ ಬಳಿಗೆ ಕೊಂಡೋದೆವು. ಇಬ್ಬರು ಕೆಲಸಗಾರರು ಹಾಗೂ ಪಿಕ್‌ ಅಪ್‌ ನಲ್ಲಿ ಹಾಕಿಕೊಂಡು ಆರಂಭದಲ್ಲಿ ಸಮೀಪದಲ್ಲೇ ಇದ್ದ ಮೊಗ್ರಕ್ಕೆ ಕೊಂಡೋದೆವು, ಅದಾಗಲಿಲ್ಲ, ನಂತರ ಕಾಂಚೋಡು ಕಡೆಗೆ ಹೋದೆವು , ಅದಾದ ಬಳಿಕ ಕಡಬದ ಬಳಿಯ  ಹೊಸಮಠ ಹತ್ತಿರದ ಕೂಡೂರಿಗೆ , ನಂತರ ಬೆಳ್ಳಾರೆ ಬಳಿಯ ನೆಟ್ಟಾರಿನ ಅರುಣ ಶಂಕರ ಅವರ ಮನೆಗೆ ಹಲವು ಬಾರಿ ಹೋಗಿದ್ದೆವು. ಪ್ರತೀ ಬಾರಿ ಪಿಕ್‌ ಅಪ್‌ ಹಾಗೂ ಇಬ್ಬರು ಕೆಲಸಗಾರರು. ಅಂತೂ ನಮ್ಮ ಹಟ್ಟಿಯಲ್ಲಿ ಕಾಂಕ್ರೇಜ್‌ ತಳಿ ಅಭಿವೃದ್ಧಿಯಾದವು. ಅಷ್ಟರವರೆಗೂ ನೀಡಿದ ಪಿಕ್‌ ಅಪ್ ಬಾಡಿಗೆ ಒಂದು ಸಮರ್ಪಣೆಯೇ ಆಯಿತು...!.‌ ಒಂದು ಉದ್ದೇಶಕ್ಕಾಗಿ ಇದ್ಯಾವುದೂ ಆಗ ಲೆಕ್ಕವೇ ಇರಲಿಲ್ಲ...! , ಲಾಭ-ನಷ್ಟದ ಲೆಕ್ಕವೇ ದಾಖಲಾಗಲಿಲ್ಲ..!. ಕಣ್ಣ ಮುಂದೆ ಇದ್ದದ್ದು ಉದ್ದೇಶ, ಒಂದು ಚಿಂತನೆ.. ಒಂದು ವಿಚಾರ ಅಷ್ಟೇ... ಅದು ದೇಸೀಯತೆ....!. 

ಕೊನೆಗೆ ಬೆಳ್ಳಾರೆ ಬಳಿಯ ಶೇಣಿಯ ಮನೆಗೆ ದನವನ್ನು ಕೊಂಡೋಗಿದ್ದೆವು. ಆ ದಿನ ಭಾರೀ ಮಳೆಯೂ ಬೇರೆ. ಅಲ್ಲಿನ ಹೋರಿ ಸಂಕರದ ಬಳಿಕ ನಾವೆಲ್ಲರೂ ಮನೆಗೆ ಬಂದಾಗಿತ್ತು. ಮರುದಿನ ಆ ಹೋರಿ ಹೃದಯಾಘಾತದಿಂದ ಮೃತಪಟ್ಟಿತ್ತು. ಅಂದಿಗೇ ನಾವು ತೀರ್ಮಾನಿಸಿದೆವು. ಇನ್ನು ದನವನ್ನು ಹೋರಿಯ ಬಳಿಗೆ ಸಂಕರಕ್ಕೆ ಕೊಂಡೊಯ್ಯಲು ಇಲ್ಲವೆಂದು. ಆ ಹೊತ್ತಿಗೆ  2012. ಅದಾಗಿ ಕಾಂಕ್ರೇಜ್‌ ತಳಿಯ ಹೋರಿ ಇಂಜೆಕ್ಷನ್‌ ಲಭ್ಯವಾಯಿತು. ಎಲ್ಲಾ ನಿಯಮವನ್ನು ಬದಿಗೆ ಸರಿಸಿ ಇಂಜೆಕ್ಷನ್‌ ನೀಡಿದೆವು ಕೂಡಾ. ಆದರೆ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಕಾಂಕ್ರೇಜ್‌ ತಳಿಯನ್ನು ವಾಪಾಸು ಮಾಡಲು ಮುಂದಾದೆವು. ಕೊನೆಗೆ ವೇಣೂರಿನ ಗೋಶಾಲೆಗೆ ನಮ್ಮೆಲ್ಲಾ ಕಾಂಕ್ರೇಜ್‌ ತಳಿಯನ್ನು ನೀಡಿದ ದಿನ ಮನಸ್ಸಿಗೆ ಬೇಸರವಾಗಿತ್ತು, ತಿಂಗಳ ಕಾಲ ಅದೇ ನೆನಪು ಕಾಡಿತ್ತು. ಆ ಕರುಗಳು ನನ್ನ ತಂದೆಯವರ ಹಾಸಿಗೆಯಲ್ಲಿ ಬಂದು ಮಲಗುತ್ತಿದ್ದುದು, ಪ್ರೀತಿಯ ಆಟ ಆಡುತ್ತಿದ್ದುದು ಎಲ್ಲವೂ ನೆನಪು.

ಅದರ ಜೊತೆಗೇ, ಹೀಗೆ ಕಾಂಕ್ರೇಜ್‌ ತಳಿ ಸಾಕುವ ವೇಳೆ  ವ್ಯಂಗ್ಯ ಮಾಡಿದವರು, ಅದಾಗದು ಎಂದವರು, ಅದು ಸುಮ್ಮನೆ...  ಎಂದವರು ಸಾಕಷ್ಟು ಮಂದಿ. ಯಾವುದಕ್ಕೂ, ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ. ಇದೊಂದು ಚಿಂತನೆ, ಇದೊಂದು ಬದ್ಧತೆ, ಇದೊಂದು ಸೇವೆ ಎಂದಷ್ಟೆ ನಿರಂತರ ಪ್ರಯತ್ನ ಮಾಡಿದ್ದೆವು. ಅದರ ಪರಿಣಾಮ ಯಶಸ್ಸೂ ಆಗಿತ್ತು, ಹಟ್ಟಿ ತುಂಬಾ ಕಾಂಕ್ರೇಜ್‌ ಗೋವುಗಳು ತುಂಬಿದ್ದವು ಕೂಡಾ.

ಮುಂದೆ, ನಮ್ಮೂರಿನದ್ದೇ ತಳಿ,  ದೇಸೀ ತಳಿ. ಮಲೆನಾಡು ಗಿಡ್ಡ  ಸಾಕಲು ಆರಂಭ ಮಾಡಿದೆವು. ಇಂದಿಗೂ ಆ ತಳಿ ಮುಂದುವರಿದಿದೆ. ಅದರಲ್ಲೂ ಪ್ಯೂರಿಟಿಗಾಗಿ ಹೋರಿಗೇ ಸಂಕರ ಮಾಡಿದೆವು, ಅದಕ್ಕೂ ಪಿಕ್‌ ಅಪ್‌ ಸೇರಿದಂತೆ ಸಾಗಾಟ ಮಾಡಿದೆವು. ಕೊನೆಗೆ ಮನೆಯಲ್ಲಿಯೇ ಹೋರಿ ಕರು ಲಭ್ಯವಾಯಿತು. ಹೋರಿ ದೊಡ್ಡದಾಯಿತು. 

ಅದೊಂದು ದಿನ ಹೋರಿಯ ಸಂಕರಕ್ಕಾಗಿ ಬಿಟ್ಟಿದ್ದೆವು. ನಮ್ಮ ಆಪ್ತ ದನ ಬಿಡುವ ವೇಳೆ ದನ ಕೊಂಬು ಕಣ್ಣಿನ ಬಳಿ ತಾಗಿತು. ಸ್ವಲ್ಪದರಲ್ಲೇ ಕಣ್ಣಿನ ಮೇಲಿನ ಗಾಯ ತಪ್ಪಿತು. ಕಣ್ಣು ವಾರಗಳ ಕಾಲ ಕೆಂಪಾಯಿತು. ಅಪಾಯದಿಂದ ಪಾರಾದರು. ಸೂಕ್ತ ಔಷಧಿ ತೆರಳಿ ವಾರಗಳ ಕಾಲ ವಿಶ್ರಾಂತಿ ಕೂಡಾ ಪಡೆದರು. ಅಂದಿನಿಂದ ಅಗತ್ಯ ಇದ್ದರೆ ಮಾತ್ರಾ ಹೋರಿಯನ್ನು ಸಂಕರಕ್ಕೆ ಬಿಡುತ್ತೇವೆ. ಸಾಧ್ಯವಾಗದೇ ಇದ್ದರೆ ಇಂಜೆಕ್ಷನ್‌ ಗೆ ಬರಲು ಹೇಳುತ್ತೇವೆ. ಹಾಗಿದ್ದರೂ ಹೋರಿಯನ್ನು ಸಾಕುತ್ತಿದ್ದೇನೆ.

ಅನೇಕ ಸಮಯಗಳ ಕಾಲ ನಮ್ಮಲ್ಲಿ ಸ್ಲರಿ ವ್ಯವಸ್ಥೆ, ಕಾಂಪೋಸ್ಟ್‌ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದ ಗೊಬ್ಬರ ತಯಾರು ಆಗುತ್ತಿರಲಿಲ್ಲ. ಹೊಳೆಗೆ ಸೇರುತ್ತಿತ್ತು. ಈ ಸಮಯದಲ್ಲಿ  ವಳಲಂಬೆ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್ಟರು ಅದಕ್ಕೊಂದು ಯೋಚನೆ ನೀಡಿದರು. ಅಂದಿನಿಂದ ಉತ್ತಮ ಗೊಬ್ಬರವೂ ಆಗುತ್ತಿದೆ. ಹೀಗಾಗಿ ತೋಟಕ್ಕೂ ಸುಲಭದಲ್ಲಿ ಗೊಬ್ಬರ ತಯಾರಾಗುತ್ತದೆ.

ಸಾದ್ಯವಾದಷ್ಟು ಕಾಲ ಗೋ ತಳಿ ರಕ್ಷಣೆ ಹಾಗೂ ದೇಸೀ ಗೋ ತಳಿಯನ್ನು ಸಾಕಲು ನಿರ್ಧರಿಸಿದ್ದೇನೆ. ಸೆಗಣಿಯಿಂದ ಗೊಬ್ಬರ ಮಾಡುತ್ತೇವೆ. ತೋಟಕ್ಕೂ ಯಥಾ ಸಾಧ್ಯ ಹಾಕುತ್ತೇವೆ. ಎಷ್ಟು ಕಾಲ ಸಾಧ್ಯ ಅಷ್ಟು ಕಾಲ ಗೋ ಸಾಕಾಣಿಗೆ ಇದೆ. 

ನಂಬಿದ ವಿಚಾರ, ಕೃಪಿ ಪ್ರೀತಿ, ಗೋ ಪ್ರೇಮವನ್ನು ಮುಂದುವರಿಸುವುದು. ಗೋವು ಎಂದರೆ ಪ್ರೀತಿಯೇ. ನಮ್ಮ ಮನೆಯ ಹೋರಿ ಈಗಲೂ ಯಾರೇ ಬಂದರೂ ಕೂಗುತ್ತದೆ, ನಮ್ಮನ್ನು ಎಚ್ಚರಿಸುತ್ತದೆ. ಇಂತಹ ಪ್ರೀತಿಯನ್ನು ಹೇಗೆ ಬಿಡಲು ಸಾಧ್ಯವಿದೆ. ದೇಸೀ ಗೋವಿನ ಮಹತ್ವ, ಪ್ರೀತಿ ಅದು ಅನುಭವಿಸಿದವನಿಗೆ ಮಾತ್ರಾ ಗೊತ್ತು. 

ಹಾಗಂತ ನಾವು ದನ ಮಾರಾಟ ಮಾಡಿಲ್ಲ ಅಂತಲೇ ಅಲ್ಲ, ಮಾರಾಟ ಮಾಡಿದ್ದೇವೆ ಕೂಡಾ. ಜರ್ಸಿ ಹೋರಿಯನ್ನು ಮಾರಾಟ ಮಾಡಿದ್ದೇವೆ, ದೇಸೀ ದನವನ್ನೂ ಸಾಕುವವರಿಗೆ ನೀಡಿದ್ದೇವೆ.ಅನೇಕ ಬಾರಿ ಗೋವಿನ ಬಗ್ಗೆ  ಭಯಂಕರ ಚರ್ಚೆ ಮಾಡುವವರನ್ನು ಕಂಡಾಗ ಒಳಗೊಳಗೇ ನಗಬೇಕಾಗುತ್ತದೆ ಕೂಡಾ.... 

ಈಗಲೂ ದೇಸೀ ತಳಿಯ ಗೋವನ್ನು ಸಾಕುತ್ತಿದ್ದೇನೆ. ಮನೆಯಿಂದ ಹೊರಗೆ ಹೋದರೆ ರಾತ್ರಿ 11 ಗಂಟೆಗಾದರೂ ಬಂದು ಹಟ್ಟಿಗೆ  ಹೋಗಲು ಇದೆ. ಬೆಳಗ್ಗೆ ಬೇಗನೆ ಮನೆಯಿಂದ ಹೊರಡುವಾಗಲೂ ಹಟ್ಟಿಗೆ ಹೋಗಲು ಇದೆ. ಈ ಸೇವೆ ಸದ್ಯ ನಡೆಯುತ್ತಿದೆ.










10 ಅಕ್ಟೋಬರ್ 2021

ಹೇಗೆ ಬದಲಾಯಿತು ವ್ಯವಸ್ಥೆ....! ಏಕೆ ಪಾಸಿವಿಟಿ ಬದಲಾಗುತ್ತಿದೆ...! ವ್ಯಕ್ತಿ ಪ್ರತಿಷ್ಟೆ ಏಕಾಗುತ್ತಿದೆ...!!



ನಿನ್ನೆ ಸಂಘದ "ಪಾಸಿಟಿವ್‌ ಶಕ್ತಿ" ಯ ಬಗ್ಗೆ ನನ್ನ ಅನುಭವ ಹೇಳಿದ್ದೆ. ಅದೊಂದು ಸಮುದ್ರ. ಆ ಸಮುದ್ರವನ್ನು ನೋಡುತ್ತಾ, ಓದುತ್ತಾ ತಿಳಿದದ್ದು ಅದು. ಹಾಗೆಂದು  ಯಾವತ್ತೂ ಆ ಅಗಾಧ ಶಕ್ತಿಯನ್ನು  ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಲೋಪವೇ ಇಲ್ಲ, ನೆಗೆಟಿವ್‌ ಅಂಶಗಳೇ ಇಲ್ಲ.

ಆದರೆ 2021  ರಲ್ಲಿ  ನಿಂತು ನೋಡಿದಾಗ ಇಪ್ಪತ್ತು ವರ್ಷಗಳಲ್ಲಿನ ಬದಲಾವಣೆ ಮಹತ್ವದ್ದು. ಅದಕ್ಕಿಂತಲೂ ಹಿಂದಿನವರಲ್ಲಿ ಮಾತನಾಡಿದರೆ ಭ್ರಮ ನಿರಸನವಾಗುತ್ತದೆ ಎನ್ನುತ್ತಾರೆ. ಹಾಗೆ ಭ್ರಮ ನಿರಸನವಾಗಲು Update  ಆಗದೇ ಇರುವ ಕೊರತೆಯೋ ಎಂದು ಹಲವು ಬಾರಿ ಅನಿಸುತ್ತದೆ. ಇಂದಿನ ಯುಗ ವೇಗದ್ದು. ಈ ವೇಗದ ಯುಗದಲ್ಲಿ ತಕ್ಷಣವೇ ಅಪ್ಡೇಟ್‌ ಆಗಬೇಕಾಗುತ್ತದೆ. ಈ ವೇಗದ ಪರಿಣಾಮ ಪುಸ್ತಕಗಳಲ್ಲಿ ಕಾಣುವ ಯಾವ ಪಾಸಿಟಿವ್‌ ಶಕ್ತಿಗಳೂ ತಳಮಟ್ಟದಲ್ಲಿ ಕಾಣುತ್ತಿಲ್ಲ. ಹೀಗಾಗಿ ಹಿರಿಯ ಅನೇಕರಿಗೆ ಭ್ರಮನಿರಸನವಾಗುವುದು  ಸಹಜ. ಅವರನ್ನು ಬದಿಗೆ ಸರಿಸುವುದು  ಸಹಜವೇ, ಅವರೇ ಅಡ್ಡಿಯಾಗುವುದು ಸಹಜವೇ. ಏಷ್ಟೆಂದರೆ "ಅವರೇನೂ ಮಾಡಿಲ್ಲ..." ಎನ್ನುವಷ್ಟು ಬದಿಗೆ ತಳ್ಳುವುದು  ಸಹಜ ಪ್ರಕ್ರಿಯೆ. ಅಂತಹ ಮೌಲ್ಯಗಳು ಇಂದು ಬೆಳೆಯುತ್ತಿರುವ ಕಾರಣವೇ ಯಾರು ಟೀಕೆ ಮಾಡಿದರೂ ತಕ್ಷಣವೇ ಯಾರಿದಂಲೋ ಪ್ರತಿಕ್ರಿಯೆ ಕೊಡಿಸಬೇಕಾಗುತ್ತದೆ. ಯಾರಿಂದಲೋ ಮಣಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರತಿಕ್ರಿಯೆ ನೀಡಬೇಡಿ ಎಂದೂ ಹೇಳುವವರೂ ಇಲ್ಲದೇ ಇರುವುದೂ ಅದಕ್ಕೆ . ಏಕೆಂದರೆ ಈಗ ಅಧಿಕಾರ ಅಂದರೆ ಪವರ್‌ ಕೇಂದ್ರಿತ ವ್ಯವಸ್ಥೆ..!. ಇದರರ್ಥ ಆಂತರಿಕವಾದ ಮೌಲ್ಯಗಳ ಕುಸಿತ, ಬೌದ್ಧಿಕ, ವೈಚಾರಿಕ ವಿಷಯಗಳ ಕೊರತೆ, ಅಧಿಕಾರ ಕೇಂದ್ರಿತವಾದ ವ್ಯವಸ್ಥೆ, ಓಲೈಕೆಯ ಭಾಗ ಹೆಚ್ಚಾಗಿದೆ. 

ಈ ಬದಲಾವಣೆಯ ಪರ್ವಗಳು ಆರಂಭವಾಗಿ ಹಲವು ಸಮಯಗಳು ಆದವು. ಈಗ ಅದರ ಪರಮೋಚ್ಛ ಸ್ಥಿತಿಯಷ್ಟೇ. ಸುಮ್ಮನೆ ಗಮನಿಸಿದರೆ ಸಂಘವು ಎಂದೂ ಟೀಕೆಗಳಿಗೆ ಉತ್ತರಿಸುತ್ತಿದ್ದು ಕಡಿಮೆಯೇ. ಟೀಕೆಗಳಿಗೆ ಕಾರ್ಯದ ಮೂಲಕ ಉತ್ತರ ಸಿಗುತ್ತಿತ್ತು ಅಷ್ಟೇ. ಈಗ ಹಾಗಲ್ಲ, ವಿವಿಧ ವಿಭಾಗಗಳು ಇದ್ದರೂ ಅಧಿಕಾರ ಕೇಂದ್ರಿತವಾದ ವ್ಯವಸ್ಥೆಗಳು ಬಲಗೊಂಡಿವೆ. ಸಂಘದ ಅಂಗ ಎನಿಸಿದ ಬಿಜೆಪಿಯೇ ಇಂದು ಸಂಘವಾಗಿ ಕಾಣುತ್ತದೆ. ಸಂಘದ ವಿವಿಧ ಸಂಘಟನೆಗಳು ಇದ್ದರೂ ಸಹಕಾರ ಭಾರತಿ, ಬಿಜೆಪಿ ಮಾತ್ರವೇ ಸಂಘ ಎಂದು ಕಾಣುತ್ತದೆ, ಅಲ್ಲಿ ಅಧಿಕಾರ ಪಡೆಯುವುದೇ ಸರ್ವ ಶ್ರೇಷ್ಟ ಎಂದು ಅನಿಸಿದೆ. ಇದಕ್ಕಾಗಿ ಸಂಘದ ಯಾರನ್ನೋ ಓಲೈಕೆ ಮಾಡಲೇಬೇಕು ಎಂಬುದು ಸರ್ವ ವಿಧಿತವಾಗಿದೆ. ಸಂಘದ ಉಳಿದ ಯಾವ ವಿಭಾಗದಲ್ಲೂ ಕೆಲಸ ಮಾಡುವುದೇ ನಗಣ್ಯವಾಗಿ ಬಿಡುತ್ತಿದೆ. ಬಿಜೆಪಿ, ಸಹಕಾರ ಭಾರತಿಯಲ್ಲಿ ಕೆಲಸ ಮಾಡಿದವನು ಮಾತ್ರವೇ ಕಾರ್ಯಕರ್ತ ಎಂಬ ಮಟ್ಟಿಗೆ ಬಂದಿರುವುದು  ಈಗ ಬಹಿರಂಗ ಸಂಗತಿ. ಈ ಕಾರಣದಿಂದಲೇ ಇಂದು ಸೇವೆಗಿಂತಲೂ ಹೆಚ್ಚು ಓಲೈಕೆ ಎದ್ದು ಕಾಣುತ್ತದೆ. ಇದೆಲ್ಲಾ ಇವತ್ತು ಬಹುದೊಡ್ಡ ಪಾಸಿಟಿವ್‌ ಶಕ್ತಿಯೊಳಗೆ ನೆಗೆಟಿವ್‌ ಚಕ್ರಗಳು ಸುತ್ತುತ್ತಿವೆ.

 ಈ ಕಾರಣದಿಂದಲೇ ಇಂದು ಕುಮಾರಸ್ವಾಮಿಯವರ ಹೇಳಿಕೆಗೆ ಇನ್ನಿಲ್ಲದಂತೆ ಎದ್ದು ಬಿದ್ದು ಹೇಳಿಕೆ ನೀಡಲೇಬೇಕಾಗಿ ಬಂತೇನೋ ಎಂದು ಅನಿಸುತ್ತದೆ. ಹಾಗಿದ್ದರೆ ಮೂಲ ವಿಚಾರದಲ್ಲಿ ಪ.ಪೂ ಗುರೂಜಿ ಅವರು ," ಸಂಘಟನೆಯಲ್ಲಿ  ಅಹಂಕಾರ, ದರ್ಪ, ಒತ್ತಾಯ ಅಥವಾ ವ್ಯಕ್ತಿ ಪ್ರತಿಷ್ಟೆಗೆ ಅವಕಾಶವಿಲ್ಲ ಇವುಗಳಿಂದ ಸಂಘಟನೆಯಾಗುವುದಿಲ್ಲ. ವ್ಯಕ್ತಿಗತ ಅಭಿಮಾನದ ಲವಲೇಶವೂ ಇಲ್ಲದವರಿಂದಲೇ ಸಂಘಟನೆ ಕಟ್ಟಲು ಸಾಧ್ಯವಾಗುತ್ತದೆ" ಎಂದು ಹೇಳಿರುವುದಕ್ಕೆ ಅರ್ಥ ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆ. ಯಾವುದೇ ಕಾರ್ಯಕ್ರಮದ ಮೊದಲು ಓದುವ ಸುಭಾಷಿತ ಓದಲು ಮಾತ್ರವೇ ಸೀಮಿತವಾಗಿದೆ ಎನ್ನುವುದು  ಸುಳ್ಳಲ್ಲ.ಇವತ್ತು ಇಂತಹ ಹಲವು ನೆಗೆಟಿವ್‌ ಅಂಶಗಳು ಎದ್ದು ಕಾಣುವ ಕಾರಣದಿಂದಲೇ ತಳಮಟ್ಟದಲ್ಲಿ ಇತರೆಲ್ಲಾ ಸಂಘಟನೆಗಳಂತೆಯೇ ಎಲ್ಲಾ ವಿಭಾಗದಲ್ಲೂ ಒಬ್ಬನೇ ಕಾರ್ಯಕರ್ತ ಓಡಾಟ ಮಾಡುವ ಸ್ಥಿತಿ ಹೆಚ್ಚಾಗಿದೆ. ಅವನು ಭ್ರಷ್ಟಾಚಾರದಲ್ಲೂ, ಜಾತಿ ಸಂಘಟನೆಗಳಲ್ಲೂ , ಪಕ್ಷದಲ್ಲೂ, ಇತರ ಸಂಘಟನೆಯಲ್ಲೂ ಏಕ ವ್ಯಕ್ತಿ..!. ಇದು ಸಂಘಟನೆಯಲ್ಲಿಯೇ ಗೊತ್ತಿಲ್ಲದೆ ಆಗುತ್ತಿರುವ ಬದಲಾವಣೆ. 

ಹೀಗಾಗಿ ಹಿಂದೂ ಸಮಾಜದ ಅಡಿಪಾಯವನ್ನು ಬಲಪಡಿಸುವ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ರಾಜಕೀಯ  ಸವಾಲುಗಳನ್ನು ಎದುರಿಸುವ ಉದ್ದೇಶದಿಂದ  1925 ರಲ್ಲಿ ಸ್ಥಾಪಿಸಿದ ಆರ್‌ ಎಸ್‌ ಎಸ್‌ ಗೂ 2021 ರಲ್ಲಿ  ಕಾಣುವ ಆರ್‌ ಎಸ್‌ ಎಸ್‌ ಗೂ ಬದಲಾವಣೆ ಕಾಣುತ್ತದೆ. ಅಂದು ಭಗವಾಧ್ವಜದ ಹಿಂದೆ ಸಾಗಿ ವ್ಯಕ್ತಿಗಳು ಬದಲಾಗುತ್ತಾ ಇಂದು ವ್ಯಕ್ತಿಯ ಹಿಂದೆ ಗೊತ್ತಿಲ್ಲದೇ ತೆರಳುವ, ಗುಂಪುಗಳಾಗುವ ಹಂತ ಬಂದಿದೆ.ಇದಕ್ಕೆ ಕಾರಣ ಅಧಿಕಾರ ಹಾಗೂ ವ್ಯಕ್ತಿ ಪ್ರತಿಷ್ಟೆ.ಎಷ್ಟೆಂದರೆ ತಳಮಟ್ಟದಲ್ಲೂ ಜವಾಬ್ದಾರಿಯ ಹಂತಕ್ಕೆ ಬಂದಾಗ "ಅವನನ್ನು ಮಾಡಿ" "ಇವನನ್ನು ಬಿಡಿ" ಎಂದು ಹೇಳುವಷ್ಟು...!. ಹೀಗಾಗಿ ಈಗ ಗುಂಪುಗಳ ಸಂಖ್ಯೆ ಗೊತ್ತಿಲ್ಲದೆಯೇ ಹೆಚ್ಚಾಗಿದೆ.

ಇದರಿಂದಾಚೆ ಬಂದರೆ,

ಅಧಿಕಾರಗಳು ಲಭಿಸಲು ಆರಂಭವಾಯಿತು. ಅಂದಿನಿಂದಲೇ ಅಧಿಕಾರ ಕೇಂದ್ರಿತ ವ್ಯವಸ್ಥೆಗಳಾಗಿ ಮೂಲ ಸಂಗತಿಗಳು ಬದಲಾದವು. ಕೆಲವು ವರ್ಷದ ಹಿಂದೆ ಒಂದು ಪ್ರಮುಖ ದೇವಸ್ಥಾನದ ಆಡಳಿತ ಲಭ್ಯವಾಯಿತು. ಅಲ್ಲಿ ಸ್ವಚ್ಛ ಆಡಳಿತದ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಅಲ್ಲೊಂದು ಲೋಪ ಆಗಿತ್ತು. ಅದೊಂದು ಟೆಂಡರ್‌ ಪ್ರಕ್ರಿಯೆಯ ಸಂಗತಿ. ಆಗ ನಾನು ಪತ್ರಿಕೆಯಲ್ಲಿದ್ದೆ. ಪಕ್ಕಾ ಸ್ವಯಂಸೇವಕ. ಇತರ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ಪತ್ರಕರ್ತ. ಒಬ್ಬರು ಕೆಲವು ದಾಖಲೆ ತಂದು ತೋರಿಸಿದರು. ತಕ್ಷಣ ನಾನು ಸುದ್ದಿ ಮಾಡುವ ಬದಲು ಸಂಬಂಧಿತರ ಗಮನಕ್ಕೆ ತಂದು ಸುಮ್ಮನಾದೆ...!. ಆ ಸುದ್ದಿ ಸತ್ತು ಹೋಯಿತು. ಊರಿಗಿಡೀ ತಿಳಿಯಲೂ ಇಲ್ಲ...!. ಎಷ್ಟೆಂದೆರೆ ಆ ದಾಖಲೆ ನಾನು ಇರಿಸಿಕೊಳ್ಳಲೂ ಇಲ್ಲ...!. ಈ ಕಡೆ ಮಾಹಿತಿ ನೀಡಿದ ವ್ಯಕ್ತಿ ನನ್ನ ಮೇಲಿನ ನಂಬಿಕೆ ಕಳೆದುಕೊಂಡರು. 2021 ರಲ್ಲಿ ಇದನ್ನು ನೋಡಿದರೆ ಇಂತಹ ಹಲವು ಸಂಗತಿಗಳು ಕಾಣುತ್ತಿವೆ.....! 

ಇನ್ನೊಂದು ಸಂಗತಿ,  ಒಮ್ಮೆ ಒಬ್ಬರೊಂದಿಗೆ ಮಾತನಾಡುತ್ತಿದ್ದೆ. ಅವರು ನಾನು ಅತ್ಯಂತ ಗೌರವಿಸುವ ವ್ಯಕ್ತಿ. ಹಲವು ಸಂಗತಿಗಳು ಅವರು ಹೇಳಿದರೆ ಮುಗಿಯಿತು. ಏಕೆಂದರೆ ಅದರಲ್ಲಿ ಯಾವುದೇ ಕಲ್ಮಶವಿಲ್ಲ ಹಾಗೂ ಅದು ಸತ್ಯ ಅಂತಲೇ ನಂಬುತ್ತಿದ್ದೆ. ಏಕೆಂದರೆ ಆ ವ್ಯಕ್ತಿ ಅಷ್ಟೊಂದು ಪ್ರಾಮಾಣಿಕ.  ಅದೊಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಅವರು ಒಮ್ಮೆ ಹೀಗೆ ಮಾತನಾಡುತ್ತಾರೆ, " ಅವನು ನಮ್ಮನ್ನು ಬಿಟ್ಟರೆ ಏನೂ ಇಲ್ಲ. ಸಂಘಟನೆ ಅಂದರೆ ಹಾಗೇ, ಅವನನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ, ಅವನು ಹಾಗೆ... ನಾವು ಇವನನ್ನು ಹೊರಗೆ ಇರಿಸಿದ್ದೇವೆ, ಇವನು ಅನಗತ್ಯ ಪ್ರಶ್ನೆ ಮಾಡುತ್ತಾನೆ....  ಇತ್ಯಾದಿ ಸಂಗತಿಗಳನ್ನು ಹೇಳಿದರು. ಆ ಕ್ಷಣದಲ್ಲಿ ನಾನು ಹೌದು ಎಂದು ಒಪ್ಪಿಕೊಂಡೆ  ಏಕೆಂದರೆ ಆ ವ್ಯಕ್ತಿ ಅಂದು ಹಾಗೆಯೇ ಇದ್ದ ಕೂಡಾ  ಹಾಗೂ ನಾನೂ ಯಾವುದನ್ನೂ ಯೋಚಿಸದೇ ಅದನ್ನು ಅನುಸರಿಸಿದೆ ಕೂಡಾ. ಏಕೆಂದರೆ ಅವರು ನಿಲ್ಕಷ್ಮಶ ಎಂದು ಅಂದುಕೊಂಡಿದ್ದೆ....!  2021 ರಲ್ಲಿ ನಿಂತು ಆಲೋಚಿಸುವಾಗ , ಚಿಂತನೆಗಳಲ್ಲಿ  ವ್ಯತ್ಯಾಸ ಆದದ್ದು ಅರಿವಾಯಿತು, ಕಲುಷಿತವಾದ್ದು ಎಲ್ಲಿ ಎಂದು ಯೋಚಿಸುವಂತೆ ಮಾಡಿತು ಹಲವು ಸಂಗತಿಗಳು...!. 

 ಅಂತಹ ಹಲವು ಸಂಗತಿಗಳು ಇವೆ ನಾಳೆ ಬರೆಯುತ್ತೇನೆ. .........




 

09 ಅಕ್ಟೋಬರ್ 2021

ಆರ್‌ ಎಸ್‌ ಎಸ್‌ ಎನ್ನುವ ವ್ಯಕ್ತಿತ್ವ ವಿಕಸನ ಕೇಂದ್ರ | ಅದೊಂದು ಪಾಸಿಟಿವ್‌ ಕೇಂದ್ರ |


 ಕಳೆದ ಒಂದು ವಾರದಿಂದ ಪತ್ರಿಕೆ ತೆರೆದರೆ ಅಲ್ಲಲ್ಲಿ ಆರ್‌ ಎಸ್‌ ಎಸ್‌ ಬಗ್ಗೆ ಹೊಗಳಿಕೆ ಹಾಗೂ ಟೀಕೆಗಳು ಕಾಣುತ್ತಿವೆ. ಆರ್‌ ಎಸ್‌ ಎಸ್‌ ಒಳ ಹೋದರೆ ತಿಳಿಯುವುದು ಅದೊಂದು ವ್ಯಕ್ತಿತ್ವ ವಿಕಸನದ ಕೇಂದ್ರ. ಅದೊಂದು ಸಮಾಜಕ್ಕೂ, ವ್ಯಕ್ತಿಗೂ ಪಾಸಿಟಿವ್‌ ಶಕ್ತಿ ನೀಡುವ ಸಂಘಟನೆ. 

ಯಾವತ್ತೂ ಒಂದು ಸಂಘಟನೆಯ, ಒಂದು ವ್ಯಕ್ತಿಯ ಬಗ್ಗೆ ಯಾವುದೇ ಕಾರಣ ಇಲ್ಲದೆ  ಟೀಕೆ ಬರುವುದು  ಎರಡು ಕಾರಣಗಳಿಗೆ, ಒಂದೋ ಆ ಸಂಘಟನೆ ಅಥವಾ ವ್ಯಕ್ತಿ ಬಲಿಷ್ಟವಾಗಿ ಬೆಳೆಯುತ್ತಿದ್ದಾನೆ ಅಥವಾ ಬೆಳೆದಿದ್ದಾನೆ ಎಂದರ್ಥ. ಇದು  ದ್ವೇಷ ಭಾವನೆ ಕಾರಣ, ಈ ಕಾರಣದಿಂದ ಅನಗತ್ಯವಾಗಿ ಹಾಗೂ ಯಾವುದೇ ಕಾರಣ ಇಲ್ಲದೆ, ರಚನಾತ್ಮಕವಲ್ಲದೆಯೂ ಟೀಕೆಗಳು ಬರುತ್ತವೆ. ಆರ್‌ ಎಸ್‌ ಎಸ್‌ ಗೆ ಅಂತಹ ಯಾವ ಟೀಕೆಗಳ, ಹೊಗಳಿಕೆಗಳ ಅಗತ್ಯವೂ ಇಲ್ಲ. ಆ ಚಿಂತನೆಗಳು ಹಾಗೆಯೇ. ಯಾವ ಟೀಕೆಗೂ, ಯಾವ ತೆಗಳಿಕೆಗೂ ಬಗ್ಗೆಯೇ ಒಂದು ಸಂಘಟನೆ ಇಷ್ಟು ವರ್ಷಗಳ ಕಾಲ ಬೆಳೆದಿದೆ ಎಂದರೆ ಅದು ನಿರ್ಮಿಸಿದ ಸೇತುವೆ ಅಂತಹದ್ದೇ. ಯಾವ ಫಲಾಪೇಕ್ಷೆಯೂ ಇಲ್ಲದೆಯೇ ಅನೇಕರು ದುಡಿದಿದ್ದಾರೆ, ಬೆವರು ಹರಿಸಿದ್ದಾರೆ, ಮನೆ ಮಠ ತೊರೆದಿದ್ದಾರೆ. ಅನೇಕರು ಇದೇ ಸಂಘಟನೆಯಲ್ಲಿ  ದುಡಿಯುತ್ತಾ ಸ್ವಂತದ್ದೆಲ್ಲವೂ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸಂಘಟನೆಯ ಹಿಂದೆ ಅಪಾರ ಪರಿಶ್ರಮ ಇದೆ.

 ಟೀಕೆಗಳಿಗೆ, ನಮ್ಮನ್ನು  ನಿರ್ಲಕ್ಷ್ಯ ಮಾಡುವವರಿಗೆ  ಏನು ಮಾಡಬೇಕು ಎಂದು ಸಂಘದ ಹಿರಿಯರು ಅಂದೇ ಹೇಳಿದ್ದರು, ಯಾವುದೇ ಸುಳ್ಳು ಟೀಕೆಗಳಿಗೆ, ಅಪಪ್ರಚಾರಗಳಿಗೆ ಉತ್ತರ ನೀಡಬಾರದು. ಏಕೆಂದರೆ ಅಂತಹ ಟೀಕೆಗಳು ನಿಮ್ಮ ಸಾಧನೆಗಳನ್ನು ಅಡ್ಡಿ ಮಾಡಲೇ ಇರುವಂತಹದ್ದು. ಈಗ ನೀವು ಮಾಡಬೇಕಾದ್ದು ಎರಡು ಹೆಜ್ಜೆ ಮುಂದಿನ ಕೆಲಸ. ಇನ್ನಷ್ಟು ಕೆಲಸ ಮಾಡಿ ಅಷ್ಟೇ ಸಾಕು. ಟೀಕೆ ಮಾಡುವವನು ನಮಗೆ ಇನ್ನಷ್ಟು ಸಹಾಯ ಮಾಡುತ್ತಾನೆ, ಆತ ನಮ್ಮ ಹುಳುಕು ತೋರಿಸುವ ಕೆಲಸ ಮಾಡಲಿ. ನಾವು ಅದನ್ನೆಲ್ಲಾ ಸರಿ ಮಾಡೋಣ. ನಾವು ಇನ್ನಷ್ಟು ಪರಿಪೂರ್ಣ ವ್ಯಕ್ತಿಯಾಗೋಣ ಎನ್ನುವುದನ್ನು  ನಾನು ಕೇಳಿದ್ದೇನೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ನಾವು ಇನ್ನೂ ಪರಿಪೂರ್ಣರಾಗಬೇಕಿದೆ ಎಂದರ್ಥ, ಅದಕ್ಕಾಗಿ ಇನ್ನಷ್ಟು ಸಾಧನೆ ಮಾಡಿ ತೋರಿಸಬೇಕು. ಅದನ್ನು ಸದ್ದಿಲ್ಲದೆ ಮಾಡಿ, ಸಂಘಟನೆ ಮಾಡಿ ಎಂದಿದ್ದರು. ಆಗ ಇಡೀ ಸಮಾಜವೇ ಗಮನಿಸುತ್ತದೆ, ನಿಮ್ಮ ಶಕ್ತಿಯ , ಶ್ರಮದ ಪರಿಚಯವಾಗುತ್ತದೆ. ವಿರೋಧಿಗಳು ಇರಲಿ, ಮೌನವಾಗಿ ಎದುರಿಸಿ ಎಂದು ಧೈರ್ಯ ತುಂಬುವ, ಮನಸ್ಸಿಗೆ ಶಕ್ತಿ ನೀಡುವ, ಮನೋಬಲದ, ಆತ್ಮವಿಶ್ವಾಸ ಮಾತುಗಳು ಅಲ್ಲಿ ಸಿಗುತ್ತಿತ್ತು. ಈ ಕಾರಣಗಳಿಂದಲೇ ಸಂಘ, ನಿಜವಾದ ಸಂಘದ ಕಾರ್ಯಕರ್ತ ಎಲ್ಲಾ ಟೀಕೆಗಳಿಗೂ ಕಾರ್ಯದ ಮೂಲಕವೇ ಉತ್ತರಿಸುತ್ತಾರೆ.  ಹಾಗಂತ ಸುಳ್ಳುಗಳನ್ನು ಹೇಳಬೇಡಿ, ಅನ್ಯಾಯ, ಅನಾಚಾರ ಮಾಡಬೇಡಿ, ಸತ್ಯದ ದಾರಿಯಲ್ಲಿ  ನಡೆಯಿರಿ, ಗೆಲವು ನಮ್ಮದೇ, ಅದು ನಿಶ್ಚಿತ ಎಂದು ಹೇಳುತ್ತಿದ್ದರು.ಸತ್ಯ ಯಾವತ್ತೂ ಸೋಲುವುದಿಲ್ಲ, ಸುಳ್ಳುಗಳು ಹೆಚ್ಚು ಕಾಲ ಬದುಕುವುದಿಲ್ಲ, ಹೀಗಾಗಿ ಚಿಂತೆ ಬೇಡವೇ ಎಂದು ಭರವಸೆಯ ಮಾತುಗಳು ಸಂಘದಲ್ಲಿತ್ತು.  ಸಂಘದ ಒಂದು ಗಂಟೆಯ ಬೈಠಕ್‌ ಎಂದರೆ, ಸಂಘದ ಅಭ್ಯಾಸ ವರ್ಗ ಎಂದರೆ, ಸಂಘದ ಒಂದು ಗಂಟೆಯ ಚಟುವಟಿಕೆ ಎಂದರೆ ಅಲ್ಲಿ ರೀಫ್ರೆಶ್‌ ಮೆಂಟ್‌ ಖಚಿತ. ಆರಂಭದ ಒಂದು ಹಾಡು ಇಡೀ ದಿನ ಲೈವ್‌ ಇಡುತ್ತದೆ.  ಇಂತಹದ್ದರಿಂದಲೇ ಸಂಘ ಬೆಳೆದಿದೆ.

ಇಂದು ಯಾವುದೇ ಸಂಘಟನೆಗಳನ್ನು ಗಮನಿಸಿದರೂ ಒಂದೆರಡು ವರ್ಷದಲ್ಲಿ ಯಾವುದೋ ಇಗೋಗಳಿಗೆ ಬಲಿಯಾಗುತ್ತವೆ. ಹುಟ್ಟಿ ಸಾಯುತ್ತದೆ. ಕಾರಣ ಆ ಸಂಘಟನೆಯಲ್ಲಿ ಒಂದೇ ಮನಸ್ಥಿತಿಯಲ್ಲಿ ಕೆಲಸ ಮಾಡುವ ಮಂದಿ ಕಾಣದಾಗುತ್ತಾರೆ. ಈ ಎಲ್ಲಾ ಅಡೆ ತಡೆಗಳನ್ನೂ ದಾಟಿ ಈ ಸಂಘವು ಇಷ್ಟು ವರ್ಷಗಳ ಕಾಲ ಬೆಳೆದಿದೆ. ಇದಕ್ಕೆ ಮೂಲ ಕಾರಣ, ಆರಂಭದ ಆ ಚಿಂತನೆಗಳು. ಈ ಸಂಘಟನೆ ಯಾವತ್ತೂ ವ್ಯಕ್ತಿಯ ಹಿಂದೆ ಹೋಗಿ ಬೆಳೆದಿಲ್ಲ. ವ್ಯಕ್ತಿ ಶಾಶ್ವತವಲ್ಲ ಎಂದು ಇಂದಿಗೂ ಸಾರುವ ಆ ಚಿಂತನೆಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿಯ ಹಿಂದೆ ಬೆಳೆಯುವ ಸಂಘಟನೆಗಳು ಶಾಶ್ವತವೂ ಅಲ್ಲ ಎನ್ನುವುದೂ ಸತ್ಯ. ಏಕೆಂದರೆ ಆರ್‌ ಎಸ್‌ ಎಸ್‌ ನಂತಹ ಇನ್ನೊಂದು ಸಂಘಟನೆ ಈ ದೇಶಲ್ಲಿ ಇನ್ನೊಂದು ಬೆಳೆದಿಲ್ಲ, ಬೆಳೆಯಲು ಸಾಧ್ಯವೂ ಆಗಿಲ್ಲ.  

ಇಲ್ಲಿ ಭಗವಾಧ್ವಜವೇ ಗುರು, ಅದುವೇ ಸಾರ್ವಕಾಲಿಕ ನಾಯಕ. ಆ ತತ್ತ್ವದ ಅಡಿಯಲ್ಲಿಯೇ ಬೆಳೆದ ಸಂಘವು  ಸಮಾಜ, ಸೇವೆ, ಸಹಬಾಳ್ವೆ, ಸಮಾನತೆ, ವ್ಯಕ್ತಿತ್ವ ವಿಕಸನ , ಆತ್ಮಸ್ಥೈರ್ಯ, ಪೂರ್ವ ಚಿಂತನೆ, ಪ್ಲಾನ್‌ , ವೈಚಾರಿಕ ಚಿಂತನೆ ಇತ್ಯಾದಿಗಳೇ ಈ ಸಂಘಟನೆ ಬೆಳೆಯಲು ಪ್ರಮುಖ ಕಾರಣ. 

ಆರ್‌ ಎಸ್‌ ಎಸ್‌ ಶಾಖೆಗಳಿಗೆ ಹೋದಾಗಲೇ ಅಲ್ಲಿ ಇರುವ ವೈಚಾರಿಕ ಚಿಂತನೆ, ವ್ಯಕ್ತಿತ್ವ ವಿಕಸನದ ಚಿಂತನೆಗಳು ಕಾಣುತ್ತವೆ. ಎಲ್ಲರೂ ಜೊತೆಯಾಗುತ್ತಾ ಪರಸ್ಪರ ಸಹಕಾರಗಳು ವ್ಯಕ್ತಿಗೆ ಮಾನಸಿಕ ಧೈರ್ಯ ಹಾಗೂ ಶಕ್ತಿ ನೀಡುತ್ತವೆ. ಅನೇಕರು ಜಾತಿ ಆಧಾರಿತ ವ್ಯವಸ್ಥೆ ಎಂದು ಟೀಕಿಸುತ್ತಾರೆ, ಅಂತಹ ಜಾತಿಯ ವ್ಯವಸ್ಥೆ ಅದರೊಳಗೆ ಕಾಣುವುದಿಲ್ಲ. ಸಹಜವಾಗಿಯೇ ಚಿಂತನೆಯ ಆಧಾರಿತವಾಗಿ ಬೆಳೆಯುವ ಕಾರಣದಿಂದ ಚಿಂತಕರಿಂದಲೇ ಸಂಘಟನೆ ಮುಂದುವರಿಯುತ್ತದೆ. ಹಾಗಾಗಿ ಚಿಂತಕರ ಕೂಟ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ ಇಲ್ಲಿ.

ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಸಂಘಟನೆ. ಇಲ್ಲಿಗೆ ಯಾರೇ, ಯಾವುದೇ ವ್ಯಕ್ತಿ ಬರಲಿ. ಅವನಿಗೆ ಬೆಳೆಯುವ ಹಾಗೂ ಕಲಿಯುವ ಆಸಕ್ತಿ ಇದ್ದರೆ ಆತ ಸಹಜವಾಗಿಯೇ ಬೆಳೆಯುತ್ತಾ ಸಾಗುತ್ತಾನೆ, ಅನುಭವದ ಮಂಟಪವನ್ನು ಕಟ್ಟಿಕೊಳ್ಳುತ್ತಾನೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ನನ್ನ ಮನೆ, ನನ್ನ ಕುಟುಂಬ,ನನ್ನ ಗ್ರಾಮ, ನನ್ನ ರಾಜ್ಯ, ನನ್ನ ದೇಶದವರೆಗೆ ಚಿಂತನೆಗಳು ವಿಸ್ತಾರವಾಗುತ್ತದೆ. ಯಾರಿಗೇ ನೋವಾದರೂ ತಮಗೇ ನೋವಾದಷ್ಟು ಆ ಚಿಂತನೆಗಳು ಇದೆ. ನನ್ನ ಗ್ರಾಮ ಬೆಳವಣಿಗೆಗೆ ಏನೆಲ್ಲಾ ಮಾಡಬೇಕು ಎಂಬುದೂ ಕಲ್ಪನೆಯ ಆಧಾರದಲ್ಲಿ ಬೆಳೆಯುತ್ತದೆ.

ನನ್ನ ದೇಶದ ಕಲ್ಪನೆಯನ್ನು ನನ್ನೊಳಗೇ ಬಿತ್ತುವ ಆರ್‌ ಎಸ್‌ ಎಸ್‌ ಮೊದಲು ಕಲಿಸುವುದು ಯಾವುದೇ ಒಂದು ನಾಯಕತ್ವ ವಹಿಸುವಾಗ ಅದರ ಕನಸುಗಳನ್ನು. ನಾನು ಆ ಸಂಘಟನೆಯ ನಾಯಕತ್ವ ವಹಿಸಿಕೊಂಡರೆ ಏನು ಮಾಡಬೇಕು ಹಾಗೂ ಮಾಡಬಹುದು  ಎನ್ನುವುದನ್ನು  ಆರ್‌ ಎಸ್‌ ಎಸ್‌ ಮೂಲ ಚಿಂತನೆ ತಿಳಿಸಿಕೊಡುತ್ತದೆ. ಹೀಗಾಗಿಯೇ ಅಲ್ಲಿ ನಾಯಕರಿಗೆ ಕೊರತೆ ಇಲ್ಲ. ಪ್ರತೀ ವ್ಯಕ್ತಿಯೂ ಯಾವಾಗ ಬೇಕಾದರೂ, ಯಾವ ಸಂಘಟನೆಯಲ್ಲೂ ನಾಯಕತ್ವ ವಹಿಸಿಕೊಂಡರೆ ಅವರು ಸಮರ್ಥವಾಗಿ ವಿಚಾರ ಮಂಡಿಸಬಲ್ಲರು, ಮಾತನಾಡಬಲ್ಲರು ಕೂಡಾ. ಇದಕ್ಕಾಗಿಯೇ ಆರ್‌ ಎಸ್‌ ಎಸ್‌ ವ್ಯಕ್ತಿ ನಿರ್ಮಾಣದ ಕೇಂದ್ರ ಮಾತ್ರವಲ್ಲ ವ್ಯಕ್ತಿತ್ವ ರೂಪಿಸುವ ಕೇಂದ್ರ, ವ್ಯಕ್ತಿತ್ವ ವಿಕಸನದ ಕೇಂದ್ರ.

ಅನೇಕ ವರ್ಷಗಳ ಕಾಲ ವ್ಯಕ್ತಿತ್ವ ವಿಕಸನ, ವ್ಯಕ್ತಿ ನಿರ್ಮಾಣ ಮಾಡಿರುವ ಆರ್‌ ಎಸ್‌ ಎಸ್‌ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ , ಎಲ್ಲಾ ವಿಭಾಗದಲ್ಲೂ, ಎಲ್ಲಾ ಆಯಾಮದಲ್ಲೂ  ಬೆಳೆದಿದೆ. ಹೀಗಾಗಿ ಅದೊಂದು ಶಕ್ತಿ. 

ಅಂತಹ ಸಂಘಟನೆಯಲ್ಲಿ ಪ್ರಚಾರಕ್‌ ಆಗಿ ಸೇವೆ ಮಾಡುವ ಹಂತಕ್ಕೆ ತಲುಪಿ ನಂತರ ನನ್ನ ಅನಿವಾರ್ಯತೆಯಿಂದ ಹಿಂದೆ ಸರಿದ ಒಂದು  ಸಂದರ್ಭದಲ್ಲಿ ಸಂಘಟನೆಯ  ಹಿರಿಯರೊಬ್ಬರು ಅಂದು  ಹೇಳಿದ್ದರು, " ನೋಡು ಮಾರಾಯ, ನೀನು ಎಲ್ಲಾದರೂ ಇರು, ಒಮ್ಮೆ ಧ್ವಜ ಪ್ರಣಾಮ್‌ ಮಾಡಿದ ಮೇಲೆ ನೀನು ಸಂಘದ ಸ್ವಯಂ ಸೇವಕ. ನೀನು ಯಾವ ಕ್ಷೇತ್ರದಲ್ಲಿ ಇದ್ದಿಯೋ ಅಲ್ಲಿಯೇ ಕೆಲಸ ಮಾಡು, ಆದರೆ ಅದು ದೇಶಕ್ಕೆ, ನಿನ್ನ ಗ್ರಾಮದ ಅಭಿವೃದ್ಧಿ ದೃಷ್ಟಿ ಇರಲಿ ಅಷ್ಟೇ " ಎಂದು  ಎರಡು ಬಾರಿ ಹೇಳಿದ್ದರು. 

 ಇಂದು ಈ ಮೇಲಿನ ಸಾಲುಗಳೇ  ಹೆಚ್ಚು ಚರ್ಚೆಯಾಗುತ್ತಿರುವುದು. ಅನೇಕ ಅಧಿಕಾರಿಗಳು ಸಂಘಿಯ ಹಾಗೆ ಕಾಣುವುದು, ಅನೇಕ ಪತ್ರಕರ್ತರು ಬಲಪಂಥೀಯರ ಹಾಗೆ ಕಾಣುವುದು, ಅನೇಕ ಜನರು ಆರ್‌ ಎಸ್‌ ಎಸ್‌ ಎಂದು ಕಾಣುವುದು  ಇದೇ ಕಾರಣಕ್ಕೆ. ಹಾಗೆಂದು ಆ ಪಾಸಿಟಿವಿಟಿಯನ್ನು  ಬೆಳೆಸುವುದು ತಪ್ಪೋ ? ಸರಿಯೋ ಕಾಲದ ಚರ್ಚೆ. ಆದರೆ ಧ್ವಜ ಪ್ರಣಾಮ್‌ ಮಾಡಿದ ವ್ಯಕ್ತಿ, ತನಗೆ ಪಾಸಿಟಿವ್‌ ಚಿಂತನೆಗಳನ್ನು ಬಿತ್ತಿದ ಸಂಘಟನೆಯ ಬಗ್ಗೆ ಮಾತನಾಡುವುದು , ಅದರ ಪರವಾಗಿ ಒಂದು ಕ್ಷಣ ಯೋಚಿಸುವುದು ತಪ್ಪೋ ಸರಿಯೋ ಎಂಬುದೂ ಕಾಲಚ ಚರ್ಚೆ. ಆದರೆ ಆ  ಸಂಘಟನೆಯ ಮೂಲ ಚಿಂತನೆ ಎಂದಿಗೂ ತಪ್ಪಾಗಿಲ್ಲ, ಅದರಲ್ಲಿ ಲೋಪವಿದ್ದರೆ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಹಾಗಾಗಿಯೇ ಈ ಕಾಲದ ಚರ್ಚೆಗೆ ಉತ್ತರವಿಲ್ಲ.

ಸಂಘದ ಸುತ್ತಲಿನ ನನ್ನ ಅನುಭವದ ಬಗ್ಗೆ, ನಂಬರ್‌ ಬ್ಲಾಕ್‌ ಮಾಡಿದ ಬಗ್ಗೆ ನಾಳೆ ಬರೆಯುತ್ತೇನೆ......

17 ಸೆಪ್ಟೆಂಬರ್ 2021

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯದ ಮೂಲಕ ಶುಭಾಶಯ ತಿಳಿಸುವ ಕಾಲ ಇದು...!

  



ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮ ದಿನದ ಶುಭಾಶಯ. 

ಹಲವು ಕಾರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಮ್ಮೆ ಇರಬಹುದು. ಆದರೆ ಪ್ರಮುಖವಾದ ಎರಡು ಕಾರಣಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ  ಭಾರತದ ಕೀರ್ತಿಯನ್ನು  ಏರಿಸಿದ್ದು, ಕನಿಷ್ಟ ತಮ್ಮ ಸಂಪುಟ ಸಚಿವರಲ್ಲಿ  ಭ್ರಷ್ಟಾಚಾರ ನುಸುಳದಂತೆ ಮಾಡಿರುವುದು. ಭ್ರಷ್ಟಾಚಾರದಲ್ಲಿ  ಹಿಡಿತ ಸಾಧಿಸುವುದು ಅಷ್ಟು ಸುಲಭವಲ್ಲ. ತಾಂಡವಾಡುತ್ತಿದ್ದ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದೂ  ಸುಲಭದ ಮಾತಲ್ಲ. ಆರಂಭವಾದ ಹೆಜ್ಜೆ ಮುಂದುವರಿಯಬಹುದು.

ಸರಿ ಸುಮಾರು 8 ವರ್ಷಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ ಭಾರೀ ಚರ್ಚೆ ಆಗುತ್ತಿತ್ತು. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಗಲೇಬೇಕು, ಎಂದಲ್ಲ, ಆದರೆ ಅವರ ಇಮೇಜ್‌ ಉಳಿಯಬಹುದಾ ? ಈ ದೇಶದಲ್ಲಿ ಇದೆಲ್ಲಾ ಸಾದ್ಯ ಇದೆಯಾ? ಮೋದಿ ಅವರ ಕನಸು ಈಡೇರಬಹುದಾ ? ಗುಜರಾತ್‌ ಒಂದು ರಾಜ್ಯ, ಭಾರತದ ಒಂದು ದೇಶ. ಇಲ್ಲಿ ಒಮ್ಮೆಲೇ ಎಲ್ಲವೂ ಸಾಧ್ಯವೇ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರ ಒಂದು ಕಡೆ, ಅಭಿವೃದ್ಧಿಯ ಲಿಸ್ಟ್‌ ಇನ್ನೊಂದು ಕಡೆ . ಗುಜರಾತ್‌ ಮಾದರಿಯ ಅಭಿವೃದ್ಧಿ ಇಡೀ ದೇಶಕ್ಕೆ ಸಾಧ್ಯವೇ ಎಂಬುದು  ಅಲ್ಲಿ ನಡೆಯುತ್ತಿದ್ದ ಚರ್ಚೆ. ನರೇಂದ್ರ ಮೋದಿ ಅವರ ಬಗ್ಗೆ ಅಂದು ಆ ಮಾದರಿಯ ಚರ್ಚೆ ಹಳ್ಳಿ ಹಳ್ಳಿಯಲ್ಲಿ  ನಡೆಯುತ್ತಿತ್ತು. ಕೊನೆಗೆ ಬಂದ ಅಭಿಪ್ರಾಯ, ಎಲ್ಲಾ ಡೆವಲೆಪ್ಮೆಂಟ್‌ ಸಾಧ್ಯವಿದೆ. ಎಲ್ಲವೂ ಸರಕಾರದ ಪಾಲಿಸಿಯಿಂದ ಸಾಧ್ಯವಿದೆ, ನರೇಂದ್ರ ಮೋದಿ ಅವರು ಅದನ್ನು ಮಾಡುತ್ತಾರೆ , ಅವರಿಗೆ ಸಾತ್‌  ನೀಡುವ ದೊಡ್ಡ ಕಾರ್ಯಕರ್ತರ ಪಡೆ ಇದೆ, ಅದು ಹಳ್ಳಿ ಹಳ್ಳಿಯವರೆಗೂ ಇದೆ. ಅವರೊಂದು ಟೀಂ ಮಾಡಿದ್ದಾರೆ, ಆ ಟೀಂ ಸೈಲೆಂಟಾಗಿ ಹಳ್ಳಿಯವರೆಗೂ ಇದೆ. ಅವರು ಎಲ್ಲಾ ಫೀಡ್‌ ಬ್ಯಾಕ್‌ ಕೊಡುತ್ತಾರೆ. ಅವರು ಯಾರು ಅಂತಲೇ ಗೊತ್ತಿಲ್ಲ...! ಹೀಗೆಲ್ಲಾ ಚರ್ಚೆ ನಡೆಯಿತು. ಅಂದರೆ ಅಷ್ಟೂ ಪ್ರಮಾಣದ ವಿಶ್ವಾಸ ನರೇಂದ್ರ ಮೋದಿ ಅವರಿಂದ ತೊಡಗಿ ಹಳ್ಳಿ ಆ "ಅನಾಮಧೇಯ" ಕಾರ್ಯಕರ್ತನವರೆಗೂ ಇತ್ತು.

ಮುಂದೆ ಹಳ್ಳಿ ಹಳ್ಳಿ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂಬ ಬ್ಯಾನರ್‌ ರಾರಾಜಿಸಿತು, ಸೋಶಿಯಲ್‌ ಮೀಡಿಯಾದಲ್ಲಿ ಹಲವು ಪೋಸ್ಟ್‌ ಗಳು ಬಂದವು. ಚುನಾವಣೆ ಕಳೆದಾಗ ಇತಿಹಾಸದಲ್ಲಿ  ಮೊದಲ ಬಾರಿ ಬಿಜೆಪಿ ಮೆಜಾರಿಟಿ ಪಕ್ಷವಾಯಿತು. ವ್ಯಕ್ತಿ ಆಧಾರಿತವಾಗಿ ಮೊದಲ ಬಾರಿಗೆ "ಬಿಜೆಪಿ" ಗೆದ್ದಿತು.  ಆ ಬಳಿಕ ವಿವಿಧ ಸವಾಲುಗಳನ್ನು ಉತ್ಯುತ್ಸಾಹದಿಂದ ಪ್ರಧಾನಿಗಳು ಮೆಟ್ಟಿ ನಿಂತರು. ದೇಶಕ್ಕೆ ದೇಶವೇ ಬೆರಗಾಯಿತು. ಒಂದು ಕಾಲದಲ್ಲಿ  ಅಮೇರಿಕಾ ತಮ್ಮ ದೇಶಕ್ಕೆ ಮೋದಿ ಬರುವುದು  ಬೇಡ ಎಂದಿದ್ದ ದೇಶವೇ ರೆಡ್‌ ಕಾರ್ಪೆಟ್‌ ಹಾಸಿತು. ಯಾವಾಗ ಬರುತ್ತೀರಿ ಎಂದು ಕರೆಯಿತು. 

ಎಲ್ಲಾ ದೇಶಗಳನ್ನೂ ಸುತ್ತಾಡಿದ ಮೋದಿ ಅವರು ವಿಶ್ವ ಮಟ್ಟದಲ್ಲಿ ದೇಶವನ್ನು  ಗಮನಸೆಳೆದರು. ಭಾರತ ವಿಶ್ವಗುರುವತ್ತ ಸಾಗಿತು.  ಮೋದಿ ಅವರ ಕನಸಿನ ಬಗ್ಗೆ ಒಂದು ಕಡೆ ದಾಖಲಾಯಿತು, ಭಾರತ ವಿಶ್ವಗುರುವಾಗಬೇಕು, ಪ್ರತೀ ಹಳ್ಳಿಯೂ ವಿಶ್ವಗುರುವಾಗಬೇಕು ". ಅಂದರೆ ಇದರ ಅರ್ಥ ಈ ದೇಶದ ಪ್ರತೀ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು.

ಜೊತೆಗೇ ಭ್ರಷ್ಟಾಚಾರ ಮುಕ್ತವಾಗಲು ಪಣ ತೊಟ್ಟರು, ತನ್ನ ಸಂಪುಟದಿಂದಲೇ ಇದನ್ನು ಆರಂಭ ಮಾಡಿದರು, ಭ್ರಷ್ಟಾಚಾರ ಇರುವ ಮಂದಿಯನ್ನು ಹತ್ತಿರ ಸುಳಿಯಲು ಬಿಡಲಿಲ್ಲ, ಈ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಿದರು, ಪ್ರತೀ ವ್ಯಕ್ತಿಯೂ ಭ್ರಷ್ಟಾಚಾರ ಮುಕ್ತವಾಗಲಿ ಎಂದರು. 

ಪ್ರತೀ ಹಂತದಲ್ಲೂ ದೇಶದ ಪ್ರತೀ ವ್ಯಕ್ತಿಗೂ ಸಂದೇಶ ನೀಡುತ್ತಲೇ ಹೋದ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ನಂಬರ್‌ ವನ್‌ ನಾಯಕ ಎನಿಸಿದರು. ದೇಶಕ್ಕೆ ದೇಶವೇ ಕೊಂಡಾಡಿತು.

ಅನೇಕ ಕಂಪನಿಗಳಿಗೆ ಮನೆ ಹಾಕಿದರು ಎಂದು ಟೀಕೆಗಳು ಬಂದಿತು. ಈ ದೇಶದ ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಇರುವಾಗ ಸಹಜವಾಗಿಯೇ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಇದೇ ದೇಶದ ಮಂದಿಯ ಸಹಕಾರ ಪಡೆಯುವುದರಲ್ಲಿ  ತಪ್ಪಿಲ್ಲ ಅಂತಲೇ ಭಾವಿಸಲಾಯಿತು. ಇಷ್ಟೂ ವರ್ಷದ ವ್ಯವಸ್ಥೆಯನ್ನು ಕೇವಲ  5  ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬುದೂ ವಾಸ್ತವ ಸಂಗತಿಯೇ ಹೌದು. ಅದನ್ನೂ ಒಪ್ಪಿಕೊಳ್ಳಬೇಕಾದ್ದೇ. 

ಎರಡನೇ ಚುನಾವಣೆಯೂ ಹತ್ತಿರ ಬಂತು. ಈ ಬಾರಿ ದೇಶದ ಜನಕ್ಕೆ ಕರೆ ನೀಡಿದರು, ಪ್ರತೀ ವ್ಯಕ್ತಿಯೂ ಚೌಕೀದಾರ್‌ ಆಗಿ ಎಂದರು. ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬನೆ ಅಗತ್ಯ ಅದಕ್ಕಾಗಿ ಆತ್ಮನಿರ್ಭರ ಭಾರತ ಎಂದರು, ಕೃಷಿ ಆದಾಯ ದ್ವಿಗುಣ ಆಗಬೇಕು ಎಂದರು.. ಹೀಗೇ ಒಂದಷ್ಟು ಕನಸುಗಳನ್ನು ಎರಡನೇ ಬಾರಿ ಬಿತ್ತಿದರು.

ಆದರೆ ಈ ಬಾರಿ ಮಾತ್ರಾ ಆಶಾದಾಯಕ ಬೆಳವಣಿಗೆಗಳು ನಿಧಾನವಾದವು.

ಚೌಕೀದಾರ್‌ ಎಂದು ಗ್ರಾಮೀಣ ಭಾಗಗಳಲ್ಲಿ ನಡೆದ ಭ್ರಷ್ಟಾಚಾರಗಳನ್ನು  ವಿರೋಧ ಮಾಡಿದರೆ ಅವರದೇ ಪಕ್ಷದ ಮಂದಿ ವಿರೋಧಿ ಎಂದು ಕರೆಯುವುದು  ಮಾತ್ರವಲ್ಲ, ಕೇಸು ಹಾಕಿಸಿದರು..!. ಗ್ರಾಮೀಣ ರಸ್ತೆಯೊಂದು ಕಳಪೆಯಾದ್ದಕ್ಕೆ ಅದೇ ಪಕ್ಷದ ಕಾರ್ಯಕರ್ತ ವಿರೋಧ ಮಾಡಿದರು, ಆಗ ಅವರದೇ ಪಕ್ಷದ ಮುಖಂಡರು ಗುತ್ತಿಗೆದಾರನ ಪರ ನಿಂತರು..!

ಆತ್ಮನಿರ್ಭರ ಭಾರತ ಎನ್ನುತ್ತಾ ಕೆಲವು ಕಾರ್ಯಗಳ ಮೂಲಕ ದಾಖಲೆಗಳನ್ನು ಸೃಷ್ಟಿಸಿದರು, ಜನಸಾಮಾನ್ಯನಿಗೆ ಬಹುಪಾಲು ಯೋಜನೆಗಳು ಸಿಗದಾಯಿತು. ಗ್ರಾಮೀಣ ಭಾಗದ ರಸ್ತೆ, ಸೇತುವೆ, ನೆಟ್ವರ್ಕ್‌ ಇತ್ಯಾದಿಗಳು ಇಂದಿಗೂ ಪ್ರಧಾನಿಗಳ ಕನಸಿನ ಮಾತಾಯಿತು. ಕೇಳಿದರೆ, ಇಷ್ಟೂ ವರ್ಷಗಳಲ್ಲಿ ಆಗದ್ದು 8 ವರ್ಷಗಳಲ್ಲಿ ಆದೀತಾ ಎಂದರು...!. 

ಕೇಳಿದರೆ, ಕೃಷಿ ಆದಾಯ ದ್ವಿಗುಣ ಎಂದರು, ಕೃಷಿ ಅಭಿವೃದ್ಧಿ ಬಗ್ಗೆ ಮಾತನಾಡಿದರೆ, ಅದು ಸಾಧ್ಯವಿಲ್ಲ ಎಂದರು.

ಇದೆಲ್ಲಾ ಸಂಗತಿಗಳು ಪ್ರಧಾನಿಗಳು ತಲುಪುತ್ತಾ ಇಲ್ಲವೋ ಗೊತ್ತಿಲ್ಲ. ಆದರೆ ಈಚೆಗೆ ಆ ಬೆಳವಣಿಗೆ ಅಪಾಯಕಾರಿಯಾಗಿ ಸಾಗುತ್ತಿದೆ. ಇದಕ್ಕೆ ಸರಿಯಾಗಿಯೇ ಈಡೀ ದೇಶದಲ್ಲಿ ಸರಿಯಾದ, ರಚನಾತ್ಮಕವಾಗಿ ಮಾತನಾಡುವ ವಿರೋಧ ಪಕ್ಷವೂ ಕಾಣುತ್ತಿಲ್ಲ. ಇದೆಲ್ಲಾ ಈಚೆಗೆ ಈ ದೇಶದ ಜನರಿಗೇ ಸಮಸ್ಯೆಯಾಗುತ್ತಿರುವುದು  ಸುಳ್ಳಲ್ಲ.

ಈಚೆಗೆ ಗ್ರಾಪಂ ಚುನಾವಣೆ, ಸಹಕಾರಿ ಸಂಘದ ಚುನಾವಣೆಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ, ಅವರ ಹೆಸರೇ ಮಾತನಾಡುತ್ತದೆ. ಆಯಾ ಪಂಚಾಯತ್‌ ಮಟ್ಟದಲ್ಲಿನ ಒಬ್ಬನೇ ಒಬ್ಬ ಅವರದೇ ಪಕ್ಷದ ನಾಯಕನ ಕೆಲಸ ಸದ್ದು ಮಾಡುವುದಿಲ್ಲ. ಅದರ ಬದಲಿಗೆ ಗುತ್ತಿಗೆಗಳು ಮಾತನಾಡುತ್ತವೆ, ಭ್ರಷ್ಟಾಚಾರಗಳು ಸದ್ದು ಮಾಡುತ್ತವೆ, ಪಕ್ಷದೊಳಗಿನ ಅಸಮಾಧಾನಗಳು, ಜಾತಿಗಳು ಮಾತನಾಡುತ್ತವೆ. ಇದು ತಪ್ಪಾಗುತ್ತಿದೆ ಎಂದು ಹೇಳುತ್ತಲೇ ಅಂತಹವರ ನಂಬರ್‌ ಗಳು ಬ್ಲಾಕ್‌ ಆಗುತ್ತವೆ. ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತನಾಡುತ್ತಲೇ ವಿರೋಧಿಗಳಾಗುವುದು  ಮಾತ್ರವಲ್ಲ ಅಂತಹವರ ಬಗ್ಗೆಯೇ ನೆಗೆಟಿವ್‌ ಅಭಿಪ್ರಾಯ ಸೃಷ್ಟಿ ಮಾಡಲಾಗುತ್ತದೆ. ವ್ಯಕ್ತಿ ಆಧಾರಿತವಾಗಿ ಯಾವುದೇ ವ್ಯವಸ್ಥೆ ಇರುವಾಗ ಎಲ್ಲಿ ಮಾತನಾಡಿದರೂ ಪರಿಹಾರ ಕಾಣದು. ಅದು ತಲುಪಬೇಕಾದಲ್ಲಿ ತಲುಪಿದರೂ ಪರಿಹಾರ ಕಾಣುವುದಿಲ್ಲ. ಏಕೆಂದರೆ ವ್ಯವಸ್ಥೆ ಶಿಥಿಲದ ಭಾಗ ಅದು.

ಇಂದು ಪ್ರಧಾನಿಗಳ ಹುಟ್ಟುಹಬ್ಬ, ಅವರಿಗೆ ಶುಭಾಶಯದ ಸುರಿಮಳೆಯೇ ಕಾಣುತ್ತದೆ. ಈ ಶುಭಾಶಯಗಳು ಗ್ರಾಮಮಟ್ಟದಲ್ಲಿ  ಕೆಲಸವಾಗಿ ಕಾಣಬಹುದೇ ? ಗ್ರಾಮಮಟ್ಟದಲ್ಲಿ  ಒಬ್ಬ ಅಂತಹ ನಾಯಕ ಸೃಷ್ಟಿಯಾಗಬಲ್ಲನೇ ? ಭ್ರಷ್ಟಾಚಾರದ ಸುಳಿವೇ ಇರದ ವ್ಯಕ್ತಿ ಕಾಣಬಲ್ಲನೇ ? ಹೀಗಾದರೆ ಪ್ರಧಾನಿಗಳಿಗೆ ಸಲ್ಲಿಸುವ ಶುಭಾಶಯ ಹೆಚ್ಚು ಪವರ್‌ ಫುಲ್‌ ಆಗಿರುತ್ತದೆ. ಇಲ್ಲವಾದರೆ ಬಾಯಿ ಮಾತಿನ ಶುಭಾಶಯವಷ್ಟೇ...!.